ಕೃಷಿಯಲ್ಲಿ ತಾಂತ್ರಿಕತೆ ಹೆಚ್ಚು ಬಳಸುವಂತೆ ರೈತರಿಗೆ ಪ್ರೇರೇಪಿಸಬೇಕು; ಬಿ.ಫೌಜಿಯಾ ತರನ್ನುಮ್

0
22

ಜಿಲ್ಲಾಧಿಕಾರಿಗಳಿಂದ ಕೃಷಿ ಸಂಬಂಧಿತ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ

ಕಲಬುರಗಿ; ರೈತಾಪಿ ಸಮುದಾಯ ಸಾಂಪ್ರದಾಯಿಕ ಕೃಷಿ ಪದ್ದತಿ ಜೊತೆಗೆ ಆಧುನಿಕ ತಾಂತ್ರಿಕತೆ ಹೆಚ್ಚಾಗಿ ಬಳಸಿಕೊಂಡು ಉತ್ತಮ ರೀತಿಯಲ್ಲಿ ಬೆಳೆ ಇಳುವರಿ ಪಡೆದಲಯುವುದಲ್ಲದೆ ಆರ್ಥಿಕ ಸ್ವಾವಲಂಬಿಯಾಗಬೇಕು. ಈ ನಿಟ್ಟಿನಲ್ಲಿ ರೈತ ಸಮುದಾಯವು ಕೃಷಿಯಲ್ಲಿ ನವೀನ ತಾಂತ್ರಿಕತೆ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾಧಿಕಾರಿ‌ ಬಿ.ಫೌಜಿಯಾ ತರನ್ನುಮ್ ಹೇಳಿದರು.

ಸೋಮವಾರ ತಮ್ಮ‌ ಕಚೇರಿ ಸಭಾಂಗಣದಲ್ಲಿ ಪ್ರಸಕ್ತ 2024-25ನೇ ಸಾಲಿನ ಮುಂಗಾರು ಹಿಂಗಾಮು ಬಿತ್ತನೆ ಕುರಿತಂತೆ ಸಿದ್ಧತೆ ಮತ್ತು ಕೃಷಿಯಲ್ಲಿ ನವೀನ ತಾಂತ್ರಿಕತೆಗಳ ಬಳಕೆ ಕುರಿತಂತೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ ಸೇರಿದಂತೆ ಕೃಷಿ ಸಂಬಂಧಿತ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

Contact Your\'s Advertisement; 9902492681

ಜಿಲ್ಲೆಯಾದ್ಯಂತ ಮುಂಗಾರು ಬಿತ್ತನೆಗೆ ಸಿದ್ಧತೆ ಚುರುಕುಗೊಂಡ ಹಿನ್ನೆಲೆಯಲ್ಲಿ ಸಮರ್ಪಕ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ದಾಸ್ತಾನು ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು,‌ ಎಲ್ಲಿಯೂ ಬೀಜ, ರಸಗೊಬ್ಬರ ಕೊರತೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ರೈತರಿಗೆ ಸುಲಭವಾಗಿ ದೊರಕುವಂತೆ ಸಾಕಷ್ಟು ಪ್ರಮಾಣದಲ್ಲಿ ಇವುಗಳನ್ನು ಆರ್.ಎಸ್.ಕೆ ಕೇಂದ್ರದಲ್ಲಿ ದಾಸ್ತಾನಿಕರಿಸಬೇಕೆಂದರು.

ಇದೇ ಸಂದರ್ಭದಲ್ಲಿ ಜಲಾನಯನ ಪ್ರದೇಶದ ವಾರ್ಷಿಕ ಕ್ರಿಯಾ ಯೋಜನೆಗಳಿಗೆ ಅನುಮೋದಿಸುವ ಜಿಲ್ಲಾ ಯೋಜನಾ ಸಮಿತಿ ಸಭೆ ಸಹ ನಡೆಸಲಾಯಿತು.

ಪೋಸ್ಟರ್ ಬಿಡುಗಡೆ: ಬೆಳೆ‌ ವಿಮೆ‌ ನೊಂದಣಿ, ನೆಟೆ ರೋಗ ನಿರ್ವಹಣೆ ಹಾಗೂ ಡಿ.ಎ.ಪಿ. ಗೊಬ್ಬರಕ್ಕೆ ಪರ್ಯಾಯವಾಗಿ ಕಾಂಪ್ಲೆಕ್ಸ್ ರಸಗೊಬ್ಬರ ಬಳಕೆ ಕುರಿತು ರೈತ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಪೋಸ್ಟರ್ ಗಳನ್ನು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಬಿಡುಗಡೆಗೊಳಿಸಿದರು.

ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಈ ಬಾರಿ ಮುಂಗಾರು 10 ದಿನಗಳ ಮುಂಚಿತವಾಗಿ ಪ್ರವೇಶಿಸಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಬಿತ್ತನೆ ಬೀಜದ ದಾಸ್ತಾನು ಹೂಂದಲಾಗಿದೆ. ರೈತ ಸಂರ್ಪಕ ಕೇಂದ್ರಗಳ ಮೂಲಕ ಬೀಜ ವಿತರಣೆ ಕಾರ್ಯ ಭರದಿಂದ ಸಾಗಿದೆ. ಜಿಲ್ಲೆಯಲ್ಲಿ ಈವರೆಗೆ 8,420 ಕ್ವಿಂಟಾಲ್‌ ವಿವಿಧ ಬಿತ್ತನೆ ಬೀಜಗಳು ಮಾರಾಟವಾಗಿದ್ದು, ಇನ್ನು 11,967 ಕ್ವಿಂಟಾಲ್ ದಾಸ್ತಾನಿದೆ. ಬಿತ್ತನೆ ಬೀಜದ ಕೊರತೆ ಇರುವುದಿಲ್ಲ ಎಂದರು.

ಅದೇ ರೀತಿ ಜಿಲ್ಲೆಗೆ ಮುಂಗಾರು ಹಂಗಾಮಿಗೆ ಬೇಕಿರುವ 88,592 ಮೆಟ್ರಿಕ್ ಟನ್‌ ರಸಗೂಬ್ಬರ ಪೈಕಿ ಈಗಾಗಲೇ 64,553 ಮೆಟ್ರಿಕ್ ಟನ್‌ ಜಿಲ್ಲೆಗೆ ಸರಬರಾಜಾಗಿದ್ದು, ಇದರಲ್ಲಿ 14,421 ಮೆಟ್ರಿಕ್ ಟನ್ ವಿತರಣೆಯಾದರೆ 50,132 ಮೆಟ್ರಿಕ್ ಟನ್‌ ರಸಗೂಬ್ಬರ ದಾಸ್ತಾನಿದೆ. ಜಿಲ್ಲೆಯಲ್ಲಿ ರಸಗೂಬ್ಬರದ ಕೊರತೆ ಸಹ ಇರುವುದಿಲ್ಲ. ಹೀಗಾಗಿ ರೈತರು ಅತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದಲ್ಲದೆ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಅಳವಡಿಸಲು ಉದ್ದೇಶಿಸಲಾದ 5 ನವೀನ ತಾಂತ್ರಿಕತೆಗಳ ಬಗ್ಗೆ ವಿವರವನ್ನು ಸಭೆಗೆ ಮಂಡಿಸಿದರು.

ರೇಷ್ಮೆ, ತೋಟಗಾರಿಕೆ ಅಧಿಕಾರಿಗಳು ಸಹ ತಮ್ಮ ಇಲಾಖೆಯಲ್ಲಿ ಐದು ನವೀನ ತಾಂತ್ರಿಕತೆ ಬಳಕೆ ಕುರಿತು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಸದಾಶಿವ ರಾತ್ರಿಕರ್, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಎಂ.ಸತೀಷಕುಮಾರ, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಡಿ.ಅವಂಟಿ, ಕೃಷಿ ವಿಜ್ಞಾನ ಕೇಂದ್ರದ‌ ಮುಖ್ಯಸ್ಥ ರಾಜು ತೆಗ್ಗೆಳ್ಳಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಸೋಮಶೇಖರ ಸೇರಿದಂತೆ ಅನೇಕ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here