ಸತ್ಯವನ್ನು ಎತ್ತಿ ಹಿಡಿಯುವ ತಾಕತ್ತು ಇರೋದು ಸುಳ್ಳಿಗೆ ಮಾತ್ರ.!!

0
22

ಮನುಷ್ಯರು ತನ್ನೊಳಗಾಗುವ ಎಲ್ಲವನ್ನೂ ಎಂದೂ ಹೇಳಲಾರನು. ನೀವು ನಿಮ್ಮಾತ್ಮಕ್ಕಿಂತ ಹೆಚ್ಚು ಎಂದುಕೊಳ್ಳುವ ಸಂಗಾತಿಗಳೂ ಅಷ್ಟೇ. ಇದ್ದಿದ್ದನ್ನು ಇದ್ದ ಹಾಗೇ ಯಾರೂ ಹೇಳಲಾರರು. ಅದೇನು ಮಹಾಪರಾಧವೇನಲ್ಲ. ಅದು ಮನುಷ್ಯರ ಸಹಜ ಗುಣ. ನೋಡುವ ಕಣ್ಣು ಬೇರೆ, ನೋಡಿದ್ದನ್ನು ಹೇಳುವ ನಾಲಗೆ ಬೇರೆ. ಹೀಗಾಗಿ ಪ್ರತ್ಯಕ್ಷಕಂಡಿದ್ದನ್ನು ಪ್ರಮಾಣಿಸು ನೋಡಿದರೂ ಎಲ್ಲವೂ ಗೊಡ್ಡಾಚಾರ. ನೀವು ಸತ್ಯವನ್ನೇ ಹೇಳಿ ಅಲ್ಲೊಂದು ಅನುಮಾನಾಸ್ಪದ ಕಣ್ಣುಗಳು ನಿಮ್ಮನ್ನು ನೋಡುತ್ತಲೇ ಇರುತ್ತವೆ.

ಶಾಂತಿವನದಲ್ಲಿ ಹೀಗೊಂದು ಘಟನೆ ನಡೆಯಿತು. ಒಮ್ಮೆ ಒಬ್ಬ ಸಂತ ತನ್ನ ಶಿಷ್ಯರೊಡನೆ ಮಾತಿಗಿಳಿಯುತ್ತಾನೆ. ಸಂತ ಮಾತು ಮಾತಿಗೂ ಕೇವಲ ಸುಳ್ಳುಗಳ ಬಗ್ಗೆಯಷ್ಟೇ ಮಾತನಾಡುತ್ತಿರುತ್ತಾನೆ. ಸುಳ್ಳಿನ ವಿವಿಧ ಆಯಾಮಗಳನ್ನು ಶಿಷ್ಯರಿಗೆ ಬೋಧಿಸುತ್ತಾನೆ. ಒಬ್ಬ ಶಿಷ್ಯ ಎದ್ದು ನಿಂತು ‘‘ಗುರುಗಳೇ ನೀವೇಕೆ ಬರೀ ಸುಳ್ಳುಗಳ ಬಗ್ಗೆಯಷ್ಟೇ ಮಾತನಾಡುತ್ತೀರಿ’’ ಎಂದು ಕೇಳುತ್ತಾನೆ. ಏನೂ ಉತ್ತರಿಸದ ಸಂತ ಮತ್ತೆ ತನ್ನ ಮಾತು ಮುಂದುವರೆಸುತ್ತಾನೆ. ಶಿಷ್ಯ ಬಳಗದಲ್ಲಿ ನೀರವ ಮೌನ. ಇದು ಅಲ್ಲಿದ್ದ ಶಿಷ್ಯರಲ್ಲಿ ತಳಮಳ ಉಂಟು ಮಾಡುತ್ತವೆ. ಸುದೀರ್ಘ ಪಾಠದ ಕೊನೆಯಲ್ಲಿ ಸಂತ ಅಲ್ಪವಿರಾಮ ಹೇಳಿ ಸ್ವಲ್ಪ ನೀರು ತರುವಂತೆ ಶಿಷ್ಯರಿಗೆ ಹೇಳುತ್ತಾನೆ. ಗುರುಗಳ ದಾಹ ತಣಿಸಲು ತಾ ಮುಂದು ನಾ ಮುಂದು ಎಂದು ಬಿದ್ದು ಓಡಿದ ಶಿಷ್ಯರು ಬರುವಾಗ ಒಂದೊಂದು ಪಾತ್ರೆಯಲ್ಲಿ ನೀರು ತರುತ್ತಾರೆ. ಇದು ಗೊಂದಲಕ್ಕೀಡು ಮಾಡುತ್ತವೆ. ಹಾಗಾದರೆ ಸಂತ ಯಾರ ಬಳಿಯಿಂದ ನೀರು ಸ್ವೀಕರಿಸಬೇಕು..? ಸಂತನಿಗೆ ಎಲ್ಲರೂ ಪ್ರೀತಿಯ ಶಿಷ್ಯರು. ಒಬ್ಬರ ಬಳಿಯಿಂದ ನೀರು ಸ್ವೀಕರಿಸಿದರೆ ಮತ್ತೊಬ್ಬರಿಗೆ ಅಸಮಾಧನವಾಗಬಹುದು. ಇದಕ್ಕೆ ಸಂತ ಪ್ರಶ್ನಯೊಂದನ್ನು ಕೇಳುತ್ತೇನೆ, ಯಾರು ಸರಿಯಾದ ಉತ್ತರ ನೀಡುತ್ತಾರೆ ಅವರ ನೀರಿನಿಂದ ದಾಹ ತಣಿಸುವ ನಿರ್ಧಾರಕ್ಕೆ ಬರುತ್ತಾನೆ.

Contact Your\'s Advertisement; 9902492681

ಶಿಷ್ಯರು ಹೂ ಎನ್ನುತ್ತಲೇ, ಗುರುವಿನ ಬಾಯಿಯ ಕಡೆಗೆ ಕಿವಿ ನಿಮಿರಿಸುತ್ತಾರೆ. ಆಗ ಸಂತ ಕೇಳುತ್ತಾನೆ, ಸತ್ಯ ಎಂದರೇನು..? ಶಿಷ್ಯರು ತಬ್ಬಿಬ್ಬಾಗುತ್ತಾರೆ. ಗುರುಗಳೇ ಅದನ್ನಲ್ಲವೇ ನಾವೂ ಕೇಳಿದ್ದು..? ಎಂದು ಗಲಿಬಿಲಿಗೊಳ್ಳುತ್ತಾರೆ. ಸಂತ ಸೂಕ್ಷ್ಮ ಕಣ್ಣುಗಳೊಂದಿಗೆ ಶಿಷ್ಯರ ಕಡೆಗೆ ದಿಟ್ಟಿಸುತ್ತಾನೆ. ಇಂದಿನ ತರಗತಿಯಲ್ಲಿ ಗುರುಗಳು ಬರೀ ಸುಳ್ಳಿನ ಬಗ್ಗೆಯಷ್ಟೇ ಹೇಳಿ ಈಗ ಸತ್ಯ ಎಂದರೇನು ಎಂದರೆ ನಾವು ಹೇಗೆ ಉತ್ತರಿಸುವುದು ಎಂಬುವುದು ಶಿಷ್ಯರ ಗೊಣಗು. ಒಳಗೊಳಗಿಂದಲೇ ಹೀಗೆ ಅಂದು ಎಲ್ಲರೂ ಮೌನಕ್ಕೆ ಶರಣಾಗುತ್ತಾರೆ. ಯಾರದರೂ ಹೇಳಿ ಎಂದು ಸಂತ ಮುಗುಳು ನಕ್ಕು ಮತ್ತೆ ಕೇಳುತ್ತಾನೆ. ಮತ್ತದೇ ನೀರವ ಮೌನ. ಈ ವೇಳೆ ಶಿಷ್ಯರಲ್ಲೊಬ್ಬ ಎದ್ದು ನಿಂತು, ‘‘ಗುರುಗಳೇ ನೀವು ಪಾಠ ಮಾಡಿದ್ದೀರಲ್ಲಾ ಅದು ನಮಗೆ ಅರ್ಥವೇ ಆಗಿಲ್ಲ’’ ಎನ್ನುತ್ತಾನೆ. ಸಂತ ಅವನನ್ನು ಪಕ್ಕಕ್ಕೆ ಕರೆಸಿಕೊಂಡು ಅವನ ಬಳಿಯಿದ್ದ ನೀರು ಸ್ವೀಕರಿಸುತ್ತಾನೆ.

ಸಂತನ ಉದ್ದೇಶವಿಷ್ಟೇ. ಸುಳ್ಳಿನ ಬಗ್ಗೆ ಮೊದಲು ಅರಿವು ಮೂಡಿಸೋದು. ಸುಳ್ಳು ಯಾವುದೆಂದು ಮೊದಲು ಗೊತ್ತು ಮಾಡಲು ಸಾಧ್ಯವಾದರೆ ಸತ್ಯದ ಅರಿವು ತಾನುತಾನಾಗೆ ನಮಗೆ ತಿಳಿಯುತ್ತದೆ. ನಾವು ಬರೀ ಸತ್ಯವನ್ನೇ ಹುಡುಕುತ್ತಾ ಹೋದರೆ ನಮಗೆ ಸುಳ್ಳು ಕೂಡ ಸತ್ಯವೆಂದು ಗೋಚರಿಸಲು ಶುರು ಆಗುತ್ತವೆ. ಸಂತ ಅರ್ಥಮಾಡಿಸಲು ಹೊರಟಿದ್ದೇ ಅದನ್ನು. ಒಂದು ವೇಳೆ ದಿನವಿಡೀ ಸತ್ಯದ ಬಗ್ಗೆಯೇ ಬಿಗಿದಿದ್ದರೆ ಅಷ್ಟೂ ಸಮಯ ವ್ಯರ್ಥ ಆಗುತ್ತಿತ್ತೇನೋ..? ಆದರೆ ಕೇವಲ ಒಂದೇ ಪ್ರಶ್ನೆಯಲ್ಲಿ ಸತ್ಯವೆಂದರೇನು ಎಂಬುದನ್ನು ಸಂತ ಶಿಷ್ಯರಿಗೆ ಮನವರಿಕೆ ಮಾಡಿಸಿಕೊಟ್ಟರು.

ಇದು ಪ್ರತಿಯೊಬ್ಬರಿಗೂ ಇರುವಂತ ಸವಾಲು. ನಾವು ಸತ್ಯವನ್ನಷ್ಟೇ ಹೇಳುತ್ತೇನೆ ಎಂದು ಕಟಕಟಯಲ್ಲಿ ನಿಂತು ಗ್ರಂಥಗಳ ಮೇಲೆ ಆಣೆ ಮಾಡುವಾಗಲೂ ಒಳಗೊಳಗಿರುವ ಸುಳ್ಳಿನ ಗೋಪುರ ನಮ್ಮನ್ನು ಅಣುಕಿಸುತ್ತವೆ. ಆದರೂ ಸುಳ್ಳನ್ನು ಸತ್ಯದ ಹಣೆಗೆ ಮೊಳೆ ಹೊಡೆದಂತೆ ಹೇಳಿ ಬಿಡುತ್ತೇವೆ. ಇಷ್ಟೆಲ್ಲ ಹೇಳಿದ ಮೇಲೂ ಕೇವಲ ಸತ್ಯವನ್ನಷ್ಟೇ ಹೇಳಿ ಎನ್ನುವುದಿಲ್ಲ. ಯಾಕೆಂದರೆ ಒಮ್ಮೊಮ್ಮೆ ಸತ್ಯವನ್ನು ಎತ್ತಿ ಹಿಡಿಯವ ತಾಕತ್ತು ಇರೋದು ಸುಳ್ಳಿಗೆ ಮಾತ್ರ.

  • – ಆಶಿಕ್ ಮುಲ್ಕಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here