ಮಹಿಳೆಯರ ಸುರಕ್ಷತೆಗೆ ಸರಕಾರಗಳು ಕಠಿಣ ಕ್ರಮ ಕೈಗೊಳ್ಳಬೇಕು: ಡಾ. ಸುಧಾ ಆರ್ ಹಾಲಕಾಯಿ

0
31

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕಲ್ಕತ್ತಾ ಮತ್ತು ಬೇರೆ ಕಡೆಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು ಅಕ್ಷಮ್ಯ. ನಾಗರಿಕ ಸಮಾಜ ತಲೆತಗ್ಗಿಸುವಂತಹ ಪಾಶವೀ ಕೃತ್ಯಗಳು ನಡೆಯುತ್ತಿವೆ. ಇದನ್ನು ಅತ್ಯಂತ ಉಗ್ರ ಶಬ್ದಗಳಲ್ಲಿ ಖಂಡಿಸಬೇಕಾಗಿದೆ, ಮಾತ್ರವಲ್ಲ, ಇಡೀ ದೇಶದ ಮಹಿಳೆಯರ ಸುರಕ್ಷತೆಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅತ್ಯಂತ ಕಠಿಣವಾದ ದೃಢವಾದ ಅನೇಕ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬಿಜೆಪಿ ವಕ್ತಾರರು ಡಾ. ಸುಧಾ ಆರ್ ಹಾಲಕಾಯಿ ಆಗ್ರಹಿಸಿದರು.

ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಅವರು, ಮಹಿಳೆಯರ ಸುರಕ್ಷೆಗೆ ಸಂಬಂಧಿಸಿದ ಕಾನೂನು 2005ರಲ್ಲಿ ಜಾರಿಗೆ ಬಂದರೂ ಆ ಕಾನೂನಿನ ಅರಿವನ್ನು ಮೂಡಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ನಾವು ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಹೈಸ್ಕೂಲ್ ಹಂತದಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಹೈಸ್ಕೂಲಿನಿಂದ ಪದವಿ ತರಗತಿ ತನಕ ಎಲ್ಲ ಹೆಣ್ಣು ಮಕ್ಕಳಿಗೆ ಸುರಕ್ಷತೆಗೆ ಬೇಕಾಗಿರುವಂತಹ ಆತ್ಮರಕ್ಷಣೆ ಕಲೆಯ ತರಬೇತಿ ಕೊಡಬೇಕಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ಶಿಕ್ಷಣ ಪದ್ಧತಿಯಲ್ಲೇ ಇದನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

Contact Your\'s Advertisement; 9902492681

ತಾಂತ್ರಿಕತೆ ಇಷ್ಟು ಮುಂದುವರಿದ ಕಾಲಘಟ್ಟದಲ್ಲಿ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ರಕ್ಷಣೆ ಒದಗಿಸಲು ಸರಕಾರ ವಿಶೇಷ ಆಪ್ ಅಭಿವೃದ್ಧಿಪಡಿಸಿ ಜಿಪಿಎಸ್ ಟ್ಯಾಗ್ ಮೂಲಕ ಮಹಿಳೆಯರನ್ನು ಜಿಪಿಎಸ್‌ ಟ್ಯಾಗ್‌ ಗೆ ಒಳಪಡಿಸಬೇಕು. ಇದು ಕಷ್ಟಸಾಧ್ಯವೇನಲ್ಲ. ಈ ಆಪ್‌ ನಲ್ಲಿ ಪ್ಯಾನಿಕ್ ಬಟನ್ ಒದಗಿಸಬೇಕು. ಆಗ ತುರ್ತು ಸಂದರ್ಭದಲ್ಲಿ ಆ ಪ್ಯಾನಿಕ್ ಬಟನ್ ಒತ್ತಿ ರಕ್ಷಣೆ ಪಡೆಯಲು ಅನುಕೂಲವಾಗಬಹುದು ಎಂದು ಅವರು ಅಭಿಪ್ರಾಯ ಪಟ್ಟರು.

ಪ್ರತಿಯೊಂದರಲ್ಲೂ ಕೂಡ ಮಹಿಳೆಯರ ಬಗೆಗಿರುವ ತಾತ್ಸಾರ ಭಾವನೆ ಹೋಗಬೇಕಾಗಿದೆ. ಸರಕಾರ ಕಾನೂನು ಮಾಡುತ್ತದೆ. ಆದರೆ ಅದನ್ನು ಜಾರಿಗೆ ತರುವುದರಲ್ಲಿ ಸೋಲುತ್ತದೆ. ಪೊಲೀಸರು ಕಾನೂನನ್ನು ತಮ್ಮ ವಿವೇಚನೆಗೆ ತಕ್ಕಂತೆ ಬಳಸದೆ, ಅಕ್ಷರಶಃ ಜಾರಿಗೊಳಿಸಬೇಕು.

ಉದಾಹರಣೆಗೆ ಮಹಾರಾಷ್ಟ್ರದಲ್ಲಿ ಘಟನೆ ನಡೆದ ತಕ್ಷಣ ಕೇಸು ದಾಖಲಿಸಲು ಪೊಲೀಸರು ಸಹಕರಿಸದೆ ವಿಳಂಬಿಸಿದ್ದು, ಅದೇ ರೀತಿ ಪಶ್ಚಿಮ ಬಂಗಾಳದಲ್ಲೂ ವಿಂಬ ನೀತಿ ಅನುಸರಿಸಿದ್ದು, ಅಪರಾಧಿಗಳಿಗೆ ತಪ್ಪಿಸಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ.

ದೆಹಲಿಯ ನಿರ್ಭಯ ಪ್ರಕರಣದ ನಂತರ ಇನ್ಯಾವುದೋ ಘಟನೆ ಆಗುವ ತನಕ ನಾವು ಮರೆವಿಗೆ ಒಳಗಾಗುತ್ತೇವೆ. ಹಾಗೆ ಆಗಬಾರದು. ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಸದಾ ಜಾಗೃತರಾಗಿ ವರ್ತಿಸಬೇಕು. ಜನಂಖ್ಯೆಯ ಅರ್ಧ ಭಾಗ ಇರುವ ಮಹಿಳೆಯರಿಗೆ ಸುರಕ್ಷತೆ ಕೊಡಬೇಕಾದ್ದು ಎಲ್ಲರ ಆದ್ಯತೆಯಾಗಬೇಕು. ಕಾಮಪಿಪಾಸುಗಳನ್ನು ಅತ್ಯಂತ ಕಠಿಣಾತಿ ಕಠಿಣ ಶಿಕ್ಷೆಗೆ ಗುರಿಪಡಿಸುವ ಕಾನೂನು ಬರಬೇಕಾಗಿದೆ ಎಂದು ಅವರು ನುಡಿದರು.

ರಾಜಕಾರಣಕ್ಕೆ ಬಂದ ಹೆಣ್ಣುಮಕ್ಕಳ ಮೇಲೆ ಗೂಬೆ ಕೂರಿಸಿ ಚಾರಿತ್ರ್ಯ ವಧೆ ಮಾಡುವುದು ಕೂಡ ನಡೆಯುತ್ತದೆ. ಇಂಥವನ್ನೆಲ್ಲ ತಡೆಯಲು ರಾಜಕೀಯ ಪಕ್ಷಗಳು ಕೂಡ ತಮ್ಮ ಸಂಘಟನೆ ಒಳಗೆ ಸೂಕ್ತ ವ್ಯವಸ್ಥೆ ಹೊಂದಿರಬೇಕು ಮತ್ತು ಅದಕ್ಕೆ ಕಾನೂನಿನ ಬಲ ಇರಬೇಕು. ಚಳುವಳಿ ರೂಪದಲ್ಲಿ ಈ ಎಲ್ಲ ಸಂಗತಿಗಳು ಆಗಬೇಕಾಗಿದೆ.

ಆಗ ಮಾತ್ರ ಕೊಲೆ ಸುಲಿಗೆ ಅತ್ಯಾಚಾರದಂತಹ ದೌರ್ಜನ್ಯಗಳನ್ನು ತಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ಇದನ್ನು ಕೇಂದ್ರ ಮತ್ತು ರಾಜ್ಯಸರಕಾರಗಳು ಪಠ್ಯದ ಭಾಗವಾಗಿ ಮಾಡಬೇಕೆಂದು ಡಾ. ಸುಧಾ ಆರ್ ಹಾಲಕಾಯಿ ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here