‘ಅನಾತ್ಮ ಕಥನ’ ದ ಎಚ್ ಎಸ್ ವೆಂಕಟೇಶಮೂರ್ತಿ ಜೊತೆ ಮಾತುಕತೆ

0
238
  • ಶಿವರಂಜನ್ ಸತ್ಯಂಪೇಟೆ

“ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ, ಎಲ್ಲ ಸೇರಿ ನನ್ನ ಬಾಯಿಗೆ ಬಣ್ಣೆ ಮೆತ್ತಿದರಮ್ಮ” ಬಹುಶಃ ಈ ಪದ್ಯವನ್ನು ಕೇಳದ ಕನ್ನಡಿಗರೇ ಇಲ್ಲ. ಮಗುವೊಂದು ತನ್ನ ತಾಯಿಗೆ ದೇವರ ಮೇಲೆ ಪ್ರಮಾಣ ಮಾಡಿ ಹೇಳುವ ಮಗುವಿನ ಮುಗ್ಧತೆಯನ್ನು ವರ್ಣಿಸಿದವರು ಬೇರಾರು ಅಲ್ಲ. ಕಲಬುರಗಿಯಲ್ಲಿ ಇದೇ ಫೆಬ್ರವರಿ, ೫, ೬ ಮತ್ತು ೭ರಂದು ನಡೆಯಲಿರುವ ಅಖಿಲ ಭಾರತ ೮೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಾಹಿತಿ ಎಚ್. ಎಸ್. ವೆಂಕಟೇಶ ಮೂರ್ತಿ. “ಭಾವಗೀತೆ”ಗಳ ಕವಿ ಎಂದೇ ಖ್ಯಾತನಾಮರಾದ ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

Contact Your\'s Advertisement; 9902492681

ಪ್ರ: ನಿಮ್ಮ ಬರವಣಿಗೆಗೆ ಪ್ರೇರಣೆ ಯಾರು?

ಉ: ನನ್ನ ಕುಟುಂಬ ಹಾಗೂ ಸುತ್ತುವರಿದ ಪರಿಸರ. ಒಟ್ಟಾರೆಯಾಗಿ ಹೇಳಬೇಕಾದರೆ ನನ್ನ ಬದುಕೇ ನನ್ನ ಬರವಣಿಗೆಗೆ ಪ್ರೇರಣೆ.

ಪರಿವೃತ್ತ, ಇಂದುಮುಖಿ, ಮರೆತ ಸಾಲುಗಳು ಸೇರಿದಂತೆ ಒಟ್ಟು ೧೭ ಕವನ ಸಂಕಲನ, ಬಾನಸವಾಡಿಯ ಬೆಂಕಿ, ಪುಟ್ಟಾರಿಯ ಮತಾಂತರ ಎರಡು ಕಥಾಸಂಕಲನ, ತಾಪಿ, ಅಮಾನುಷರು, ಕದಿರನ ಕೋಟೆ, ಅಗ್ನಿಮುಖ ಎಂಬ ನಾಲ್ಕು ಕಾದಂಬರಿ, ನೂರು ಮರ, ನೂರು ಸ್ವರ, ಮೇಘಧೂತ, ಕಥನ ಕವನ, ಆಕಾಶದ ಹಕ್ಕು ಸೇರಿ ನಾಲ್ಕು ಸಾಹಿತ್ಯ ವಿಮರ್ಶೆ, ಹೆಜ್ಜೆಗಳು, ಒಂದು ಸೈನಿಕನ ವೃತ್ತಾಂತ, ಅಗ್ನಿ ವರ್ಣ, ಚಿತ್ರಪಟ ಸೇರಿದಂತೆ ಏಳು ನಾಟಕ, ಹಕ್ಕಿ ಸಾಲು, ಹೂವಿನ ಶಾಲೆ, ಸೋನಿ ಪದ್ಯಗಳು, ಉತ್ತರಾಯಣ ಮತ್ತು.. ಎಂಬ ನಾಲ್ಕು ಮಕ್ಕಳ ಸಾಹಿತ್ಯ ಕೃತಿಗಳು, ಸಿ.ವಿ. ರಾಮನ್, ಹೋಮಿ ಜಹಾಂಗೀರ್ ಬಾಬಾ, ಬಾಹುಬಲಿ, ಸೋದರಿ ನಿವೇದಿತಾ, ಎಚ್ಚ್‌ಸ್ವಿ ಅನಾತ್ಮ ಕಥನ ಎಂಬ ನಾಲ್ಕು ಜೀವನ ಚರಿತ್ರೆ ಕೃತಿಗಳು ಸೇರಿದಂತೆ ಒಟ್ಟು ೫೦ ಕೃತಿಗಳನ್ನು ರಚಿಸಿದ್ದಾರೆ.

ಪ್ರ: ತಾವು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದಾಗ ಕೇಳಿ ಬಂದ ಅಪಸ್ವರಗಳ ಬಗ್ಗೆ?

ಉ: ತಮಗೆ ಅನಿಸಿದ ವಿಷಯಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಹಾಗೆ ನೋಡಿದರೆ ಸಾಹಿತಿಗಳಿಗೆ ಬೌಂಡರಿ, ಬಾರ್ಡ್‌ರ್ ಫಿಕ್ಸ್ ಮಾಡಲು ಬರುವುದಿಲ್ಲ. ಹಿಂದಿನ ಸಂಪ್ರದಾಯದ ಪ್ರಕಾರ ಬೇರೆ ಕಡೆಯವರೂ ಸಮ್ಮೇಳನಾಧ್ಯಕ್ಷರಾದ ಉದಾಹರಣೆಗಳಿವೆ. ಮೇಲಾಗಿ ನಾನು ಅಪೇಕ್ಷೆಪಟ್ಟಿರಲಿಲ್ಲ. ಕನ್ನಡ ಸಾಹಿತ್ಯ ಪರಿಷತ್ ನನಗೆ ಈ ಗೌರವ ಕೊಟ್ಟಿದೆ. ಕನ್ನಡಮ್ಮನ ಆಶೀರ್ವಾದವನ್ನು ವಿನಯಪೂರ್ವಕವಾಗಿ ಸ್ವೀಕರಿಸಿದ್ದೇನೆ.

ಪ್ರ: ಕವಿ, ಸಾಹಿತಿಗಳು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಬೇಕೆ?

ಉ: ಅದು ಅವರವರಿಗೆ ಬಿಟ್ಟದ್ದು. ತಮಗೆ ಮುಖ್ಯ ಅನಿಸಿದಾಗ ತಮ್ಮ ಕ್ರಿಯೆಗೆ ಅನುಗುಣವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಾಕು ಅಸನಿಸುತ್ತದೆ. ಕಾವ್ಯದ ಮೂಲಕ ಏನು ಹೇಳಬೋಕೋ ಅದನ್ನು ನಾನು ಹೇಳಿಕೊಂಡು ಬಂದಿದ್ದೇನೆ.

ಪ್ರ: ನಿಮ್ಮ ಕಾವ್ಯಗಳಲ್ಲಿ ಮೊನಚು, ಮಿಣುಕು ಕಾಣುವುದಿಲ್ಲ ಎಂಬ ಆರೋಪವಿದೆಯಲ್ಲಾ?

ಉ: ಎಲ್ಲರದೂ ಒಂದೇ ಶೈಲಿ, ಒಂದೇ ಪ್ರವೃತ್ತಿ ಇರಬೇಕೆಂಬುದೇನಿಲ್ಲ. ಒಪ್ಪುವ, ಒಪ್ಪಲಾರದ ಅಂಶಗಳಿರುತ್ತವೆ. ಲಂಕೇಶರ ಕಾವ್ಯಾತ್ಮಕತೆ ಶೈಲಿ ಇಷ್ಟ. ಆದರೆ ಅವರ ಆಕ್ರಮಣಶೀಲತೆಯ ಶೈಲಿ ನನಗೆ ಇಷ್ಟವಿರಲಿಲ್ಲ. ನಮಗೆ ಲಾಭ, ಸಂತೋಷ ಕೊಡುವುದನ್ನು ಸ್ವೀಕರಿಸಬೇಕು.

ಪ್ರ: ಕವಿಯಾದಾತ ಕಲಿಯೂ ಆಗಿರಬೇಕೆ?

ಉ: ಪಂಪ ಆಗಿದ್ದ ಅಷ್ಟೇ! ನನ್ನ ದೃಷ್ಟಿಯಲ್ಲಿ ಕಲಿತುಕೊಂಡರೆ ಸಾಕು. ಅಂತರಂಗದಲ್ಲಿನ ಪ್ರಾಮಾಣಿಕ ಅನಿಸಿಕೆ ಅಭಿವ್ಯಕ್ತಿಸುವುದೇ ನಿಜವಾದ ಕಲಿತನ. ಯಾವುದೇ ಒಂದು ವಾಕ್ಯವನ್ನಿಡಿದು ಎಳೆದು ಜಗ್ಗಾಡುವುದು ಸರಿಯಲ್ಲ.ನಮ್ಮಲ್ಲಿ ಅನೇಕ ಮಠಾಧೀಶರೂ ಬರೆದಿದ್ದಾರೆ. ಬೇಂದ್ರೆ- ಮಾಸ್ತರರಾಗಿದ್ದರು. ಕೆ.ಎಸ್. ನರಸಿಂಹ ಸ್ವಾಮಿ-ಗುಮಾಸ್ತರಾಗಿದ್ದರು. ಕಾರಂತ -ಸಮಾಜ ಸೇವೆ ಮಾಡುತ್ತಲೇ ಕಥೆ, ಕಾದಂಬರಿ ಬರೆಯಲಿಲ್ಲವೇ? ಎಲ್ಲರಿಗೂ ಬದುಕು ಮುಖ್ಯ. ಅದರಂತೆ ವೃತ್ತಿ ಏನೋ ಇದ್ದು, ಪ್ರವೃತ್ತಿಯಿಂದ ಈ ಬರವಣಿಗೆಯ ಕೆಲಸ ಮಾಡುತ್ತಿರುತ್ತಾರೆ. ಜೀವನ ನಿರ್ವಹಣೆಯ ಜೊತೆಗೆ ಪ್ರವೃತ್ತಿ ಮೂಲಕ ಮನಸ್ಸಿಗೆ ಮುದ ನೀಡುವ ಕೆಲಸ ಮಾಡುತ್ತ ಹೋಗುತ್ತಾರೆ. ಇದು ತನ್ನಿಂದ ತಾನೇ ಸಮುದಾಯ ಅಥವಾ ಸಮಾಜಕ್ಕೆ ಉಪಯೋಗವಾಗಲಿದೆ.

ಪ್ರ: ಬರಹಗಾರನಿಗೆ ಸಾಮಾಜಿಕ ಬದ್ಧತೆ ಇರಬೇಕೆ?

ಉ: ತನ್ನ ಬರವಣಿಗೆ ಬಗ್ಗೆ ಬದ್ಧತೆಯಿದ್ದರೆ ಸಾಮಾಜಿಕ ಬದ್ಧತೆ ತಾನೇ ಬರುತ್ತದೆ. ಎಲ್ಲರೂ ತಮ್ಮ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ, ಗಂಭೀರವಾಗಿ ತಮ್ಮ ಕೆಲಸ ನಿರ್ವಹಿಸಬೇಕು. ಇದಕ್ಕಿಂತ ದೊಡ್ಡದಾದ ದೇಶಸೇವೆ ಮತ್ತೊಂದಿಲ್ಲ. ಈ ಮಧ್ಯೆ ಸಮಯ ಉಳಿದರೆ ತಮ್ಮ ಸಾಮರ್ಥ್ಯವನ್ನು ಅವಲಂಬಿಸಿ ಬೇರೆ ಕೆಲಸ ಮಾಡಬೇಕು.

ಪ್ರ: ಕನ್ನಡದ ಬೆಳವಣಿಗೆಗೆ ಮಾಡಬೇಕಿರುವುದೇನು?

ಉ: ನಮ್ಮ ಎಲ್ಲ ಬಗೆಯ ವ್ಯವಹಾರಗಳು ಕನ್ನಡದಲ್ಲಿ ಬಳಕೆಯಾಗಬೇಕು. ಎಲ್ಲ ಕ್ಷೇತ್ರದಲ್ಲಿ ಸರ್ವತ್ರ ಕನ್ನಡ ಬಳಸಬೇಕು. ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದರ ಜೊತೆಗೆ ಶಾಲೆ, ಸಮಾಜ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡದ ವಾತಾವರಣ ಇರಬೇಕು. ಸರ್ಕಾರ ಉದ್ಯೋಗ, ನೇಮಕಾತಿಯಲ್ಲಿ ಕನ್ನಡಿಗರಿಗೆ ಪ್ರಾಶಸ್ತ್ಯ ಒದಗಿಸಬೇಕು.

ಪ್ರ: ಯುವ ಬರಹಗಾರರರಿಗೆ ನಿಮ್ಮ ಸಲಹೆ ಏನು?

ಉ: ಕೊಟ್ಟು ಪ್ರಯೋಜನವಿಲ್ಲ. ಅದನ್ನು ರೂಢಿಸಿಕೊಳ್ಳಬೇಕು. ಅನುಭವಜನ್ಯ, ಪ್ರಾಮಾಣಿಕ ಅನಿಸಿಕೆಯನ್ನು ಬರೆಯಲು ಪ್ರಯತ್ನಿಸಬೇಕು. ಇದು ನನಗೆ ನಾನು ಹೇಳಿಕೊಳ್ಳುವ ಮಾತು ಹೊರತಾಗಿ ಇನ್ನೊಬ್ಬರಿಗೆ ಖಂಡಿತ ಅಲ್ಲ. ಹಿರಿಯರು, ಕಿರಿಯರು ಎನ್ನುವ ಪ್ರಶ್ನೆಯೇ ಇಲ್ಲ. ಪ್ರತಿಭೆಯೇ ಮುಖ್ಯ. ಆದರೆ ಸಾಹಿತ್ಯದಲ್ಲಿ ಅನುಭವ ಮತ್ತು ಅಭಿವ್ಯಕ್ತಿ ಎರಡೂ ಮುಖ್ಯ.

ನಮ್ಮಿಬ್ಬರ ಈ ಸಂಭಾಷಣೆಯ ಮಧ್ಯೆ ಅವರ ಉತ್ತರಗಳಿಗೆ ಹಲವಾರು ಬಾರಿ ತಕರಾರು, ಆಕ್ಷೇಪ ಎತ್ತಿದಾಗ ಅಲ್ವಾ? ಹೌದಾ? ಎಂದು ನನ್ನನ್ನೇ ಒಪ್ಪಿಸುವಂತಿತ್ತು ಅವರ ಮಾತಿನ ದಾಟಿ.

ಮೂಲತಃ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊದ್ದಿಗೆರೆಯವರಾದ ಎಚ್‌ಎಸ್ವಿಯವರು ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅಧ್ಯಯನ, ಅಧ್ಯಾಪನದ ಮಧ್ಯೆ ಚಲನಚಿತ್ರ ಮತ್ತು ರಂಗಭೂಮಿಯೊಡನೆ ನಿಕಟ ಸಂಪರ್ಕವಿಟ್ಟುಕೊಂಡು ಚಿನ್ನಾರಿಮುತ್ತಾ, ಕೊಟ್ರೇಶಿಯ ಕನಸು, ಕ್ರೌರ್ಯ ಮುಂತಾದ ಸಿನಿಮಾ, ಯಾವ ಜನ್ಮದ ಮೈತ್ರಿ, ಸವಿಗಾನ ಮುಂತಾದ ಟಿವಿ ದಾರಾವಾಹಿಗಳಿಗೆ ಶಿರ್ಷಿಕೆ ಗೀತೆ, ಸಂಭಾಷಣೆ, ಹಾಡು ಬರೆದಿದ್ದಾರೆ. ಅನಂತ ನಮನ, ಮಕ್ಕಳ ಗೀತೆಗಳು ಸುಳಿಮಿಂಚು, ಭಾವಭೃಂಗ ಇತ್ಯಾದಿ ರ್ಧವನಿ ಸುರಳಿಗಳನ್ನು ಸಹ ಹೊರ ತಂದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here