ಕಲಬುರಗಿ: ಈ ಜಗತ್ತು ಸುಂದರವಾಗಿರಬೇಕಾದರೆ ಮತ್ತು ಸಮಾಜದಲ್ಲಿ ಸಮಾನತೆ ಬರಬೇಕು ಎಂಬ ಮೂಲ ಉದ್ದೇಶದಿಂದ ಗೌತಮ ಬುದ್ಧ ತನ್ನ ಇಡೀ ಸರ್ವಸ್ವವನ್ನು ಬಿಟ್ಟು ಮಾನವೀಯ ಮೌಲ್ಯಗಳನ್ನೊಳಗೊಂಡಿರುವ ವೈಚಾರಿಕತೆಯಿಂದ ಕೂಡಿರುವ ಬೌದ್ಧ ದರ್ಮವನ್ನು ಸ್ಥಾಪಿಸಿದರು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದಲ್ಲಿ ಗುರುವಾರ ಜರುಗಿದ ಬುದ್ಧ ಪೂರ್ಣಿಮೆಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಮಾತನಾಡಿದ ಅವರು, ಬುದ್ಧ, ಬಸವ, ಡಾ. ಅಂಬೇಡ್ಕರ್ ಸೇರಿದಂತೆ ಇನ್ನಿತರ ಮಹಾತ್ಮರ ಮೇಲೆ ನಾವೆಲ್ಲರೂ ಅಭಿಮಾನ ಮಾತ್ರ ಇಟ್ಟುಕೊಂಡಿದ್ದೇವೆ. ಆದರೆ ಅವರ ವಿಚಾರಗಳು ಮತ್ತು ಅವರಲ್ಲಿನ ಜ್ಞಾನ ಮಾತ್ರ ನಾವುಗಳು ಅಳವಡಿಸಿಕೊಳ್ಳುತ್ತಿಲ್ಲ. ಹಾಗಾಗಿ ಇಂಥ ಮಹಾನ್ ಮತ್ತು ಶ್ರೇಷ್ಠ ಚಿಂತಕರ ಚಿಂತನೆಗಳನ್ನು ಇಂದು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಜಿಲ್ಲಾ ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕ ಅಜಯಕುಮಾರ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ, ಪ್ರಮುಖರಾದ ರಾಜೇಂದ್ರ ಮಾಡಬೂಳ, ಎಂ ಎನ್ ಸುಗಂಧಿ, ಎಚ್ ಎಸ್ ಬರಗಾಲಿ, ಚಂದ್ರಕಾಂತ ಸೂರನ್, ಪದ್ಮಾವತಿ ನಾಯಕ್, ಧರ್ಮರಾಜ ಜವಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.