ಸಾಮಾಜಿಕ ಕ್ರಾಂತಿಯ ಮಹಾನ್ ನಾಯಕ ಡಾ. ಅಂಬೇಡ್ಕರ್.

0
269

ಅದು ೨೦ ನೆಯ ಶತಮಾನದ ಕಾಲ ಸ್ವಾತಂತ್ರ್ಯ ಚಳುವಳಿಗಳು ತೀವ್ರತರವಾದ ಸ್ವರೂಪ ಪಡೆದುಕೊಂಡ ಕಾಲವದು, ಬ್ರಿಟಿಷ್ ಆಡಳಿತಶಾಹಿಯ ಕಪಿಮುಷ್ಟಿಯಿಂದ ದೇಶವನ್ನು ಸ್ವತಂತ್ರಗೊಳಿಸಲು ಅನೇಕ ಹೋರಾಟಗಳು, ಚಳುವಳಿಗಳು ನಡೆಯುತ್ತಿದ್ದವು. ಮಹಾತ್ಮ ಗಾಂಧೀಜಿ ಆದಿಯಾಗಿ ಅನೇಕ ಜನ ಹೋರಾಟಗಾರರು ಮುಂಚೂಣಿಯಲ್ಲಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಪಡೆದುಕೊಳ್ಳಬೇಕೆಂಬುದು ಎಷ್ಟು ಅನಿವಾರ್ಯತೆ ಇತ್ತೋ ಅಷ್ಟೇ ಅನಿವಾರ್ಯತೆ ಶತಮಾನಗಳಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಶೋಷಣೆಗೆ, ತುಳಿತಕ್ಕೆ ಒಳಗಾಗಿದ್ದ ಸಮಾಜಗಳು ಸಮಾನತೆಯ ಸ್ವಾತಂತ್ರ್ಯಕ್ಕಾಗಿ ಹಾತೊರೆಯುತ್ತದ್ದವು. ಅಂದಿನ ಕಾಲದಲ್ಲಿ ಈ ಶೋಷಿತ, ಹಿಂದುಳಿದ ವರ್ಗಗಳ ಗಟ್ಟಿ ಧ್ವನಿಯಾಗಿ ಬಂದವರೆ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಅಂಬೇಡ್ಕರ್.

ಡಾ. ಅಂಬೇಡ್ಕರ್ ರವರು ಶೋಷಿತ ಸಮಾಜದಲ್ಲಿ ಹುಟ್ಟಿ(ಏಪ್ರಿಲ್ 14 1891) ಬೆಳೆದ ನಾಯಕ, ತನ್ನ ಸಮಾಜವು ಹೇಗೆ ಮುಂದುವರಿದ ಸಮಾಜಗಳಿಂದ ಶೋಷಣೆಗೆ, ಜಾತಿಯತೆಗೆ ಒಳಗಾಗಿದೆ ಎಂಬುದನ್ನು ಅವರು ತಮ್ಮ ಬಾಲ್ಯದ ಎಲ್ಫಿನ್ ಸ್ಟೋನ್ ಶಾಲೆಯ ದಿನಗಳಿಂದ ಹಿಡಿದು ಬಾಂಬೆ ವಿಶ್ವವಿದ್ಯಾಲಯದ ಪದವಿವರೆಗೂ ಸ್ವತಃ ಅಸ್ಪೃಶ್ಯತೆಯ ನೋವು ಬಲ್ಲವರಾಗಿದ್ದರು.

Contact Your\'s Advertisement; 9902492681

ಮುಂದೆ ಬರೋಡ ಮಹಾರಾಜ ಸಯ್ಯಾಜಿರಾವ್ ಗಾಯಕವಾಡ ರವರಿಂದ ಸ್ಕಾಲರ್ ಶಿಪ್ ಪಡೆದು ಅಮೇರಿಕಾದ ಕೋಲಂಬಿಯಾ ವಿಶ್ವವಿದ್ಯಾಲಯದಿಂದ ಮತ್ತು ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ನಿಂದ ಉನ್ನತ ಶಿಕ್ಷಣ ಪಡೆದು ಭಾರತಕ್ಕೆ ಹಿಂತಿರುಗಿ ಪೂರ್ವ ಒಪ್ಪಂದದಂತೆ ಅವರ ಆಸ್ಥಾನದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅಸ್ಪೃಶ್ಯನೆಂಬ ಕಾರಣಕ್ಕೆ ಇವರ ಅಧೀನದಲ್ಲಿ ಕೆಲಸ ಮಾಡಲು ಮೇಲ್ವರ್ಗದ ಜನ ಒಪ್ಪುವುದಿಲ್ಲ ಇದರಿಂದಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಬೇಕಾಗುತ್ತೆ, ನಂತರ ಬಾಂಬೆನ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅಲ್ಲಿಯೂ ಅಸ್ಪೃಶ್ಯತೆಯ ಅವರನ್ನು ಬಿಡುವುದಿಲ್ಲ ಕೊನೆಗೆ ಕೆಲಸವನ್ನು ತ್ಯಜಿಸಿ, ಬಾಂಬೆ ಹೈಕೋರ್ಟನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿ ತಮ್ಮ ಸಂಸಾರದ ನೌಕೆ ಸಾಗಿಸುತ್ತಾರೆ.

ಬ್ರಿಟಿಷ್ ಆಯೋಗಗಳು ಮತ್ತು ಅಂಬೇಡ್ಕರ್: ವಿದೇಶದಿಂದ ಉನ್ನತ ಶಿಕ್ಷಣ ಪಡೆದುಕೊಂಡ ಬಂದಿದ್ದ ಅಂಬೇಡ್ಕರ್ ರವರನ್ನು ಭಾರತ ಸರ್ಕಾರ ಕಾಯ್ದೆ 1919ರ ತಯಾರಿಗಾಗಿ ಭಾರತಕ್ಕೆ ಬಂದಿದ್ದ ಬ್ರಿಟಿಷ್ ಸರ್ಕಾರ 3 ಸಮಿತಿಗಳಲ್ಲಿ ಒಂದಾಗಿದ್ದ ಸೌತ್ ಬಾರೋ ಸಮಿತಿ ಭಾರತದ ಶೋಷಿತ ವರ್ಗಗಳ ಪರವಾಗಿ ಅಂಬೇಡ್ಕರ್ ರವರನ್ನು ಆಹ್ವಾನಿಸುತ್ತದೆ, ಆ ಸಭೆಯಲ್ಲಿ ಅಂಬೇಡ್ಕರ್ ರವರು ದಲಿತರಿಗೆ ಪ್ರತ್ಯೇಕ ಮತದಾನ ಹಕ್ಕು ಮತ್ತು ಮೀಸಲಾತಿ ನೀಡಬೇಕೆಂದು ವಾದ ಮಂಡಿಸುತ್ತಾರೆ.

1925 ರಲ್ಲಿ ಬಂದ ಸೈಮನ್ ಆಯೋಗದಲ್ಲಿ ಕೆಲಸ ಮಾಡಲು ಬಾಂಬೆ ಪ್ರೆಸಿಡೆನ್ಸಿ ಸಮಿತಿಯವರು ಅಂಬೇಡ್ಕರ್ ರವರನ್ನು ಪ್ರತಿನಿಧಿಯಾಗಿ ಕಳಿಸುತ್ತಾರೆ, ಆ ಸಮಿತಿಗೆ ಮುಂದೆ ರಚಿತವಾಗುವ ಭಾರತದ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲು ಶೋಷಿತ ಜನಾಂಗದ ಪರ ಪ್ರತ್ಯೇಕ ಶಿಫಾರಸ್ಸು ಪಟ್ಟಿಯನ್ನು ನೀಡುತ್ತಾರೆ ಆದರೆ ಸೈಮನ್ ಆಯೋಗಕ್ಕೆ ಕಾಂಗ್ರೆಸ್ ನಾಯಕರಿಂದ ಬಾರಿ ವಿರೋಧ ವ್ಯಕ್ತವಾಗುತ್ತದೆ.

1930-32 ರ ಮಧ್ಯೆ ಲಂಡನಿನಲ್ಲಿ ನಡೆದ ಮೂರು ದುಂಡು ಮೇಜಿನ ಸಭೆಯಲ್ಲಿ ಅಂಬೇಡ್ಕರ್ ಮತ್ತು ರಾವ್ ಬಹದ್ದೂರ್ ಶ್ರೀನಿವಾಸನ್, ಶೋಷಿತ ವರ್ಗಗಳ ಪ್ರತಿನಿಧಿಯಾಗಿ ಭಾಗವಹಿಸಿ ಭಾರತದ ದಲಿತ ಮತ್ತು ಇತರ ಹಿಂದುಳಿದವರಿಗೆ ಪ್ರತ್ಯೇಕ ಮತದಾನ ಹಕ್ಕು ಮತ್ತು ಮೀಸಲು ಕ್ಷೇತ್ರಗಳ ಬೇಡಿಯನ್ನು ವ್ಯವಸ್ಥಿತವಾಗಿ ಮಂಡಿಸುತ್ತಾರೆ.

ಪೂನಾ ಒಪ್ಪಂದ: ಲಂಡನಿನಲ್ಲಿ ಮುಕ್ತಾಯವಾದ ದುಂಡು ಮೇಜಿನ ಸಭೆಯ ಅಭಿಪ್ರಾಯದಂತೆ ಭಾರತದ ದಲಿತ ಮತ್ತು ಇತರ ಹಿಂದುಳಿದ ವರ್ಗದವರಿಗೆ ಪ್ರತ್ಯೇಕ ಮತದಾನ ಹಕ್ಕು ಮತ್ತು ಮೀಸಲಾತಿಯನ್ನು ಕೊಡಲು ಒಪ್ಪಿ ಅಂದಿನ ಬ್ರಿಟಿಷ್‌ ಪ್ರಧಾನಿ ರಾಮ್ಸೆ ಮ್ಯಾಕ್ ಡೊನಾಲ್ಡ್ ರವರು ಭಾರತಕ್ಕೆ ಕಮ್ಯೂನಲ್/ ಮ್ಯಾಕ್ ಡೊನಾಲ್ಡ್ ಅವಾರ್ಡ್ ಸಮಿತಿಯನ್ನು ಕಳುಹಿಸಿ ಕೊಡುತ್ತಾರೆ. ಈ ಮೊದಲ ಭಾರತದ ಸರ್ಕಾರ ಕಾಯ್ದೆ 1909ರಲ್ಲಿ ಮುಸ್ಲಿಮರಿಗೆ ಮತ್ತು 1919ರಲ್ಲಿ ಸಿಕ್ಕರು, ಭಾರತದ ಕ್ರಿಶ್ಚಿಯನ್ನರು, ಆಂಗ್ಲೊ ಇಂಡಿಯನ್ಸ್, ಯುರೋಪಿಯನ್ ಸಮುದಾಯದವರಗೆ ಮೀಸಲಾತಿ ನೀಡಲಾಗಿತ್ತು.

  • ಅಸ್ಪೃಶ್ಯತೆಯ ವಿರುದ್ಧ ಹೋರಾಟ1927: ಅಸ್ಪೃಶ್ಯತೆಯ ವಿರುದ್ದ ಪೂರ್ಣ ಪ್ರಮಾಣದ ಆಂದೋಲನ ಆರಂಬಿಸಿ ಅನೇಕ ಕ್ರಾಂತಿಕಾರಕ ಹೋರಾಟಗಳನ್ನು ಕೈಗೊಳ್ಳುತ್ತಾರೆ‌.
  • ಮುಖ್ಯವಾಗಿ ಅಂದು ದಲಿತರಿಗೆ ಸಾರ್ವಜನಿಕ ಕುಡಿಯುವ ನೀರು ಮುಟ್ಟವ ಹಾಗಿರಲಿಲ್ಲ ಅದಕ್ಕಾಗಿ ಮಹಾಡನಲ್ಲಿ ಸತ್ಯಾಗ್ರಹ ಮಾಡಿ ಮುಕ್ತ ಮಾಡುತ್ತಾರೆ.
  • 1927: ದಲಿತರನ್ನು, ಮಹಿಳೆಯರನ್ನು ಗುಲಾಮರನ್ನಾಗಿ ನೋಡಬೇಕೆಂದು ಹೇಳಿದ್ದ ಮನುಸ್ಮೃತಿಯನ್ನು ಬಹಿರಂಗವಾಗಿ ಸುಟ್ಟ ಹಾಕಿ ಪ್ರತಿಭಟಿಸಿದರು.
  • 1930: ದಲಿತರಿಗೆ ಹಿಂದೂ ದೇವಾಲಯಗಳ ಪ್ರವೇಶ ಇರಲಿಲ್ಲ, ತಮ್ಮ 15,000 ಬೆಂಬಲಿಗರೊಂದಿಗೆ ನಾಸಿಕನ ಐತಿಹಾಸಿಕ ಕಾಳಾರಾಮ ಮಂದಿರ ಪ್ರವೇಶ ಮಾಡಿ ಮೌಡ್ಯದ ವಿರುದ್ಧ ಸಮರ ಸಾರುತ್ತಾರೆ.
  • ರಾಜಕೀಯದಲ್ಲಿ ಡಾ. ಅಂಬೇಡ್ಕರ್: ಡಾ. ಅಂಬೇಡ್ಕರ್ ರವರು ಸಾಮಾಜಿಕ ಕ್ರಾಂತಿಯ ಜೊತೆಗೆ ರಾಜಕೀಯಕ್ಕೂ ಧುಮುಕಿ 1936ರಲ್ಲಿ ಸ್ವತಂತ್ರ ಕಾರ್ಮಿಕ (ಮುಂದೆ ಶೆಡ್ಯೂಲ್ಡ್ ಕಾಸ್ಟ್ ಫೆಡರೇಶನ್, ಭಾರತೀಯ ರಿಪಬ್ಲಿಕನ್ ಪಕ್ಷ) ಪಕ್ಷ ಹುಟ್ಟು ಹಾಕಿ ಬಾಂಬೆ ಕೇಂದ್ರಿಯ ಶಾಸನ ಸಭೆಗೆ 14(ಮೀ) ಕ್ಷೇತ್ರಗಳಲ್ಲಿ 13 ಮತ್ತು 4 ರಲ್ಲಿ 3 ಸ್ಥಾನ ಗೆಲ್ಲುತ್ತಾರೆ.
  • ಬ್ರಿಟಿಷ್ ಸರ್ಕಾರದ ವೈಸರಾಯ್ ಕೌನ್ಸಿಲನಲ್ಲಿ ಕಾರ್ಮಿಕ ಸಚಿವರಾಗಿ ಕೆಲಸ ನಿರ್ವಹಿಸುತ್ತಾರೆ.
  • 1942: ಬ್ರಿಟಿಷ್ ಗವರ್ನರ್ ಜನರಲ್ ಕೌನ್ಸಿಲ್ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾರೆ.
  • 1947: ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ಅನೇಕ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣರಾದರು.

ಭಾರತದ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಸತತ ಎರಡು ವರ್ಷಗಳ ಪರಿಶ್ರಮದಿಂದ 1949 ನವೆಂಬರ್ 26 ರಂದು ಭಾರತದ ಸಂವಿಧಾನವನ್ನು ರಚಿಸಿ, ಅಂದಿನ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ರವರಿಗೆ ಒಪ್ಪಿಸುತ್ತಾರೆ. 1951ರಲ್ಲಿ ಭಾರತೀಯ ಹೆಣ್ಣು ಮಕ್ಕಳ ಪರವಾಗಿ ಹಿಂದೂ ಕೋಡ್ ಬಿಲ್, ಮತ್ತು ಇನ್ನಿತರ ಅನೇಕ ಹೊಸ ಕಾನೂನುಗಳನ್ನು ಜಾರಿಗೆ ತರಲು ಲೋಕಸಭೆಯಲ್ಲಿ ಮುಂದಾಗುತ್ತಾರೆ, ಅದರೆ ಅಂದಿನ ಹಿಂದೂ ಸಂಪ್ರದಾಯವಾದಿಗಳು ಪ್ರಧಾನಿ ಜವಾಹರಲಾಲ್ ನೆಹರು ರವರ ಮುಖಾಂತರ ಇವರಿಗೆ ಅವಕಾಶ ಕೊಡುವುದಿಲ್ಲ. ಇದರಿಂದ ಮನನೊಂದ ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡಿ ಹೊರಬರುತ್ತಾರೆ.

ಮುಂದೆ 1952 ರಲ್ಲಿ ನಡೆದ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಅಂಬೇಡ್ಕರ್ ತಮ್ಮ ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್ ಪಕ್ಷದಿಂದ ಸೆಂಟ್ರಲ್ ಬಾಂಬೆಯಿಂದ ಕಣಕ್ಕಿಳಿಯುತ್ತಾರೆ ಆದರೆ ಕಾಂಗ್ರೆಸ್ ಪಕ್ಷ ಅವರದೆ ಶಿಷ್ಯನಾಗಿದ್ದ ನಾರಾಯಣ ಕಜ್ರೋಳಕರ್ ಅವರನ್ನು ನಿಲ್ಲಿಸಿ ಸ್ವತಃ ಪ್ರಧಾನಿ ಜವಾಹರಲಾಲ್ ನೆಹರು ರವರು ಅಂಬೇಡ್ಕರ್ ವಿರುದ್ಧ ಪ್ರಚಾರ ಮಾಡಿ ಅವರನ್ನು ಹೀನಾಯವಾಗಿ ಸೋಲಿಸುತ್ತಾರೆ. ಅದೇ ವರ್ಷ ಪಶ್ಚಿಮ ಬಂಗಾಳದಿಂದ ಶೆಡ್ಯೂಲ್ಡ್ ಕಾಸ್ಟ್ ಫೆಡರೇಶನ್ ಪಕ್ಷದಿಂದ ರಾಜ್ಯಸಭೆಗೆ (ಮುಸ್ಲಿಮ್ ಲೀಗ್, ಕಮ್ಯುನಿಸ್ಟ್, ಮತ್ತು ಶ್ಯಾಮಾ ಪ್ರಸಾದ ಮುಖರ್ಜಿ ಯವರ ಭಾರತೀಯ ಜನಸಂಘ, ಸೋಷಿಯಲಿಸ್ಟ್ ಪಕ್ಷಗಳ ಬೆಂಬಲದಿಂದ) ಆಯ್ಕೆಯಾಗುತ್ತಾರೆ.

1954 ರಲ್ಲಿ ಮತ್ತೆ ಬಾಂದ್ರಾ ಲೋಕಸಭಾ ಮತಕ್ಷೇತ್ರದ ಉಪಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ, ಕಾಂಗ್ರೆಸ್ ಪಕ್ಷ ಮತ್ತೆ ತನ್ನ ಅಭ್ಯರ್ಥಿ ಬೋರ್ಕಾರವರನ್ನು ಕಣಕ್ಕಿಳಿಸಿ, ನೆಹರುರವರು ಬಿರುಸಿನ ಪ್ರಚಾರ ಮಾಡಿ ಅಂಬೇಡ್ಕರರನ್ನು ಮತ್ತೊಮ್ಮೆ ಸೋಲಿಸುತ್ತಾರೆ.

ಅಂಬೇಡ್ಕರ್ ಮತ್ತು ಬೌದ್ಧ ಧರ್ಮ: ಹಿಂದೂ ಧರ್ಮ ಸೇರಿದಂತೆ ಇತರ ಯಾವ ಧರ್ಮಗಳಲ್ಲಿ ಅಂಬೇಡ್ಕರ್ ರವರಿಗೆ ಸಮಾನತೆ ಕಾಣಲಿಲ್ಲ, ಆ ಕಾರಣಕ್ಕಾಗಿಯೆ 1936ರಲ್ಲೆ ಅವರೆ ಹೇಳ್ತಾರೆ ನಾನು ಹಿಂದೂ ಅಗಿ ಹುಟ್ಟಿರುವೆ ಆದರೆ ಹಿಂದೂ ಅಗಿ ಸಾಯಲಾರೆ ಎಂದು, 1956 ಅಕ್ಟೋಬರ್ 14ರ ವಿಜಯ ದಶಮಿ ದಿನದಂದು ಬೌದ್ಧ ಧರ್ಮ ಸ್ವೀಕಾರ ಮಾಡುತ್ತಾರೆ. ಕೊನೆಗೆ 1956 ಡಿಸೆಂಬರ್ 6 ರಂದು ದೆಹಲಿಯ ತಮ್ಮ ನಿವಾಸದಲ್ಲಿ ಮಹಾಪರಿ ನಿರ್ವಾಣ ಹೊಂದುತ್ತಾರೆ.

ಅಂಬೇಡ್ಕರ್ ಮತ್ತು ಪುಸ್ತಕಗಳು: ಅಪ್ರತಿಮ ಬುದ್ದಿವಂತರಾಗಿದ್ದ ಅಂಬೇಡ್ಕರ್ ರವರು ಅಂದಿನ ಕಾಲದಲ್ಲಿ ಅತಿಹೆಚ್ಚು ಪದವಿ ಪಡೆದುಕೊಂಡಿದ್ದ ಭಾರತೀಯರಾಗಿದ್ದರು. ಸುಮಾರು ೫೦ ಸಾವಿರಕ್ಕೂ ಹೆಚ್ಚು ಪುಸ್ತಕಗಳ ಗ್ರಂಥಾಲಯ ಅವರ ಬಳಿ ಇತ್ತು. ಭಾರತದ ಆರ್ಥಿಕತೆಯ ಕುರಿತು ದ ಪ್ರಾಬ್ಲಮ್ ಆಫ್ ರೂಪಿ, ಬೌದ್ಧ ಧರ್ಮ ಕುರಿತು ದ ಬುದ್ಧ ಮತ್ತು ಆತನ ಧಮ್ಮ, ಅಸ್ಪೃಶ್ಯತೆಯ ಕುರಿತು ಅನಿಹಿಲೇಶನ್ ಆಫ್ ಕಾಸ್ಟ್, ಹು ವೇರ್ ಶೂದ್ರಾಸ್, 1940ರಲ್ಲಿ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆ ಇಟ್ಟಿದರ ಕುರಿತು ದ ಥಾಟ್ಸ್ ಆಫ್ ಪಾಕಿಸ್ತಾನ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.

ವಿಶ್ವದಾದ್ಯಂತ ಹೆಚ್ಚು ಪ್ರಶಂಸೆಗೆ ಜ್ಞಾನಕ್ಕೆ ಪಾತ್ರರಾಗಿರುವ ಡಾ. ಅಂಬೇಡ್ಕರ್ ರವರನ್ನು ವಿಶ್ವಸಂಸ್ಥೆ ಅವರ ಹುಟ್ಟಿದ ದಿನವನ್ನು ವಿಶ್ವ ಜ್ಞಾನದ ದಿನ ವನ್ನಾಗಿ ಆಚರಿಸುತ್ತಿರುವುದು, ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಯವರು “ನಾನು ಪ್ರಧಾನಿಯಾಗಲು ಅಂಬೇಡ್ಕರ್ ಬರೆದ ಸಂವಿಧಾನ ಕಾರಣ” ಎಂದು ಹೇಳಿದ್ದಾರೆ, ಮತ್ತು ಅವರ 125ನೇ ಜಯಂತಿಯನ್ನು ಭಾರತದಾದ್ಯಂತ ವರ್ಷಪೂರ್ತಿ ಆಚರಿಸಿ, ಅವರಿಗೆ ಸಂಬಂಧಪಟ್ಟ ಪಂಚ(ಮೊಹ್, ಲಂಡನ್, ದೆಹಲಿ, ನಾಗಪುರ ಮತ್ತು ಮುಂಬಯಿನ ಚೈತ್ಯಭೂಮಿ) ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿರುವುದು ಆ ಮಹಾನ್ ನಾಯಕನಿಗೆ ಸಂದ ಗೌರವವಾಗಿದೆ.


-ಶಿವ ಅಷ್ಠಗಿ ಕಲಬುರಗಿ
ಸಾಮಾಜಿಕ ಕಾರ್ಯಕರ್ತ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here