ಪತಿಯೇ ಪರದೈವ ಅಲ್ಲ; ಪರದೈವವೇ ಪತಿ ಎಂದ ಅಕ್ಕಮಹಾದೇವಿ

0
87
ಸಾವಿಲ್ಲದಾಗುವಿಕೆ, ಸಾವಿಲ್ಲದವರನ್ನು ಪಡೆವ ಹಂಬಲದಾಕೆ ಅಕ್ಕ
——–
ಅಯ್ಯ ಕತ್ತಲೆಯ ಕಳೆದುಳಿದ ಸತ್ಯ ಶರಣರ
ಪರಿಯನೇಂನೆಬೆನಯ್ಯ
ಘನವನೊಳಕೊಂಡ ಮನದ ಮಹಾನುಭಾವಿಗಳ
ಬಳಿವಿಡಿದು ಬದುಕಿದೆನಯ್ಯ
ಅಯ್ಯ ನಿನ್ನಲ್ಲಿ ನಿಂದು ಬೇರೊಂದರಿಯದ
ಲಿಂಗ ಸುಖಿಗಳ ಸಂಗದಲ್ಲಿ ದಿವ ಕಳೆಯಿಸಯ್ಯ
ಚನ್ನಮಲ್ಲಿಕಾರ್ಜುನ
-ಅಕ್ಕಮಹಾದೇವಿ

ಹುಟ್ಟಿನೊಂದಿಗೆ ಸಾವು, ಸುಖದೊಂದಿಗೆ ದುಃಖ ಇವೆರಡೂ ಒಟ್ಟಿಗೆ ಬೆನ್ನ ಅಂಟಿಕೊಂಡಂತೆ ಬಂದಿರುವುದು ನಮಗೆಲ್ಲರಿಗೆ ತಿಳಿದಿರುವ ವಿಷಯ. ಆದರೆ ಅಕ್ಕ ಅಕ್ಕ ಇದನ್ನು ಸಹಜವಾಗಿ ತೆಗೆದುಕೊಳ್ಳದೆ ಇದರಿಂದ ಪಾರಾಗುವ ಬಗೆಯನ್ನು ಹುಡುಕಲೆತ್ನಿಸುತ್ತಾಳೆ. ಸಾವಿಲ್ಲದಾಗುವಿಕೆ, ಸಾವಿಲ್ಲದವರನ್ನು ಪಡೆಯುವುದು ಅಕ್ಕನ ಹಂಬಲವಾಗಿತ್ತು. “ಪತಿಯೇ ಪರದೈವ” ಎಂದು ನಂಬಿದ್ದ ಕಾಲದಲ್ಲಿ “ಪರದೈವವೇ ಪತಿ” ಎಂದು ಹೊರಟಿರುವ ಅಕ್ಕನ ಹಾದಿ ಯಾರೂ ತುಳಿಯದ ಹಾದಿ. ಯುದ್ಧಭೂಮಿಯಲ್ಲಿ ಯೋಧ ಇದ್ದಂತೆ ಮಾಯೆ ಯಾವ ಕಡೆಯಿಂದ ಬಂದು ನನ್ನನ್ನು ಆವರಿಸುತ್ತದೋ ಎಂಬ ಎಚ್ಚರಿಕೆಯಲ್ಲಿ ಅಕ್ಕ ಅರಮನೆಯಲ್ಲಿದ್ದಳು.

ಈ ಜಗತ್ತಿನಲ್ಲಿ ಎಲ್ಲದಕ್ಕೂ ಭಯವಿದೆ. ಉನ್ನತಿ ಅವನತಿಗೆ ಕಾರಣವಾಗುತ್ತದೆ. ಏರಿದವನು ಇಳಿಯಬೇಕು. ಪ್ರಪಂಚದ ಯಾವುದೇ ಸಂಪತ್ತು, ಕೀರ್ತಿ, ಅಧಿಕಾರಕ್ಕೆ ಚ್ಯುತಿ ಬರುತ್ತದೆ. ಇದು ಇದ್ದಾಗಲೂ ನಿರ್ಭಯವಾಗಿ, ನಿಶ್ಚಿಂತನಾಗಿರಬೇಕು. ನಮ್ಮ ಬಾವಿಯ ಸಂಪರ್ಕ ಸಮುದ್ರಕ್ಕೆ ಕೊಡಬೇಕು ಎನ್ನುವಂತೆ ನಮ್ಮ ಮನಸ್ಸಿನ ಸಂಪರ್ಕ ದೇವನಲ್ಲಿರಬೇಕು. ಮಹತ್ತಿನೊಂದಿಗೆ ಮಹತ್ತು ಕೂಡಬೇಕು. ಮನುಜ ಶಕ್ತಿಯನ್ನು ಮಹಾದೇವನೊಂದಿಗೆ ಗುಣಿಸಿಕೊಂಡರೆ ಮನುಷ್ಯ ಮಹಾಂತನಾಗುತ್ತಾನೆ. “ಆಗುವುದೆಲ್ಲನಾಗಿ ಬಿಡಲಿ ಸದಾ ಸದ್ಗುರುವಿನ ದಯೆವೊಂದಿರಲಿ” ಸುಖ-ದುಃಖ ಬಂದರೂ ಅವನ ಪ್ರಸಾದ ಎಂದು ತಿಳಿದು ನಿಶ್ಚಿಂತನಾಗಿರಬೇಕು. ಜ್ಞಾನವೇ ನಿನ್ನ ಒಡೆವೆಯಾಗಬೇಕು ಎಂಬಂತಹ ನಿಜ ಮಾತುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಅಕ್ಕನಿಗೆ ಅರಮನೆಯೇ ಅಧ್ಯಾತ್ಮದ ತರಬೇತಿ ಕೇಂದ್ರವೆನಿಸಿತು.

Contact Your\'s Advertisement; 9902492681

ದೇವರು ಇದ್ದಾನೆ. ದೇವರು ನೋಡುತ್ತಿದ್ದಾನೆ. ದೇವರು ಪರೀಕ್ಷಿಸುತ್ತಿದ್ದಾನೆ (ಇನೋಪ) ಎಂಬ ಭರವಸೆಯಿದ್ದರೆ ದೇವನ ಒಲುಮೆ ಸಾಧ್ಯ ಎಂದು ಬಗೆದ ಮಹಾದೇವಿ, ಒಲಿದು ಮೋಕ್ಷವ ಕೊಡಲಿ, ಒಲಿಯದೆ ನರಕಕ್ಕೆ ಕಳುಹಿಸಲಿ ಎಂಬ ಪೂರ್ಣಪ್ರೇಮ, ಫೂರ್ಣ ಭರವಸೆ, ಪೂರ್ಣ ಮುಗ್ಧತೆಯಿಂದ ದೇವರನ್ನು ಮುಟ್ಟುತ್ತಾಳೆ. ತಟ್ಟುತ್ತಾಳೆ. ನಾನು ಪರಮಾತ್ಮನಿಗೆ ಸಂಬಂಧಿಸಿದವಳು, ಪರಮಾತ್ಮ ನನ್ನೊಂದಿಗೆ ಇದ್ದಾನೆ. ಸೃಷ್ಟಿಯ ಇವೆಲ್ಲವೂ ಆ ದೇವನಿಗೆ ಸೇರಿದ ವಸ್ತುಗಳು. ಇದೆಲ್ಲ ಅವನು ಕೊಟ್ಟ ದೇಣಿಗೆ-ಕಾಣಿಕೆ. ಎಲ್ಲವನ್ನು ಲಿಂಗಕ್ಕೆ ಅರ್ಪಿಸಿ ಅದನ್ನು ಪ್ರಸಾದ ಎಂದು ಬಗೆದು ಬದುಕುತ್ತಿದ್ದಳು ಮಹಾದೇವಿ, ಭಕ್ತಿಯ ಪರಾಕಾಷ್ಠೆ ತಲುಪಿದ್ದಳು.

ಮೊನ್ನೆ ನಡೆದ ಘಟನೆಯಿಂದ ತೀವ್ರ ವಿಚಲಿತಳಾಗಿದ್ದ ಅಕ್ಕ ಅದರಿಂದ ಹೊರ ಬಂದು ಶಾಂತಚಿತ್ತಳಾಗಿ ಚನ್ನಮಲ್ಲಿಕಾರ್ಜುನ ಧ್ಯಾನದಲ್ಲಿ ತೊಡಗಿರುವುದನ್ನು ಕಂಡ ಕೌಶಿಕರಾಜನು, ಮೊನ್ನೆ ನಡೆದ ಅಚಾತುರ್ಯ ಘಟನೆಯಿಂದ ನೋವಾಗಿದ್ದರೆ ಕ್ಷಮಿಸಿ ಎಂದು ಮಂತ್ರಿ ವಸಂತಕನೊಂದಿಗೆ ಕೇಳುತ್ತಾನೆ. ಅದುವರೆಗೆ ಲಿಂಗಪೂಜೆ ಮಾಡಿ ಪ್ರಸನ್ನಗೊಂಡಿದ್ದ ಮಹಾದೇವಿ, “ಆಯ್ತು ನಿಮ್ಮನ್ನು ಕ್ಷಮಿಸಿರುವೆ. ನನಗೆ ಗುರುಗಳ ದರ್ಶನ ಮಾಡಬೇಕಿದೆ. ಅವರು ಇಲ್ಲಿಗೆ ಬಂದಾಗ ಎಲ್ಲ ಬಗೆಯ ವ್ಯವಸ್ಥೆಯ ಜೊತೆಗೆ ಅವರನ್ನು ಗೌರವಯುತವಾಗಿ ನೋಡಿಕೊಳ್ಳಬೇಕು. ಒಂದುವೇಳೆ ಅದಕ್ಕೆ ಚ್ಯುತಿ ಬಂದಲ್ಲಿ ನಾನು ಮತ್ತೆ ಸುಮ್ಮನಿರುವುದಿಲ್ಲ ಎಂದು ಅವರನ್ನು ಎಚ್ಚರಿಸುತ್ತಾಳೆ.

ಮರುದಿನ ಗುರುಗಳ ಆಗಮನ ಕಂಡ ಅಕ್ಕ ಅರಮನೆಯಲ್ಲಿ ಸಂತಸ-ಸಂಭ್ರಮದಿಂದ ಓಡಾಡುತ್ತಿರುತ್ತಾಳೆ. ಅಕ್ಕನ ಉತ್ಸಾಹ ಗರಿಗೆದರಿರುತ್ತದೆ. ಅತ್ಯಂತ ಉಲ್ಲಸಿತಳಾಗಿ ಓಡಾಡುತ್ತಿರುವುದನ್ನು ಕಂಡ ಕೌಶಿಕನಿಗೆ ಅಳಕು ಶುರುವಾಗುತ್ತದೆ. ನಮ್ಮ ಅರಮನೆಗೆ ಆಗಮಿಸಲಿರುವ ಆ ಗುರು ಹೇಗಿರಬಹುದು? ನನಗಿಂತ ಚಿಕ್ಕವ, ನನಗಿಂತ ಸುಂದರ ಇರಬಹುದೇ? ಎಂಬ ಸಂಶಯದ ಹುಳ ಮನದಲ್ಲಿ ಸುಳಿದಾಡುತ್ತದೆ. ಆದರೂ ತನ್ನ ಪ್ರಜ್ಞೆ ಎಚ್ಚರಿಸಿಕೊಂಡು ತನಗೆ ತಾನು ವಿವೇಕ ಹೇಳಿಕೊಂಡು ಸುಮ್ಮನಿರುತ್ತಾನೆ. ಗುರುವಿನ ಪಾದಪೂಜೆ, ಪ್ರಸಾದ ಮುಗಿದು ಅನುಭಾವ ಗೋಷ್ಠಿ ನಡೆದಿರುತ್ತದೆ. ಅಂತಹ ಸಂದರ್ಭದಲ್ಲಿ ಅರಮನೆಯಲ್ಲಿ ಮತ್ತೊಂದು ಅವಘಡ ನಡೆದು ಬಿಡುತ್ತದೆ.

ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ

(ಸ್ಥಳ: ಎಚ್.ಸಿ.ಜಿ.ಆಸ್ಪತ್ರೆ ಎದುರು,ಖೂಬಾ ಪ್ಲಾಟ್,ಕಲಬುರಗಿ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here