ಕೋವಿಡ್ ಖಾಸಗಿ ಚಿಕಿತ್ಸೆಗೆ ಎಸ್‍ಯುಸಿಐ ವಿರೋಧ

0
39

ವಾಡಿ: ರಾಜ್ಯ ಸರಕಾರ ಕೋವಿಡ್-19 ಸಾಂಕ್ರಾಮಿಕ ರೋಗದ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲು ತೀರ್ಮಾನಿಸಿದ್ದು, ಏಕಾಏಕಿ ದರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಂಥಹ ಜನವಿರೋಧಿ ನೀತಿಯನ್ನು ಸರಕಾರ ಕೂಡಲೇ ಕೈಬಿಡಬೇಕು ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‍ಯುಸಿಐ) ಕಮ್ಯುನಿಸ್ಟ್ ಪಕ್ಷ ಆಗ್ರಹಿಸಿದೆ.

Contact Your\'s Advertisement; 9902492681

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಸ್‍ಯುಸಿಐ ವಾಡಿ ನಗರ ಸಮಿತಿ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ, ಸರಕಾರದ ಖಾಸಗಿ ಚಿಕಿತ್ಸೆ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾ ಸೋಂಕಿತ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಅದರ ಸಂಪೂರ್ಣ ವೆಚ್ಚ ಸರಕಾರವೇ ಭರಿಸಬೇಕು.

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಗಳಿಗೆ ಅನ್ವಯವಾಗುವ ರೋಗಿಗಳಿಗೆ ಪ್ರತಿ ದಿನಕ್ಕೆ ಜನರಲ್ ವಾರ್ಡ್‍ಗೆ ರೂ.5200, ಆಮ್ಲಜನಕ ವ್ಯವಸ್ಥೆ ಬೇಕಿದ್ದರೆ ರೂ.7000, ಐಸಿಯುಗೆ ರೂ.8500, ವೆಂಟಿಲೇಟರ್ ಇರುವ ಐಸಿಯುಗೆ ರೂ.12000 ಎಂದು ನಿಗದಿಪಡಿಸಲಾಗಿದೆ. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಗೆ ಒಳಪಡದ ಆರೋಗ್ಯ ವಿಮೆ ಅಥವ ನಗದು ಪಾವತಿಸುವ ರೋಗಿಗಳಿಗೆ ಈ ದರ ಕ್ರಮವಾಗಿ ರೂ.15000, ರೂ.20,000, ರೂ.35000 ಎನ್ನಲಾಗಿದೆ. ಇದು ಸರಕಾರದ ಸುಲಿಗೆ ನೀತಿಯಲ್ಲದೆ ಮತ್ತೇನು ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಬಾಧಿತರ ಸಂಖ್ಯೆ ಏರಿಕೆಯಾಗುತ್ತಲೇಯಿದ್ದು, ಇದು ಅನಿರೀಕ್ಷಿತವೇನೂ ಅಲ್ಲ. ಜಗತ್ತಿನ ಆರೋಗ್ಯ ತಜ್ಞರೆಲ್ಲ ಈ ಆಪತ್ತಿನ ಬಗ್ಗೆ ವಿಚಾರಿಸಿದ್ದಾರೆ. ಆದರೆ ಎಲ್ಲಾ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಬೇಕಾದಷ್ಟು ಸೌಲಭ್ಯಗಳನ್ನು ಸರಕಾರಿ ಆಸ್ಪಪತ್ರೆಗಳಲ್ಲಿ ಇನ್ನೂ ಮಾಡಿಲ್ಲ. ಈಗ ಸರಕಾರಿ ಆರೋಗ್ಯ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಾಗುತ್ತಿದ್ದಂತೆ ಖಾಸಗಿ ಆಸ್ಪತ್ರೆಗಳಿಗೆ ರವಾನಿಸುವ ಯೋಜನೆಯನ್ನು ಸರಕಾರ ಮಾಡುತ್ತಿರುವುದು ಅದರ ಸಂಪೂರ್ಣ ನಿಷ್ಕಾಳಜಿಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

ಕೋವಿಡ್-19 ಒಂದು ಸಾರ್ವಜನಿಕ, ಸಾರ್ವತ್ರಿಕ ಆರೋಗ್ಯ ಬಿಕ್ಕಟ್ಟು. ಪರಿಣಾಮ ಇದರ ಚಿಕಿತ್ಸೆಯ ವೆಚ್ಚವನ್ನು ಸರಕಾರವೇ ಭರಿಸಬೇಕು. ಸರಕಾರ ತಕ್ಷಣ ಎಚ್ಚೆತ್ತುಕೊಂಡು ಎಲ್ಲಾ ಜಿಲ್ಲೆಗಳಲ್ಲೂ ಅವಶ್ಯಕತೆ ಇರುವಷ್ಟು ಹಾಸಿಗೆಗಳನ್ನು ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಒದಗಿಸಬೇಕು. ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳಿಗೆ ಸುರಕ್ಷಾ ಸಾಧನಗಳನ್ನು ಒದಗಿಸಬೇಕು. ಯಾವೂದೇ ಕೊರೊನಾ ರೋಗಿಯನ್ನು ಹಾಸಿಗೆಯ ಕೊರತೆಯ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಬಾರದು. ಹಾಗೊಂದು ವೇಳೆ ಅನಿವಾರ್ಯ ಕಾರಣಕ್ಕೆ ಕಳುಹಿಸಿದ್ದಲ್ಲಿ ಅದರ ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸುವಂತಹ ನೀತಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here