ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶವು ಹಲವು ಹಿರಿಮೆಗಳಿಗೆ ಪ್ರಸಿದ್ಧಿಯಾಗಿದೆ. ಸ್ವತಂತ್ರ ಪೂರ್ವದ ಇತಿಹಾಸ ನೋಡಿದರೆ ಈ ಪ್ರದೇಶದಲ್ಲಿ ಅನೇಕ ರಾಜ ಮನೆತನಗಳು ಆಳ್ವಿಕೆ ನಡೆಸಿ ಅನೇಕ ಐತಿಹಾಸಿಕ ದಾಖಲೆಗಳನ್ನು ನೀಡಿ ಹೋಗಿದ್ದು ತಿಳಿಯುತ್ತದೆ.
ಈ ನೆಲೆಯಲ್ಲಿ ಸೇಡಮ್ ತಾಲೂಕಿನ ಮಾನ್ಯಖೇಟದ ಕೋಟೆ ಬಹು ಪುರಾತನವಾಗಿದೆ. ಎಂಟನೇ ಶತಮಾನದಲ್ಲಿ ಈ ಪ್ರದೇಶವನ್ನು ಆಳಿದ ರಾಷ್ಟ್ರಕೂಟರ ದೊರೆಗಳ ಸಂದರ್ಭದಲ್ಲಿ ನಿರ್ಮಿಸಿದ ಮಾನ್ಯಖೇಟದ ಕೋಟೆ ಅವರ ಇತಿಹಾಸ ಸಾರುತ್ತಿದೆ. ಇದೇ ಮಾನ್ಯಖೇಟದಲ್ಲಿ ದೊರೆ ನೃಪತುಮಗನ ಆಶ್ರಯದಲ್ಲಿದ್ದ ಕವಿ ಶ್ರೀವಿಜಯನಿಂದ ಕನ್ನಡದ ಮೊದಲ ಉಪಲಬ್ಧ ಗ್ರಂಥ ಕವಿರಾಜ ಮಾರ್ಗ ರಚನೆಗೊಂಡು ಈ ಭಾಗಕ್ಕೆ ಮತ್ತೊಂದು ಕನ್ನಡದ ಹಿರಿಮೆಯ ಗರಿ ಮೂಡಿಸಿದೆ. ಹೀಗೆ ಅನೇಕ ಸಾಹಿತ್ಯ, ಸಂಸ್ಕøತಿ, ಕಲೆ, ಕೌಶಲ್ಯಗಳಿಗೆ ಹೆಸರಾದ ಕಲ್ಯಾಣ ಕರ್ನಾಟಕ ಪ್ರದೇಶದ ಐತಿಹಾಸಿಕ ಹೆಗ್ಗುರುತಿನಂತಿರುವ ಮಾನ್ಯಖೇಟದ ಕೋಟೆ ಈಗ ಶಿಥಿಲಗೊಂಡು ನಶಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.
ಸೇಡಮ್ ತಾಲೂಕಿನ ಮಳಖೇಡ ಕೋಟೆಯು ಇತ್ತೀಚೆಗೆ ಶಿಥಿಲಗೊಂಡು ಕುಸಿದು ಬಿದ್ದಿದ್ದ ಕೋಟೆಯನ್ನು ವೀಕ್ಷಿಸಿ ಅವರು ಸರಕಾರಕ್ಕೆ ಮನವಿ ಮಾಡಿಕೊಂಡಿರುವ ಅವರು, ಶಿಥಿಲಾವಸ್ಥೆಯಲ್ಲಿರುವ ಮಾನ್ಯಖೇಟ ದ ಕೋಟೆಯನ್ನು ಸರ್ಕಾರದ ವತಿಯಿಂದ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳುವುದು ಅಗತ್ಯವಾಗಿದೆ. ಪುರಾತನ ರಾಷ್ಟ್ರಕೂಟರ ಮಾನ್ಯಖೇಟದ ಕೋಟೆಯನ್ನು ಪುನರ್ ನಿರ್ಮಾಣದಂತೆ ಆಧುನಿಕ ಸ್ಪರ್ಶೆಯನ್ನು ನೀಡುವುದು ಮತ್ತು ಅದನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಅವರು ವಿವರಣೆ ನೀಡಿದರು.
ಮಾನ್ಯಖೇಟದ ಕೋಟೆಯ ಪರಿಸರವನ್ನು ಪ್ರವಾಸಿಗರು ಕಣ್ಬುಂತಿಕೊಳ್ಳುವಮ ಪರಿಯಲ್ಲಿ ಹೊಸ ರೂಪ ನೀಡಿದರೆ ಕಡೆಗಣಿಸಲ್ಪಟ್ಟಂತಿರುವ ಈ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಆದ್ಯತೆ ನೀಡಿದಂತಾಗಿ ಈ ಭಾಗವು ಅಭಿವೃದ್ಧಿಯೆಡೆಗೆ ಸಾಗುವಲ್ಲಿ ತೊಡಗಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧ ಸರ್ಕಾರಿ ಇಲಾಖೆಯ ಅದಿಕಾರಿಗಳು ಗಮನ ಹರಿಸುವುದು ಇಂದಿನ ತುರ್ತಾಗಿದೆ ಎಂದು ತೇಗಲತಿಪ್ಪಿ ಯವರು ಅಭಿಪ್ರಾಯಿಸಿದರು.
ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಶಿವರಾಜ ಎಸ್ ಅಂಡಗಿ, ಕಾಳಗಿ ಅಧ್ಯಕ್ಷ ಸಂತೋಷ ಕುಡಳ್ಳಿ, ಸಾಹಿತಿ ಡಾ. ಜಗನ್ನಾಥ ಎಲ್ ತರನಳ್ಳಿ, ಸೇಡಂ ತಾಲೂಕಾ ಕಸಾಪ ದ ಗೌರವ ಕಾರ್ಯದರ್ಶಿ ರಮೇಶ ರಾಠೋಡ, ರಮೇಶ್ಚಂದ್ರ ದೇಶಮುಖ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.