ಉಚಿತ ಆರೋಗ್ಯ ಶಿಬಿರ: ಅಶುದ್ಧ ಗಾಳಿ-ನೀರಿನಿಂದ ಸಾಂಕ್ರಾಮಿಕ ರೋಗ: ಅಮೃತಾ

0
63

ವಾಡಿ: ಸಾಂಕ್ರಾಮಿಕ ರೋಗ ಹರಡಲು ಕಲುಷಿತ ಪರಿಸರದ ಗಾಳಿ ಮತ್ತು ಅಶುದ್ಧ ನೀರು ಸೇವನೆಯೇ ಮುಖ್ಯ ಕಾರಣ ಎಂದು ಸ್ಥಳೀಯ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯೆ ಅಮೃತಾ ಕುಲಕರ್ಣಿ ಹೇಳಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ನಿಮಿತ್ತ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಶನಿವಾರ ಪಟ್ಟಣದ ಪಿಲಕಮ್ಮಾ ಏರಿಯಾದ ಬಸವಣ್ಣ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ದೇಶಿಸಿ ಅವರು ಮಾತನಾಡಿದರು. ಸಾಂಕ್ರಾಮಿಕ ರೋಗಗಳಾದ ವಾಂತಿ ಭೇದಿ (ಕಾಲರಾ), ಟೈಫಾಯಿಡ್ (ವಿಷಮ ಶೀತ ಜ್ವರ), ಹಂದಿ ಜ್ವರ, ನಾಯಿ ಕೆಮ್ಮು, ಮಂಗನ ಬಾವು ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ಅಸಾಂಕ್ರಾಮಿಕವಲ್ಲದ ರಕ್ತದ ಒತ್ತಡ (ಬಿಪಿ), ಸಕ್ಕರೆ ಕಾಯಿಲೆ (ಶುಗರ್), ಕ್ಯಾನ್ಸರ್ ಸೇರಿದಂತೆ ಇತರ ರೋಗಗಳಿಗೆ ನಿರ್ಲಕ್ಷ್ಯ ತೋರಬಾರದು. ವೈದ್ಯರು ತಿಳಿಸುವ ಮಾತ್ರೆಗಳನ್ನು ಕಡ್ಡಾಯವಾಗಿ ನಿಗದಿತ ಅವದಿಯ ವರೆಗೆ ಸೇವಿಸಿದಾಗ ಮಾತ್ರ ರೋಗಗಳನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಸಕ್ಕರೆ ಕಾಯಿಲೆ ಮತ್ತು ಕ್ಯಾನ್ಸರ್ ರೋಗಗಳನ್ನು ಹಗುರವಾಗಿ ಪರಿಗಣಿಸಬಾರದು. ನಮ್ಮ ಆರೋಗ್ಯ ನಮ್ಮ ಬದುಕಿಗೆ ಚೈತನ್ಯವನ್ನು ಒದಗಿಸುತ್ತದೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದರೆ ಎಲ್ಲಾ ರೋಗಗಳನ್ನೂ ನಮ್ಮ ಹತೋಟಿಯಲ್ಲಿಟ್ಟು ಸಂತಸ ಬದುಕು ಜೀವಿಸಬಹುದು. ದುಶ್ಚಟಗಳಿಂದ ದೂರ ಇರುವವರು ಆರೋಗ್ಯವನ್ನು ಗೆಲ್ಲುತ್ತಾರೆ. ನಮ್ಮ ದೇಶದ ಯುವಶಕ್ತಿ ಇಂದು ನಾನಾ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಈ ಬೆಳವಣಿಗೆ ಒಳ್ಳೆಯದಲ್ಲ. ಸದೃಢ ದೇಶಕ್ಕೆ ಆರೋಗ್ಯವಂತ ನಾಗರಿಕರು ಬೇಕು ಎಂದು ವಿವರಿಸಿದ ಡಾ.ಅಮೃತಾ, ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸರಕಾರದ ವತಿಯಿಂದ ಹೆಲ್ತ್ ಕಾರ್ಡ್ ವಿತರಿಸಲಾಗುತ್ತಿದೆ. ರೂ.೫ ಲಕ್ಷದ ವರೆಗೆ ಚಿಕಿತ್ಸಾ ಸೌಲಭ್ಯ ಒದಗಿಸಲಾಗುತ್ತಿದ್ದು, ಬಡ ಕುಟುಂಬಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದರು.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಸಾಹೇರಾಬೇಗಂ, ಡಾ.ಅಫ್ರೀನ್, ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕ್ರಯ್ಯಸ್ವಾಮಿ ಮದರಿ, ಪುರಸಭೆ ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಸಮುದಾಯ ಸಂಘಟನಾಧಿಕಾರಿ ಕಾಶೀನಾಥ ಧನ್ನಿ, ಮಹ್ಮದ್ ಅಶ್ರಫ್, ಮಹೆಬೂಬ್ ನಧಾಫ್, ಆರೋಗ್ಯ ಸಹಾಯಕರಾದ ಅಮೃತಾ ಡಿ, ರೇಣುಕಾ, ಕೃಷ್ಣಾ ಹುಲಿಕರ, ಮಂಜುಳಾ, ಅಶ್ವಿನಿ ಹಿರೇಮಠ, ಯಾನ್ಸಿರಿಚೆಲ್, ವಿಜುಬಾಯಿ ಸೇರಿದಂತೆ ಅಂಗನಾವಾಡಿ ಮತ್ತು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಆಪ್ತಸಮಾಲೋಚಕ ಬಾಬುರಾವ ಸಿ.ಪಿ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here