ಹನಿಟ್ರ್ಯಾಪ್ ಆರೋಪಿಗಳು ಸ್ವಯಂ ಶರಣಗಾತರಾಗಿಲ್ಲ: ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ

0
137

ಕಲಬುರಗಿ: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ರಾತ್ರಿ ಆರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಆ ಆರೋಪಿಗಳು ಸ್ವಯಂ ಪ್ರೇರಿತರಾಗಿ ಶರಣಾಗತರಾಗಿಲ್ಲ. ಬದಲಿಗೆ ನೋಟಿಸ್ ಕೊಟ್ಟಿದ್ದರಿಂದ ಅವರು ಆಗಮಿಸಿದ್ದು, ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಅವರು ಹೇಳಿದರು.

ತಮ್ಮ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ರಾಜು ಲೆಂಗಟಿ ಮತ್ತು ಪ್ರಭು ಹಿರೇಮಠ್ ಅವರನ್ನು ಬಂಧಿಸಲಾಗಿತ್ತು. ಅವರ ವಿಚಾರಣೆಯ ನಂತರ ಆರು ಜನರಿಗೆ ನೋಟಿಸ್ ಜಾರಿ ಮಾಡಲಾಗಿತ್ತು ಎಂದರು.

Contact Your\'s Advertisement; 9902492681

ನೋಟಿಸ್ ಕೊಟ್ಟ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಪ್ರಕರಣದ ಆರೋಪಿಗಳಾದ ಹನುಮಂತ್ ಯಳಸಂಗಿ, ಮಂಜುನಾಥ್ ಭಂಡಾರಿ, ಉದಯಕುಮಾರ್ ಖನಗೆ, ಅರವಿಂದ್ ಕಮಲಾಪುರ, ಸಂತೋಷ್ ಪಾಳಾ, ಶ್ರೀಕಾಂತ್ ರೆಡ್ಡಿ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಬಂಧಿತರಿಂದ ಯಾವುದೇ ರೀತಿಯ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿಲ್ಲ ಎಂದು ಅವರು ಹೇಳಿದರು.

ಹನಿಟ್ರ್ಯಾಪ್ ಒಳಗಾದ ಯಾವುದೇ ಉದ್ಯಮಿಗಳು, ನೌಕರರು ಮುಂದೆ ಬಂದು ದೂರು ಕೊಟ್ಟಿಲ್ಲ. ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿದ್ದವರು ಮುಂದೆ ಬಂದು ದೂರು ಕೊಟ್ಟರೆ ಅವರ ಗೌಪ್ಯತೆಯನ್ನು ಕಾಪಾಡಿ ವಿಚಾರಣೆ ಮಾಡುತ್ತೇವೆ ಎಂದು ಎಂದು ಅವರು ಹೇಳಿದರು.

ಹನಿಟ್ರ್ಯಾಪ್ ಪ್ರಕರಣದಲ್ಲಿ ಇನ್ನೂ ಆರೋಪಿಗಳು ಇರಬಹುದೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಯುಕ್ತರು, ಇರಬಹುದು ಎಂದರಲ್ಲದೇ, ಪೋಲಿಸ್ ಕಚೇರಿಗಳು ಕಾಂಗ್ರೆಸ್ ಕೈಗೊಂಬೆಗಳಾಗಿವೆ ಎಂಬ ರಾಜಕೀಯ ನಾಯಕರ ಆರೋಪಗಳನ್ನು ತಳ್ಳಿ ಹಾಕಿದರು.

ಮುಂಬಯಿ ಮೂಲದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಗರ್ಭಪಾತ ಮಾಡಿಸಿದ ಕುರಿತು ಪ್ರಸ್ತಾಪಿಸಿದಾಗ ಪೋಲಿಸ್ ಆಯುಕ್ತರು ಉತ್ತರಿಸಿ, ಆ ಪ್ರಕರಣದ ದೋಷಾರೋಪಣೆ ಪಟ್ಟಿ ಈಗಾಗಲೇ ಸಿದ್ಧಗೊಂಡಿದೆ. ಕಾನೂನು ಕ್ರಮ ಜಾರಿಯಾಗಲಿದೆ ಎಂದರು.

ನಗರ ಪೋಲಿಸ್ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿ ಮಟಕಾ, ಜೂಜಾಟ, ರೌಡಿಸಂ ಮುಂತಾದ ಎಲ್ಲ ಅಪರಾಧಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here