ಕಸ್ತೂರಿಮೃಗದ ಹೊಕ್ಕುಳಲ್ಲಿ ಸುಗಂಧ ಇರುವಂತೆ ಮನುಷ್ಯನಲ್ಲಿಯೇ ದೇವರಿದ್ದಾನೆ

0
37

ಕಲಬುರಗಿ: ಬಸವ ಸಮಿತಿಯ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ೬೩೩ನೇ ಆನ್ಲೈನ್ ದತ್ತಿ ಕಾರ್ಯಕ್ರಮದಲ್ಲಿ ’ಬಸವ ತತ್ತ್ವಜ್ಞಾನದಲ್ಲಿ ಇಷ್ಟಲಿಂಗ ಪರಿಕಲ್ಪನೆ’  ಕುರಿತು ಡಾ. ಗಂಗಾಂಬಿಕಾ ಪಾಟೀಲ ಅವರು ಮಾತನಾಡಿದರು.

ಮನುಷ್ಯನ ಶರೀರ ಎಂಟು ತತ್ತ್ವಗಳಿಂದ ಕೂಡಿದೆ.  ಪರಮಾತ್ಮ ಅಂತರಂಗದಲ್ಲಿ ಅರುವಿನ ರೂಪದಲ್ಲಿದ್ದಾನೆ. ಆ ಅರಿವಿನ ಕಳೆಯನ್ನು ಮನುಷ್ಯ ಕಂಡುಕೊಳ್ಳಬೇಕು.  ಕಸ್ತೂರಿಮೃಗದ ಹೊಕ್ಕುಳಲ್ಲಿ ಸುಗಂಧ ಇರುವಂತೆ ಮನುಷ್ಯನಲ್ಲಿಯೇ ದೇವರಿದ್ದಾನೆ.  ಅದುವೇ ಇಷ್ಟಲಿಂಗ ತತ್ತ್ವವಾಗಿದೆ. ಘನಲಿಂಗ ಪರಮಾತ್ಮನು ತನ್ನ ಅಂತರಂಗದಲ್ಲಿಯೇ ಇದ್ದಾನೆ ಎಂದು ವಿವರಿಸಿದರು.

Contact Your\'s Advertisement; 9902492681

ಇಷ್ಟಲಿಂಗ ಮನುಷ್ಯನ ಶರೀರವನ್ನು ವ್ಯಾಪಿಸಿದೆ. ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ ಮೂರು ಮುಖ್ಯವಾಗಿವೆ. ಇಷ್ಟಲಿಂಗವನ್ನು ನಿರೀಕ್ಷಣೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ನೋಟದ ಭಕ್ತಿ ಬಸವಣ್ಣನಿಂದಾಯಿತು ಎಂದು ಶಿವಯೋಗಿ ಸಿದ್ಧರಾಮೇಶ್ವರರು ಹೇಳಿದ್ದಾರೆ. ಕೈಯಲ್ಲಿ ಇರುವ ಲಿಂಗ ಮನುಷ್ಯನ ಕಷ್ಟಗಳನ್ನು ನಿವಾರಿಸುತ್ತದೆ.  ಲಿಂಗವನ್ನು ಎಡಗೈಯಲ್ಲಿ ಇಟ್ಟು, ಅನಿಮಿಷ ದೃಷ್ಟಿಯಿಂದ ಲಿಂಗವನ್ನು ನಿರೀಕ್ಷಣೆ ಮಾಡಬೇಕು.  ಇಷ್ಟಲಿಂಗ ದೃಷ್ಟಿಸುವುದರಿಂದ ನವಚಕ್ರಗಳು ಜಾಗ್ರತವಾಗಿ ಶರೀರದಲ್ಲಿ ನವಚೈತನ್ಯ ಮೂಡುತ್ತದೆ. ಇಷ್ಟಲಿಂಗ ಪೂಜೆಯಿಂದ ಇಚ್ಛಾಶಕ್ತಿ ಹೆಚ್ಚುತ್ತದೆ. ನುಡಿಯಲ್ಲಿ ಮೃದುತ್ವ ಬರುತ್ತದೆ.

ಪರಮಾತ್ಮ ಬ್ರಹ್ಮಾಂಡವನ್ನು ವ್ಯಾಪಿಸಿದ್ದಾನೆ. ಮನಸ್ಸು ಕೂಡ ಅಷ್ಟೆ ಚಂಚಲವಾಗಿದೆ. ಇದನ್ನು ಇಷ್ಟಲಿಂಗ ಪೂಜೆಯ ಮೂಲಕ ನಿಗ್ರಹಿಸಬೇಕು. ಮನುಷ್ಯ ಲಿಂಗವನ್ನು ನೋಡುತ್ತ ನೋಡುತ್ತ ಲಿಂಗವೇ ತಾನಾಗುತ್ತಾನೆ. ಅಂಧಾನುಕರಣೆಗಳನ್ನು ಬಿಟ್ಟು ವೈಚಾರಿಕವಾದ ವೈಜ್ಞಾನಿಕವಾದ ಇಷ್ಟಲಿಂಗತತ್ತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಡಾ. ಗಂಗಾಂಬಿಕಾ ಪಾಟೀಲ ಅವರು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಜಯಶ್ರಿ ದಂಡೆ ಅವರು ಇಷ್ಟಲಿಂಗ ಬಸವಣ್ಣನವರ ಉದರದಿಂದ ಹುಟ್ಟಿತು ಎಂದು ಚೆನ್ನಬಸವಣ್ಣನವರು ಹೇಳುತ್ತಾರೆ,  ಇದರಿಂದ ಇಷ್ಟಲಿಂಗ ಪರಿಕಲ್ಪನೆ ಕೊಟ್ಟವರು ಬಸವಣ್ಣನವರು ಎಂಬುದು ಸ್ಪಷ್ಟವಾಗುತ್ತದೆ ಎಂದು ವಿವರಿಸಿದರು. ಬಸವಣ್ಣ ಅನಾದಿಯಾಗಿದ್ದರೆ, ಲಿಂಗ ಅದಿಯಾಗಿದೆ. ಅನುಭಮಂಟಪದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿತ್ತು.  ನಿಜದ ಅರಿವನ್ನು ಮೂಡಿಸಲು ಬಸವಣ್ಣನವರು ಅನುಭವ ಮಂಟಪವನ್ನು ಹುಟ್ಟುಹಾಕಿದರು ಎಂದು ಹೇಳಿದರು.

ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರೂ ದತ್ತಿ ದಾಸೋಹಿಗಳೂ ಆದ ಡಾ. ವಿಲಾಸವತಿ ಖೂಬಾ ಅವರು ವೇದಿಕೆಯಲ್ಲಿದ್ದರು. ಪ್ರಧಾನ ಕಾರ್ಯದರ್ಶಿಗಳಾದ ಎಚ್.ಕೆ. ಉದ್ದಂಡಯ್ಯ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here