ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಬಹಿರಂಗ ಪತ್ರ

0
217

ಕಲಬುರಗಿ: ಕೋವಿಡ್-19ರ ತೀವ್ರ ಹಾವಳಿಯಿಂದ ಹತ್ತು ವರ್ಷದೊಳಗಿನ ಮಕ್ಕಳಿಗೆ ಪ್ರಸಕ್ತ 2020-21ನೇ ಶೈಕ್ಷಣಿಕ ವರ್ಷದಲ್ಲಿ ಶಾಲೆಯ ಕಡ್ಡಾಯ ಹಾಜರಾತಿಗೆ ಶಾಸನಬದ್ಧ ವಿನಾಯತಿ ನೀಡಬೇಕು ಎಂದು ಸಮಾಜ ಸೇವಾ ಕಾರ್ಯಕರ್ತ ಎಸ್ ಎಸ್ ಹೀರೇಮಠ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಬರೆದ ಬಹಿರಂಗ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಲಾಕ್‍ಡೌನ್-05 ಹಾಗೂ ಪ್ರಸಕ್ತ ಅನ್‍ಲಾಕ್-01ರ ಅವಧಿಯಲ್ಲಿ ಮಾರಣಾಂತಿಕ ಸೋಂಕು `ಕೋವಿಡ್-19′ ಕಾಡ್ಗಿಚ್ಚಿನಂತೆ ರಾಜಧಾನಿ ಬೆಂಗಳೂರು ಮೊದಲ್ಗೊಂಡು ಕರ್ನಾಟಕದ ಅನೇಕ ನಗರ, ಪಟ್ಟಣ, ಹಳ್ಳಿಗಳಲ್ಲಿ ಹರಡುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಈ ದಿಸೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಐ.ಸಿ.ಎಂ.ಆರ್., ಭಾರತ ಸರ್ಕಾರ ಹಾಗೂ ತಮ್ಮ ಕರ್ನಾಟಕ ಸರಕಾರ ಪ್ರತಿಪಾದಿಸುತ್ತಿರುವ ಹತ್ತು ವರ್ಷದ ವಯೋಮಾನದ ಮಕ್ಕಳು ಮತ್ತು ಅರವತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮನೆಯಲ್ಲಿಯೇ ಇದ್ದುಕೊಂಡು, ಕೋವಿಡ್-19ರ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಬೇಕೆಂಬ ಧೋರಣೆ ಸರ್ವಮಾನ್ಯ ಪ್ರತಿಬಂಧಕ ಆರೋಗ್ಯ ಕ್ರಮವಾಗಿದೆ ಎಂದು ತಿಳಿಸಿದ್ದಾರೆ.

ಹತ್ತು ವರ್ಷದೊಳಗಿನ ಮಕ್ಕಳಿಗೆ ಪ್ರಸಕ್ತ 2020-21ನೇ ಸಾಲಿನ ಶೈಕ್ಷಣಿಕ ಶಾಲೆಯ ಕಡ್ಡಾಯ ಹಾಜರಾತಿಗೆ ಶಾಸನಬದ್ಧ ವಿನಾಯತಿ ನೀಡಬೇಕು. ಇಂಥ ಅಭೂತಪೂರ್ವ ಕ್ರಮದಿಂದ ಮಾತ್ರ ಈ ವಯೋಗುಂಪಿನ ಮುಗ್ದ ಮಕ್ಕಳು ಮನೆಯಲ್ಲಿಯೇ ಉಳಿದು ತಮ್ಮ ಪೋಷಕರ ಸಂರಕ್ಷಣೆಯಲ್ಲಿ ಆರೋಗ್ಯದಿಂದ ಇರಲು ಸಾಧ್ಯ ಎಂದು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿಶ್ವದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಕರ್ನಾಟಕದ ಹೆಮ್ಮೆಯ ನಿಮ್ಹಾನ್ಸ್-ಸಂಸ್ಥೆಯ ನಿರ್ದೇಶಕ ಡಾ.ಬಿ.ಎನ್.ಗಂಗಾಧರಪ್ಪ ಅವರ ನೇತೃತ್ವದ ತಜ್ಞರ ಸಮಿತಿಯ ಸ್ಪಷ್ಠ ಅಭಿಪ್ರಾಯದಲ್ಲಿ `ಅಪ್ಪ-ಅಮ್ಮನೇ 4ನೇ ತರಗತಿವರೆಗೂ ಪಾಠ ಮಾಡಬಹುದು’ ಎಂಬ ಮಹತ್ವದ ಅಂಶವನ್ನು ತಾವು ಗಂಭೀರವಾಗಿ ಅವಲೋಕಿಸಬೇಕೆಂದೂ ಸಹ ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.

ಹಾಗೆಯೇ, ಈಗಾಗಲೇ ಪ್ರವೇಶ ಪಡೆದುಕೊಂಡು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದ ಮತ್ತು ಓದುತ್ತಿರುವ 10 ವರ್ಷದೊಳಗಿನ ಅಂದರೆ 1ನೇ ತರಗತಿಯಿಂದ 4ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಆಯಾ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಪಡೆಯುವ ಹಾಗೂ ಶಿಕ್ಷಣ ಮುಂದುವರೆಸುವ ಹಕ್ಕನ್ನು ಕಾಪಾಡಬೇಕು. ಹತ್ತ ವರ್ಷದ ಈ ವಯೋಮಾನದ ಮಕ್ಕಳ ಹಕ್ಕಿಗೆ ಎಳ್ಳಷ್ಟೂ ಚ್ಯುತಿ ಬರಕೂಡದು ಎಂದು ಆಗ್ರಹಿಸಿದ್ದಾರೆ.

ಮೂರು ಹಂತಗಳಲ್ಲಿ ಎಲ್.ಕೆ.ಜಿ.ಯಿಂದ ಹಿಡಿದು ಹತ್ತನೇ ತರಗತಿಗಳನ್ನು ಪ್ರಾರಂಭಿಸಬೇಕೆಂಬ ತಮ್ಮ ಆಲೋಚನೆ ಅತ್ಯಂತ ಅಪಾಯಕಾರಿ ಹೆಜ್ಜೆ. ದಯವಿಟ್ಟು ಈ ತರಾತುರಿ ಬೇಡ. ಮಕ್ಕಳ ಜೀವದೊಂದಿಗೆ ಆಟವಾಡುವುದು ಬೇಡ. ರಾತ್ರಿ ಕಂಡ ಬಾವಿಗೆ ಹಗಲು ಬೀಳುವ ತಮ್ಮ ಇಲಾಖೆಯ ಧೋರಣೆ ಖಂಡನಾರ್ಹವಾಗಿದೆ ಎಂದು ಖಂಡನೆ ವ್ಯಕ್ತಪಡಿಸಿದ್ದಾರೆ.

2021ರಷ್ಟೊತ್ತಿಗೆ `ಕೋವಿಡ್-19’ಕ್ಕೆ ಪ್ರತಿಬಂಧಕ ಲಸಿಕೆ ದೊರೆಯುತ್ತದೆ ಎಂಬ ಖಚಿತ ಆಶಾಭಾವ ಭಾರತ ರತ್ನ ಪ್ರೊ.ಸಿ.ಎನ್.ಆರ್.ರಾವ್ ಅವರು ಮೊದಲ್ಗೊಂಡು ವಿಶ್ವದ ಹಿರಿಯ ವಿಜ್ಞಾನಿಗಳಲ್ಲಿ ಇರುವಾಗ, ಶಾಲೆಗಳನ್ನು ಪ್ರಾರಂಭಿಸುವ ಈ ಅವಸರ ಮಕ್ಕಳನ್ನು ಅಕಾಲಿಕ ಸಾವು-ನೋವಿಗೆ ದೂಡಿದಂತಾಗುತ್ತದೆ. ಶಾಲೆಗಳ ಪ್ರಾರಂಭವನ್ನು ಹತ್ತಾರು ತಿಂಗಳು ಮುಂದೂಡಿದರೆ ಆಕಾಶವೇನೂ ಕಳಚಿಬೀಳುವುದಿಲ್ಲ ಎಂದು ತಿಳಿಸಿದ್ದಾರೆ.

ಹಣ ಗಳಿಸುವುದನ್ನೇ ತಮ್ಮ ಮೂಲ ಗುರಿಯಾಗಿಸಿಕೊಂಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಭಾರಿ ಕುಳಗಳ ಲಾಬಿಗೆ ದಯವಿಟ್ಟು ತಾವು ಯಾವುದೇ ಕಾರಣಕ್ಕೂ ಮಣಿಯಕೂಡದು. `ಹೋಮ್ ಸ್ಕೂಲಿಂಗ್’ ಅಥವಾ ಇನ್ನಾವುದೇ ವಿಧದ ಶೈಕ್ಷಣಿಕ ಕ್ರಮ ಅನುಸರಿಸಲು ಈ ದಿಶೆಯಲ್ಲಿ ಭಾರತರತ್ನ ಪ್ರೊ.ಸಿ.ಎನ್.ಆರ್.ರಾವ್, ಪ್ರೊ.ಗುರುರಾಜ ಕರ್ಜಗಿ, ಡಾ.ಬಿ.ಎನ್.ಗಂಗಾಧರಪ್ಪ, ಡಾ.ಸಿ.ಆರ್.ಚಂದ್ರಶೇಖರ, ಬರಗೂರು ರಾಮಚಂದ್ರಪ್ಪ, ಸುಧಾಮೂರ್ತಿ ಅವರಂಥ ಪ್ರತಿಭಾನ್ವಿತರ ಮಾರ್ಗದರ್ಶನ ಪಡೆದುಕೊಳ್ಳಬೇಕೆಂದು ಭಿನ್ನವಿಸಿಕೊಳ್ಳುತ್ತೇನೆ ಎಂದು ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here