ಆಶಾಗಳಿಂದ ಮುಖ್ಯಮಂತ್ರಿ ಬಿಎಸ್‌ವೈಗೆ ಸಾಮೂಹಿಕ ಪತ್ರ: ವೇತನ ಹೆಚ್ಚಳಕ್ಕಾಗಿ ಮುಂದುವರೆದ ಹೋರಾಟ

0
125

ವಾಡಿ: ಗೌರವಧನ ಹೆಚ್ಚಳಕ್ಕಾಗಿ ಆಗ್ರಹಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ)ಗೆ ಸಂಯೋಜಿತ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಜು.೧೦ ರಿಂದ ರಾಜ್ಯ ವ್ಯಾಪಿ ಮುಷ್ಕರಕ್ಕೆ ಕರೆಕೊಟ್ಟು ಕೆಲಸ ಸ್ಥಗಿತಗೊಳಿಸಿರುವ ಆಶಾ ಕಾರ್ಯಕರ್ತೆಯರು, ನಿರಂತರ ಹೋರಾಟದಲ್ಲಿರುವ ಮೂಲಕ ಸರಕಾರದ ಕಣ್ಣು ತೆರೆಸುವ ಪ್ರಯತ್ನ ಮುಂದುವರೆಸಿದ್ದಾರೆ.

ಮುಷ್ಕರದ ಭಾಗವಾಗಿ ಬುಧವಾರ ಪಟ್ಟಣದಲ್ಲಿ ಪತ್ರ ಚಳುವಳಿ ನಡೆಸಿದ ಆಶಾ ಕಾರ್ಯಕರ್ತೆಯರು, ಅಂಚೆ ಕಚೇರಿಯ ಮುಂದೆ ಜಮಾಯಿಸಿ ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬರೆದ ವಿವಿಧ ಬೇಡಿಕೆಗಳುಳ್ಳ ಪತ್ರಗಳನ್ನು ಸಾಮೂಹಿಕವಾಗಿ ಅಂಚೆ ಪೆಟ್ಟಿಗೆಯಲ್ಲಿ ಹಾಕಿ ಪ್ರತಿಭಟನೆ ನಡೆಸಿದರು. ಕೊರೊನಾ ಸೋಂಕು ನಿಯಂತ್ರಿಸುವ ಅಪಾಯಕಾರಿ ಕರ್ತವ್ಯವನ್ನು ನಿರ್ಭಯವಾಗಿ ನಿಭಾಯಿಸುತ್ತಿರುವ ನಮಗೆ ಹೂಗಳಿಂದ ಸನ್ಮಾನ ಬೇಡ. ಚೆಪ್ಪಾಳೆಗಳಿಂದ ಸತ್ಕಾರವೂ ಬೇಡ. ಮಹಾಮಾರಿ ಸೋಂಕಿನಿಂದ ಸುರಕ್ಷತೆ ಬೇಕು. ಬದುಕು ನಿರ್ವಹಣೆಗಾಗಿ ಗೌರವಧನ ಕನಿಷ್ಠ ರೂ.೧೨೦೦೦ಕ್ಕೆ ಹೆಚ್ಚಿಸಬೇಕು. ಉದ್ಯೋಗ ಭದ್ರತೆ ಒದಗಿಸುವ ಮೂಲಕ ಸರಕಾರ ನಮಗೆ ನೈಜ ಗೌರವ ನೀಡಬೇಕು ಎಂಬ ಕಳವಳಕಾರಿ ಅಕ್ಷರಗಳ ಸಾಲುಗಳನ್ನು ಬರೆದು ವಿಧಾನಸೌಧ ವಿಳಾಸಕ್ಕೆ ಪೋಸ್ಟ್ ಮಾಡಿ ಗಮನ ಸೆಳೆದರು.

Contact Your\'s Advertisement; 9902492681

ಅಗತ್ಯ ಬೇಡಿಕೆಗಳಿಗಾಗಿ ಒತ್ತಾಯಿಸಿ ಕೆಲಸ ಬಿಟ್ಟು ಹೋರಾಟದಲ್ಲಿರುವ ನಮ್ಮನ್ನು ಇದೂವರೆಗೂ ಸರಕಾರ ಕ್ಯಾರೆ ಎಂದಿಲ್ಲ. ವಿರೋಧ ಪಕ್ಷದ ನಾಯಕರುಗಳಾಗಲಿ ಅಥವ ವಿವಿಧ ಪಕ್ಷಗಳ ಶಾಸಕರಾಗಲಿ ನಮ್ಮ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಸಹಕಾರ ನೀಡಿಲ್ಲ. ಕೆಲ ಶಾಸಕರು ಮತ್ತು ಪ್ರಗತಿಪರ ಹೋರಾಟಗಾರರು ನಮ್ಮ ಮುಷ್ಕರವನ್ನು ಬೆಂಬಲಿಸಿದ್ದಾರೆ. ಕೊರೊನಾ ವಾರಿಯರ್ಸ್ ಎಂದು ಹೊಗಳಿರುವ ಸರಕಾರ ಮಾತ್ರ ಸಮಸ್ಯೆ ಕೇಳಲು ಮುಂದಾಗಿಲ್ಲ. ನಮ್ಮ ಸೇವೆಯನ್ನು ಹೊಗಳಿ ಹುರಿದುಂಬಿಸಿದ ಮುಖ್ಯಮಂತ್ರಿಗಳು ಬೇಡಿಕೆ ಈಡೇರಿಸಲು ಏಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರಶ್ನಿಸಿದ ಆಶಾ ಕಾರ್ಯಕರ್ತೆಯರು, ಹೋರಾಟ ಉಗ್ರ ಸ್ವರೂಪ ಪಡೆಯುವ ಮುನ್ನವೇ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ ಶರಣು ಹೇರೂರ ಪತ್ರ ಚಳುವಳಿಯ ನೇತೃತ್ವ ವಹಿಸಿದ್ದರು. ಆಶಾಗಳಾದ ವಿಜುಬಾಯಿ ರಾಠೋಡ, ರತ್ನಮ್ಮ ಕಟ್ಟಿಮನಿ, ಶಿವುಲೀಲಾ ಹಡಪದ, ಜಯಶ್ರೀ ಸಿಂಧೆ, ರೇಣುಕಾ, ತಿಪ್ಪಮ್ಮ ಕಟ್ಟಿಮನಿ, ಮಾಣಿಕ್ಯಮ್ಮ ಮತ್ತಿತರರು ಚಳುವಳಿಯಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here