ಕಲಬುರಗಿ: ಜುಲೈ 1ರ ಸೋಮವಾರ ರಾತ್ರಿ 8 ಗಂಟೆಗೆ ಕಲಬುರಗಿ ನಗರದ ಆರಾಧ್ಯ ದೈವ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ದೇವಸ್ಥಾನದ ಮಹಾದಾಸೋಹ ಸಂಸ್ಥಾನದ ದಾಸೋಹ ಮಹಾಮನೆಯಲ್ಲಿ 8ನೇಯ ಪೀಠಾಧಿಪತಿಗಳು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ದಾಸೋಹ ಭಂಡಾರಿ, ಜ್ಞಾನ ದಾಸೋಹಿ ಪರಮ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜೀ ಅವರು ಹಾಗೂ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ಪರ್ಸನ್ ಪೂಜ್ಯ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್ ಅವ್ವಾಜೀ ಅವರು ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ್ ದೇಶಮುಖ್ ಅವರು ಕಲ್ಯಾಣ ಕರ್ನಾಟಕ ಭಾಗದ ಖ್ಯಾತ ನಿರೂಪಕರು ಹಾಗೂ ಸುದ್ದಿ ಸಮಯ ವಾಹಿನಿಯ ವಾರ್ತಾ ವಾಚಕರಾದ ಆರ್.ಜೆ.ಮಂಜು ಹಿರೋಳಿಕರ್ ಅವರು ನಾಯಕ ನಟರಾಗಿ ನಟಿಸಿರುವ “ಲವ್ ಇಸ್ ಬ್ಲೈಂಡ್” ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ, ಯುವಕರೆ ಸೇರಿ ಮಾಡಿರುವ ಈ ನಿಮ್ಮ ಚಿತ್ರ ಯಶಸ್ಸು ಕಾಣಲು ಆ ಶರಣಬಸವೇಶ್ವರರ ಆಶಿರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ಶುಭಾಶಿರ್ವದಿಸಿದರು.
“ಎವಿ ಮೀಡಿಯಾ ಸಲ್ಯೂಷನ್ಸ್ ಸೊಸೈಟಿ” ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಈ ಚಿತ್ರದ ನಾಯಕಿಯಾಗಿ ಉತ್ತರ ಕರ್ನಾಟಕದ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನ ನಟಿ ಭೂಮಿಕಾ ದೇಶಪಾಂಡೆ ಅವರು ನಟಿಸಿದ್ದಾರೆ. ಈ ಚಿತ್ರಕ್ಕೆ ಕಲಬುರಗಿಯ ಪ್ರಖ್ಯಾತ ಹೋಟೆಲ್ ಸ್ವಾದ್ನ ಮಾಲಿಕರಾದ ಯುವ ಉದ್ಯಮಿ ಲಕ್ಷ್ಮೀಕಾಂತ್ ಗುತ್ತೇದಾರ್ ಅವರು ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದು, ಈ ಮೊದಲು ಧೀರ ಸಾಮ್ರಾಟ್ ಹಾಗೂ ವೀರಪುತ್ರ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಯೂಟ್ಯೂಬರ್ ಮತ್ತು ನಟ ಅಂಬ್ರೇಶ್ ಮರಾಠ ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರಕ್ಕೆ ಛಾಯಾಗ್ರಾಹಕರಾದ ರಾಘು ಮರೇನೂರ್ ತಮ್ಮ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಈ ಚಿತ್ರದ ಹಾಡಿಗೆ ಸಾಹಿತ್ಯ ಒದಗಿಸಿ ಇಡಿ ಚಿತ್ರವನ್ನು ಸಂಕಲನ ಮಾಡಿದವರು ಹೆಸರಾಂತ ಉಧ್ಘೋಷಕರು ಹಾಗೂ ಕಂಠದಾನ ಕಲಾವಿದರಾದ ರಾಘವೇಂದ್ರ ಎಮ್ ಬೊಗಲೆ. ಖ್ಯಾತ ಗಾಯಕರಾದ ಶಿವಕುಮಾರ್ ಪಂಚಾಳ್ ಅವರು ಈ ಗೀತೆಗೆ ರಾಗ ಸಂಯೋಜಿಸಿ ತಮ್ಮ ಸುಮಧುರ ಕಂಠದಲ್ಲಿ ಹಾಡಿದ್ದಾರೆ, ಎಪಿ ಕ್ರಿಯೇಷನ್ಸ್ನ ಅರುಣ್ ಬಿ ತೆಗನೂರ್ ಅವರು ಪೋಸ್ಟರ್ ಸಿಧ್ಧಪಡಿಸಿದ್ದು, ಪೂರ್ಣಿಮಾ ಆರ್ ಬೊಗಲೆ ಅವರು ಪ್ರೊಡಕ್ಷನ್ ನಿರ್ವಹಣೆ ಮಾಡಿದ್ದಾರೆ.
ಈಗಾಗಲೇ ಜೂನ್ 26ರಂದು ಬಿಗ್ ಬಾಸ್ ಖ್ಯಾತಿಯ ಬೆಂಗಳೂರಿನ ನಟ ರಕ್ಷಕ್ ಬುಲ್ಲೇಟ್ ಅವರು ಈ ಚಿತ್ರದ ಹಾಡನ್ನು ಬಿಡುಗಡೆಗೊಳಿಸಿದ್ದಾರೆ. “ಆರ್ ಜೆ ಮೂವೀಸ್ ಕನ್ನಡ” ಯೂಟ್ಯೂಬ್ ಚಾನೆಲ್ನಲ್ಲಿ ಈ ಹಾಡು ಸಧ್ಯ ಪ್ರೇಕ್ಷಕರ ಮನಸೂರೆಗೊಳ್ಳುತ್ತಿದ್ದು, ಎಲ್ಲರಿಂದ ಉತ್ತಮ ಪ್ರಶಂಸೆಯನ್ನು ಪಡೆಯುತ್ತಿದೆ. ಆಗಸ್ಟ್ 16ರ ವರಮಹಾಲಕ್ಷ್ಮೀ ಹಬ್ಬದ ದಿನದಂದು ಈ ಚಿತ್ರ ಬಿಡುಗಡೆಯಾಗಲಿದೆ.
ಈ ಚಿತ್ರದ ಪೋಸ್ಟರ್ ಬಿಡುಗಡೆಯ ಸಂಧರ್ಭದಲ್ಲಿ ಶರಣಬಸವೇಶ್ವರ ಸಂಸ್ಥಾನದ ಡಾ.ಅಲ್ಲಮಪ್ರಭು ದೇಶಮುಖ್, ಎ.ಪಿ ಕ್ರಿಯೇಷನ್ಸ್ನ ಅರುಣ ಬಿ ತೆಗನೂರ್, ನಟ ಮತ್ತು ಗಾಯಕ ವಿನ್ನಿ ನಡಗೇರಿ, ನಿಜಗುಣಗೌಡ ಯಲಗೋಡ್, ಸಚಿನ್ ಶರಣ್ ಹಾಗೂ ಗಣೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.