ಮೌಲ್ಯಯುತ ಕೃತಿಗಳು ಬದುಕಿಗೆ ಸ್ಪೂರ್ತಿ : ಡಾ. ಎಸ್. ಆರ್. ಶಿಣ್ಣೂರು

0
59

ಶಹಾಪುರ: ಅತಿ ವೇಗದ ಬದುಕಿನ ಜಂಜಾಟದಲ್ಲಿ ಎಲ್ಲವನ್ನೂ ಮರೆತು ಕೊಂಚ ಕ್ರಿಯಾತ್ಮಕ ಹಾಗೂ ಸೃಜನಾತ್ಮದ ಸಾಹಿತ್ಯದೆಡೆಗೆ ಹೆಚ್ಚೆಚ್ಚು ಒಲವು ತೋರಿದಾಗ ಮಾತ್ರ ಮೌಲ್ಯಯುತ ಕೃತಿಗಳು ನೆಮ್ಮದಿಯ ಬದುಕಿಗೆ ಸ್ಪೂರ್ತಿಯಾಗಬಲ್ಲವು ಎಂದು ಖ್ಯಾತ ವೈದ್ಯರಾದ ಡಾ.ಎಸ್.ಆರ್.ಶಿಣ್ಣೂರು ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಂಡಿರುವ ಹಿರಿಯ ಸಾಹಿತಿ ದೊಡ್ಡಬಸಪ್ಪ ಬಳೂರಗಿ ಅವರು ರಚಿಸಿದ ಜೀವನ ನೀತಿ ಹಾಗೂ ವಚನಸುಮ ಎಂಬ ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜೊತೆಗೆ ಮಹಾಮಾರಿ ಕರೋನಾ ವೈರಸ್ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಿ ಎಂದು ಹಲವಾರು ಸಲಹೆ, ಸೂಚನೆಗಳು ನೀಡಿದರು.

Contact Your\'s Advertisement; 9902492681

ಜೀವನ ನೀತಿ, ಕೃತಿ ಬಿಡುಗಡೆ ಮಾಡಿ ಮಾತನಾಡಿದ ಡಾ. ಅಬ್ದುಲ್ ಕರೀಂ ಕನ್ಯಾಕೋಳೂರ ಅವರು ದೊಡ್ಡಬಸಪ್ಪ ಬಳೂರಗಿ ಅವರು ಸುಸಂಸ್ಕೃತ ಹಾಗೂ ಸೌಮ್ಯ ಸ್ವಭಾವದ ಸರಳ ಸಜ್ಜನಿಕಯ ವ್ಯಕ್ತಿ ಅಲ್ಲದೆ ಅವರ ಜೀವನ ಶೈಲಿಯೂ ಕೂಡ ಬಹಳ ಸರಳ ಮತ್ತು ಶಿಸ್ತಿನಿಂದ ಕೂಡಿದೆ ಎಂದು ಹೇಳಿದರು. ಜೊತೆಗೆ ಹಲವಾರು ಸೃಜನಾತ್ಮಕ ಹಾಗೂ ಅಧ್ಯಾತ್ಮಿಕ ಸಾಹಿತ್ಯವನ್ನು ಮೈಗೂಡಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಕೃತಿಗಳು ನೀಡುವುದರ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ ಕಟ್ಟುವುದರಲ್ಲಿ ಇವರ ಶ್ರಮ ಅಪಾರವಿದೆ ಎಂದು ಬಣ್ಣಿಸಿದರು.

ವಚನ ಸುಮಾ ಕೃತಿಯ ಕುರಿತು ಚಿಂತಕರಾದ ಸಾಹಿತಿ ಶಿವಣ್ಣ ಇಜೇರಿ ಮಾತನಾಡಿ ವಚನ ಸಾಹಿತ್ಯ ಕೇವಲ ಇತಿಮಿತಿಗೆ ಸೀಮಿತವಾಗಿರುವುದಿಲ್ಲ. ಇಡೀ ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಗಳ ಒಳತಿಗಾಗಿ ಇರುವುದನ್ನು ನಾವು ಎಂದಿಗೂ ಮರೆಯಬಾರದು. ದ್ವಂದ್ವ ನೀತಿಯನ್ನು ಖಂಡಿಸಿ ಪ್ರಾಮಾಣಿಕತೆ ಹಾಗೂ ಶಿಸ್ತು ಬದ್ಧತೆಗೆ ಜಾಸ್ತಿ ಒತ್ತು ನೀಡಿದವರು ಬಸವಾದಿ ಶರಣರು. ಆದ್ದರಿಂದ ವಚನ ಸಾಹಿತ್ಯವನ್ನು ಎಲ್ಲರೂ ಓದಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಗುರುಪಾದೇಶ್ವರ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಿದ್ದಲಿಂಗಣ್ಣ ಆನೆಗುಂದಿ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಖ್ಯಾತ ಉದ್ಯಮಿಗಳಾದ ಬಸವರಾಜ ಹಿರೇಮಠ, ಸಾಹಿತಿ ಹಾಗೂ ಸಂಶೋಧಕರಾದ ಡಾ.ಮೋನಪ್ಪ ಶಿರವಾಳ, ಡಾ.ರಮೇಶ ಹಿರೇಮಠ ಭಾಗವಹಿಸಿದ್ದರು.

ಕೃತಿಯ ಲೇಖಕ ಹಾಗೂ ಹಿರಿಯ ಸಾಹಿತಿ ದೊಡ್ಡಬಸಪ್ಪ ಬಳೂರಗಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಸವರಾಜ ಸಿಣ್ಣೂರು ನಿರೂಪಿಸಿದರು. ಪಂಚಾಕ್ಷರಿ ಹಿರೇಮಠ ಸ್ವಾಗತಿಸಿದರು. ಕವಯತ್ರಿ ಶಕುಂತಲಾ ಹಡಗಲಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here