ಸೇಡಂ: ಕನ್ನಡ ಸಾಹಿತ್ಯ ಲೋಕಕ್ಕೆ ಸೃಜನ ಶೀಲ ಬರಹದ ಮೂಲಕ ಮಹಿಳಾ ಅಸ್ಮಿತೆ ಸಾರಿದ ಕೀರ್ತಿ ಹಿರಿಯ ಸಾಹಿತಿ ಡಾ.ಕಮಲಾ ಹಂಪನಾ ಅವರಿಗೆ ಸಲ್ಲುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಅಭಿಪ್ರಾಯ ಪಟ್ಟರು.
ಪಟ್ಟಣದ ನೀಲಗಂಗಮ್ಮ ಸಜ್ಜನಶೆಟ್ಡಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನೃಪತುಂಗ ಅಧ್ಯಯನ ಸಂಸ್ಥೆ ಆಯೋಜಿಸಿದ್ಧ ಹಿರಿಯ ಸಾಹಿತಿ ಡಾ.ಕಮಲಾ ಹಂಪನಾ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
‘ತಮ್ಮ ಜೀವಿತಾವಧಿಯಲ್ಲಿ ಅತಿ ಹೆಚ್ವು ಸಮಯವನ್ನು ಬರಹದಲ್ಲಿಯೇ ತೊಡಗಿಸಿಕೊಂಡು, 60 ಕ್ಕು ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೂಡಬಿದರೆಯಲ್ಲಿ ನಡೆದ 71ನೇ ಕನ್ನಡ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷರಾಗಿದ್ದರು. ಅವರು ಸಂಶೋಧನಾ ಕ್ಷೇತ್ರದಲ್ಲಿ ಅತೀವ ಆಸಕ್ತಿ ಹೊಂದಿದ್ದರು. ಅವರ ಅಗಲಿಕೆ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದು ಸ್ಮರಿಸಿದರು.
ನೃಪತುಂಗ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರಭಾಕರ ಜೋಶಿ ಮಾತನಾಡಿ, ಸಾಹಿತ್ಯದಲ್ಲಿ ಆದರ್ಶ ಆದಿ ದಂಪತಿಗಳೆಂದೆ ಪ್ರಸಿದ್ಧ ಪಡೆದ ದಂಪತಿಗಳ ಬರಹ ಸಾಹಿತ್ಯ ಲೋಕಕ್ಕೆ ಅಪಾರವಾಗಿದೆ. ಅವರ ಬರಹ ಜಾತ್ಯತೀತವಾಗಿತ್ತು’ ಎಂದರು.
ನೃಪತುಂಗ ಅಧ್ಯಯನ ಸಂಸ್ಥೆ ಸಂರಕ್ಷಕ ಬಸವರಾಜ ಪಾಟೀಲ ಸೇಡಮ್, ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ, ಪ್ರಾಚಾರ್ಯ ಬಿ.ಆರ್ ಅಣ್ಣಾಸಾಗರ, ನೃಪತುಂಗ ಅಧ್ಯಯನ ಸಂಸ್ಥೆ ಕಾರ್ಯದರ್ಶಿ ಅವಿನಾಶ ಬೋರಂಚಿ, ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಆರತಿ ಕಡಗಂಚಿ, ತಾಲೂಕು ಬರಹಗಾರ ಸಂಘ ಅಧ್ಯಕ್ಷೆ ರುಕ್ಮಿಣಿ ಕಾಳಗಿ, ಪ್ರಾಧ್ಯಾಪಕಿ ಅಮರಮ್ಮ ಪಾಟೀಲ, ಪ್ರಾಚಾರ್ಯ ಚನ್ನಬಸ್ಸಪ್ಪ ಗವಿ, ವೀರಭದ್ರಪ್ಪ ಟೆಂಗಳಿ, ಶಿವಾರೆಡ್ಡಿ ಗೌಡನಹಳ್ಳಿ, ವಿಶ್ವನಾಥ ಕೋರಿ, ಸುರೇಶ ಬಿಜನಳ್ಳಿ, ಶಿವಪ್ರಸಾದ ವಿಶ್ವಕರ್ಮ ಇದ್ದರು.