ಕಲಬುರಗಿ: ಬಿಜೆಪಿ, ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳಲ್ಲಿ ಸಣ್ಣ ಸಣ್ಣ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸದೆ, ಕೇವಲ ಮತಬ್ಯಾಂಕ್ಗೆ ಬಳಸಿಕೊಂಡು ರಾಜಕೀಯ ಸ್ಥಾನಮಾನಗಳಿಂದ ವಂಚಿತಗೊಳಿಸುವುದು ಎಷ್ಟರ ಮಟ್ಟಿಗೆ ಸರಿ? ರಾಜಕೀಯ ಪಕ್ಷಗಳಲ್ಲಿ ಏನಾದರೂ ಸಾಮಾಜಿಕ ನ್ಯಾಯ ಇದ್ದಿಯೇ? ಎಂದು ಜಿಲ್ಲಾ ವಿಶ್ವಕರ್ಮ ಸಮಾಜದ ಹೋರಾಟ ಸಮಿತಿ ಅಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ್ ಪ್ರಶ್ನಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಪೂರೈಸಿದ್ದು, ಆದರೆ ಸಣ್ಣ ಸಣ್ಣ ಜಾತಿ ಸಮುದಾಯಗಳಿಗೆ ನಿಗಮ ಮಂಡಳಿ ನೇಮಕಾತಿಯಲ್ಲಿ ಪರಿಗಣನೆಗೆ ತೆಗೆದುಕೊಂಡಿಲ್ಲ. ಅದೇ ರೀತಿ ಹಿಂದಿನ ಬಿಜೆಪಿ ಸರ್ಕಾರ ಇದ್ದಾಗಲೂ ಅಸಂಘಟಿತ ಸಮುದಾಯಗಳಿಗೆ ರಾಜಕೀಯ ಸ್ಥಾನಮಾನಗಳಿಂದ ದೂರ ಇಡಲಾಗಿದೆ. ಕೇವಲ ಚುನಾವಣೆ ಬಂದಾಗ ಹಿಂದುಳಿದ ವರ್ಗಗಳು, ಸಾಮಾಜಿಕ ನ್ಯಾಯ ತತ್ವದ ಬಗ್ಗೆ ಭಾಷಣ ಬೀಗಿಯುವ ರಾಜಕಾರಣಿಗಳು, ಪಕ್ಷಗಳು ಅಧಿಕಾರಕ್ಕೆ ಬಂದಾಗ ಮರೆತುಬಿಡುವುದೇ ಆಗಿದೆ?
ಅಲ್ಲದೆ ವಿಧಾನಸಭಾ ಮತ್ತು ಲೋಕಸಭಾ, ವಿಧಾನಪರಿಷತ್ ಚುನಾವಣೆಗಳಲ್ಲಿ ಕೋಲಿ, ಕುರುಬ, ವಿಶ್ವಕರ್ಮ, ಗಾಣಿಗ, ಕಂಬಾರ, ಕುಂಬಾರ, ಮಡಿವಾಳ, ಉಪ್ಪಾರ ಮತ್ತಿತರರ ಸಣ್ಣ ಸಮುದಾಯಗಳಿಗೆ ಟಿಕೆಟ್ ನೀಡಿ ಕಣಕ್ಕೆ ಇಳಿಸಿರುವುದು ಬಹುತೇಕ ವಿರಳ. ಹೀಗಾಗಿ, ಮುಂಬರುವ ಜಿಪಂ, ತಾಪಂ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಣ್ಣ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಿ ಟಿಕೆಟ್ ನೀಡಬೇಕು ಎಂದು ಎಲ್ಲ ರಾಜಕೀಯ ಪಕ್ಷಗಳಿಗೆ ಆಗ್ರಹಿಸಿದ್ದಾರೆ.