ಶಹಾಬಾದ:ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಎಐಡಿವಾಯ್ಓ ಸಂಘಟನೆ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಉಪತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಎಐಡಿವಾಯ್ಓ ನಗರ ಅಧ್ಯಕ್ಷ ಸಿದ್ದು ಚೌಧರಿ ಮಾತನಾಡಿ, ಹಗಲು ರಾತ್ರಿ ಎನ್ನದೇ ತಮ್ಮ ಜೀವವನ್ನು ಪಣಕ್ಕಿಟ್ಟು ಕೋವಿಡ-19 ಸಂದರ್ಭದಲ್ಲಿ ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡಿದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ರೂ. 12,000 ಗೌರವಧನ ನೀಡಬೇಕು ಮತ್ತು ಕೊರೋನಾ ಸೋಂಕಿನಿಂದ ರಕ್ಷಣೆಗೆ ಮಾಸ್ಕ, ಸ್ಯಾನೀಟೇಜರ್, ಗ್ಲೌಸ್ ಇತ್ಯಾದಿಗಳನ್ನು ನೀಡಬೇಕು ಎಂದು ಒತ್ತಾಯಿಸಿದರು. ಕಳೆದ 15 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸಮಸ್ಯೆ ಪರಿಹರಿಸದ ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜೀವನ ಯೋಗ್ಯ ವೇತನ/ಗೌರವಧನ ನೀಡದೇ ಕೋರೋನಾ ವಿರುದ್ದದ ಫ್ರಂಟ್ ಲೈನ್ ವಾರಿಯರ್ಸ ಎಂದು ಹೊಗಳಿ, ಹೂ ಮಳೆ ಸುರಿಸಿ, ಶಾಲು ಹಾಕಿ ಸನ್ಮಾನಿಸಿದರೆ, ಕೆಲವರನ್ನು ದೇಶಕ್ಕೆ ರಾಜ್ಯಕ್ಕೆ ಅತ್ಯುತ್ತಮ ಕಾರ್ಯಕರ್ತೆಯರ ಎಂದು ನಾಮಕರಣ ಮಾಡಿ ಪುಕ್ಕಟೆಯಾಗಿ ಹೊಗಳುತ್ತಿದ್ದಾರೆ.ಆಶಾ ಅವರನ್ನು ಹಗಲು ರಾತ್ರಿ ಗಾಣದೆತ್ತಿನಂತೆ ದುಡಿಸಿಕೊಳ್ಳುತ್ತಿರುವ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಕೂಡಲೇ ಈ ಮಹಿಳಾ ಕಾರ್ಯಕರ್ತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಸಂಘಟನೆಯ ಉಪಾಧ್ಯಾಕ್ಷ ತಿಮ್ಮಯ್ಯ ಮಾನೆ, ನೀಲಕಂಠ ಹುಲಿ, ಸದಸ್ಯರಾದ ಪ್ರಕಾಶ ಯಲಗೋಡ ಇತರರು ಇದ್ದರು.