- ಡಾ.ಅಶೋಕ ದೊಡ್ಮನಿ ಜೇವರ್ಗಿ
ಕಲಬುರಗಿ: ಕೇವಲ ಹಣ ಖರ್ಚು ಮಾಡಿ ಅದರಲ್ಲಿ ಬರುವ ಪರ್ಸೆಂಟೆಜ್ ತೆಗೆದುಕೊಂಡರೆ ಸಾಲದುˌ ಪರಿಣಾಮಕಾರಿ ಅನುಷ್ಠಾನ ಕೂಡ ಬಹಳ ಮುಖ್ಯ ಎಂಬುವುದನ್ನು ಕೆಕೆಆರ್ಡಿಬಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಬುದ್ಧಿ ಹೇಳಿದೆ.
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಳ್ಳುವುದರ ಮೂಲಕ ಹಿಂದುಳಿದ ಹಣೆಪಟ್ಟಿಯನ್ನು ಹಾಗೆ ಉಳಿಸಿಕೊಂಡಿದೆ. ಶೇ 100ರಷ್ಟು ಸಾಧನೆ ಮಾಡುವ ಉದ್ದೇಶದಿಂದ ‘ಅಕ್ಷರ ಆವಿಷ್ಕಾರ ಮಿಷನ್–100’ ಎಂಬ ವಿನೂತನ ಯೋಜನೆ ಪ್ರಯೋಗಿಸಿದ್ದ ಕೆಕೆಆರ್ ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಕಕ ಭಾಗದ ಶೈಕ್ಷಣಿಕ ಸುಧಾರಣೆಗೆ 652 ಕೋಟಿ ಅದರಲ್ಲಿ ಜೇವರ್ಗಿ ಒಂದೇ ತಾಲ್ಲೂಕಿಗೆ 100 ಕೋಟಿ ರೂ. ಕೆಕೆಆರ್ ಡಿಬಿಯಿಂದ ಖರ್ಚು ಮಾಡಿದ್ದರೂ ಕೂಡ ಸಾಧನೆ ಕಳಪೆಮಟ್ಟದ್ದಾಗಿದೆ.
ನನ್ನ ಮತಕ್ಷೇತ್ರ ಜೇವರ್ಗಿಯಲ್ಲಿಯೂ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಜಾರಿಗೆ ತಂದ ಯೋಜನೆ ಮೊದಲ ವರ್ಷ ನಿರೀಕ್ಷಿತ ಫಲ ನೀಡದೆ ಹೋದರೂ ಮುಂದಿನ ವರ್ಷಗಳಲ್ಲಿ ನಾವು ನಿರೀಕ್ಷೆಯಂತೆ ಫಲ ನೀಡಿದೆ. ಅದೇ ರೀತಿ ಬರೋ ದಿನಗಳಲ್ಲಿ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಲೇಬೇಕಾಗಿದೆ. ಗುರಿ ಮುಟ್ಟುವವರೆಗೂ ನಾವು ಈ ಅಭಿಯಾನ ಮುದುವರಿಸಬೇಕಿದೆ. ಡಾ. ಅಜಯಸಿಂಗ್, ಶಾಸಕರು, ಅಧ್ಯಕ್ಷರು ಕೆ.ಕೆ.ಆರ್.ಡಿ.ಬಿ
‘ನಿಧಾನ ಗತಿಯಲ್ಲಿ ಕಲಿಯುವ ಮಕ್ಕಳಿಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಅವರನ್ನೂ ಸುಧಾರಿತ ಫಲಿತಾಂಶ ಪಡೆಯುವಂತೆ ಮಾಡುವುದು ಇದರ ಉದ್ದೇಶ ಆವಿಷ್ಕಾರ ಯೋಜನೆಯಲ್ಲಿತ್ತು. ಪ್ರತಿ ವರ್ಷ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳು 25ರಿಂದ 30 ಸ್ಥಾನಗಳಲ್ಲೇ ಬರುತ್ತಿವೆ. ಇದನ್ನು ಸುಧಾರಣೆ ಮಾಡಲು ಗಂಭೀರ ಪ್ರಯತ್ನ ನಡೆದಿತ್ತು. ಮುಂದಡಿಯಾಗಿ ಜೇವರ್ಗಿ ವಿಧಾನಸಭಾ ಕ್ಷೇತ್ರದ ಶಾಲೆಗಳಲ್ಲಿ ಈ ವಿನೂತನ ಮಿಷನ್ ಪ್ರಯೋಗ ಮಾಡಿ, ನಂತರದ ದಿನಗಳಲ್ಲಿ ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಿಗೂ ವಿಸ್ತರಿಸಲಾಗಿತ್ತು.
‘ಅಕ್ಷರ ಆವಿಷ್ಕಾರ ಮಿಷನ್ ಅನ್ನು ನಿವೃತ್ತ ಪ್ರಾಧ್ಯಾಪಕ, ಬೆಂಗಳೂರಿನ ನಾಗರಾಜಯ್ಯ ಅವರ ಪ್ರಯೋಗಿಸಿದ್ದರು. ಕಲಬುರ್ಗಿ ಜಿಲ್ಲೆಯಲ್ಲಿಯೂ ಇಂಥದ್ದೇ ಪ್ರಯೋಗದ ಮೂಲಕ ಫಲಿತಾಂಶ ಸುಧಾರಣೆ ಮಾಡಬೇಕು ಎಂಬ ಉದ್ದೇಶದಿಂದ ಪ್ರಾರಂಭಿಸಲಾಗಿತ್ತು.
ಶಿಕ್ಷಣ ಇಲಾಖೆ ಹಾಗೂ ಧರ್ಮಸಿಂಗ್ ಫೌಂಡೇಷನ್ ಆಶ್ರಯದಲ್ಲಿ ಮಾಡಲಾಗಿದೆ ಎಂದು ಹೇಳಲಾಗಿತ್ತು ಆದರೆ ಈ ಬಾರಿ ಮತ್ತೆ ಶೈಕ್ಷಣಿಕ ಕ್ಷೇತ್ರ ಕಳಪೆ ಸಾಧನೆ ನೋಡಿದರೆ ಅಷ್ಟೂ ಹಣ ನೀರು ಪಾಲಾದಂತೆ ಎನ್ನಬೇಕಾಗುತ್ತದೆ.
ಶಿಕ್ಷಕರ ನಿರಂತರ ಪ್ರಕ್ರಿಯೆಗಳು, ನಿರಾಸಕ್ತಿˌ ಎಲ್ಲವನ್ನು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿದೆಯೇ ಎಂಬುವುದನ್ನು ತಿಳಿಯುವ ಗೋಜಿಗೆ ಯಾರೂ ಹೋಗಲಿಲ್ಲ. ಕೇವಲ ಹಣ ಖರ್ಚು ಮಾಡಿ ಕೈತೊಳೆದುಕೊಂಡಿದೆ. ಅಲ್ಲದೆ ಎಲ್ಲ ಕ್ಷೇತ್ರದಲ್ಲಿಯೂ ದುಡ್ಡು ಹೊಡೆಯುವ ರಾಜಕಾರಣಿಗಳ ದಂಡು ಇರುವುದರಿಂದ ಈ ಭಾಗದಲ್ಲಿ ಇದು ಸಾಧ್ಯವಾಗಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಕಕ ಭಾಗದಲ್ಲಿ ಮತ್ತು ತಾಲ್ಲೂಕಿನಲ್ಲಿ ಯಾವುದೇ ತರಬೇತಿ ಶಿಬಿರˌ ಕಲಿಕಾ ವಾತಾವರಣ ನಿರ್ಮಾಣ ಮಾಡಿಲ್ಲ. ಇದು ಫಲಿತಾಂಶದ ಮೇಲೆ ಪ್ರಭಾವ ಬೀರಿದೆ.