ಕಲಬುರಗಿ: ಚಿಕ್ಕಮಗಳೂರು ದತ್ತ ಪೀಠವನ್ನು ಹಿಂದೂಗಳಿಗೆ ವಹಿಸಬೇಕು ಎಂದು ಒತ್ತಾಯಿಸಿ ಗುರುವಾರ ಶ್ರೀರಾಮಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ್ ಸ್ವಾದಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶರಣಪ್ಪ ಹೂಗಾರ್, ಗುಂಡು ಪಾಟೀಲ್, ಶೀಲಾ ಮಂಗಳಮುಖಿ, ಮಹೇಶ್ ಗೊಬ್ಬೂರ್ ಮುಂತಾದವರು ಪಾಲ್ಗೊಂಡಿದ್ದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿ, ದತ್ತ ಪೀಠವನ್ನು ಸಂಪೂರ್ಣವಾಗಿ ಹಿಂದೂಗಳಿಗೆ ಒಪ್ಪಿಸುವಂತೆ, ಅಲ್ಲಿರುವ ಅನಧಿಕೃತ ಘೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರಿಸುವಂತೆ, ಹಿಂದೂ ಅರ್ಚಕರನ್ನು ನೇಮಿಸುವಂತೆ, ಮುಜಾವರುಗಳನ್ನು ವಜಾಗೊಳಿಸುವಂತೆ ಒತ್ತಾಯಿಸಿದರು.
ತ್ರಿಕಾಲ ಪೂಜೆ ಕೈಗೊಳ್ಳುವಂತೆ ಹಾಗೂ ಉರುಸು ನಿಲ್ಲಿಸುವಂತೆ, ಪೀಠದ ನೂರಾರು ಎಕರೆ ಅತಿಕ್ರಮಣ ತೆರವುಗೊಳಿಸುವಂತೆ ಹಾಗೂ ಅಮೂಲ್ಯ ವಸ್ತುಗಳು ಕಣ್ಮರೆಯಾದ ಬಗ್ಗೆ ತನಿಖೆ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
ಭಕ್ತರಿಗೆ, ಪೂಜ್ಯ ಸ್ವಾಮೀಜಿಗಳಿಗೆ ಅಡೆತಡೆ ಇಲ್ಲದೇ ದರ್ಶನ, ಪೂಜೆಗೆ ಮುಕ್ತ ಅವಕಾಶ ಕೊಡುವಂತೆ, ಭಕ್ತರಿಗೆ ಉಚಿತ ಅನ್ನದಾನ ವ್ಯವಸ್ಥೆ ಮಾಡುವಂತೆ ಅವರು ಒತ್ತಾಯಿಸಿದರು.