ಯುಪಿಎಸ್‌ಸಿ ಪರೀಕ್ಷೆಯಲ್ಲಿ 443ನೇ ರ್ಯಾಂಕ್ ಪಡೆದ ಸ್ಪರ್ಶಾ ನಿಲಂಗಿ ಸನ್ಮಾನ

0
63

ಕಲಬುರಗಿ: ಉನ್ನತ ಹುದ್ದೆಯ ಆಕಾಂಕ್ಷಿಗಳು ಮೊದಲು ತಮ್ಮಲ್ಲಿರುವ ಕೀಳರಿಮೆಯನ್ನು ತೊರೆದು, ಪ್ರಯತ್ನದಲ್ಲಿ ವಿಶ್ವಾಸವಿಟ್ಟು ನಿರಂತರವಾದ ಅಧ್ಯಯನಶೀಲ ಗುಣ, ಸಮಯ ಪ್ರಜ್ಞೆ, ಶಿಸ್ತು, ಯೋಜನಾಬದ್ದವಾದ ಕಾರ್ಯ, ಸಾಧಿಸಬೇಕೆಂಬ ಅಪ್ಪಟ ಛಲಗಾರಿಕೆಯಂತಹ ಗುಣಗಳನ್ನು ಮೈಗೂಡಿಸಿಕೊಂಡು ಸತತವಾಗಿ ಪ್ರಯತ್ನಿಸಿದರೆ ಖಂಡಿತವಾಗಿಯೂ ಉನ್ನತವಾದ ಸಾಧನೆ ಮಾಡಲು ಸಾಧ್ಯವಿದೆಯೆಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ೪೪೩ನೇ ರ‍್ಯಾಂಕ್ ಪಡೆದ ಸ್ಪರ್ಶ ನಿಲಂಗೆ ಅಭಿಮತ ವ್ಯಕ್ತಪಡಿಸಿದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದರ ಪ್ರಯುಕ್ತ ’ಬಸವೇಶ್ವರ ಸಮಾಜ ಸೇವಾ ಬಳಗ’ವು ನಗರದ ಜೇವರ್ಗಿ ರಸ್ತೆಯ, ಗಣೇಶ ನಗರದಲ್ಲಿರುವ ಸಾಧಕಿಯ ಮನೆಯ ಪ್ರಾಂಗಣದಲ್ಲಿ ತಮಗೆ ಹಮ್ಮಿಕೊಂಡಿದ್ದ ಗೃಹ ಸನ್ಮಾನದಲ್ಲಿ ಸತ್ಕಾರ ಗೌರವವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.

Contact Your\'s Advertisement; 9902492681

ಯೋಜನಾಬದ್ಧ ಹಾಗೂ ಸೂಕ್ತ ಮಾರ್ಗದರ್ಶನದೊಂದಿಗೆ ದಿನಕ್ಕೆ ೮ ಗಂಟೆಗಳ ಕಾಲ, ಹತ್ತು ತಿಂಗಳು ದೆಹಲಿಯಲ್ಲಿದ್ದುಕೊಂಡು ನಾನು ಈ ಮೊದಲು ಅಭ್ಯಾಸ ಮಾಡಿ ೨೦೧೭ರ ಬ್ಯಾಚ್‌ನಲ್ಲಿ ೮೦೫ನೇ ರ‍್ಯಾಂಕ್ ಪಡೆದು ಐಆರ್‌ಎಸ್ ಹುದ್ದೆಗೆ ಆಯ್ಕೆಯಾಗಿ ಪ್ರಸ್ತುತ ಆಸ್ಸಾಂ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನನಗೆ ಐಎಎಸ್ ಹುದ್ದೆಯ ಗುರಿಯಿರುವುದರಿಂದ ನನ್ನ ಕರ್ತವ್ಯದ ಜೊತೆಗೆ ಎರಡನೇ ಬಾರಿಗೆ ಪುನಃ ಪ್ರಯತ್ನಿಸಿ ಈ ಸಲ ೪೪೩ನೇ ರ‍್ಯಾಂಕ್ ಪಡೆದಿದ್ದೇನೆ. ಮೊದಲಿಗೆ ಯುಪಿಎಸ್‌ಸಿ ಪರೀಕ್ಷೆ ಕಠಿಣವೆನಿಸಿದರೂ ನಿರಂತರವಾಗಿ ಪ್ರಯತ್ನಿಸಿದರೆ ಸಾಧನೆಯ ದಾರಿ ಸರಳವಾಗುತ್ತಾ ಸಾಗುತ್ತದೆ. ಜನಸೇವೆ ಮಾಡಬೇಕು, ಬಡವರ ಕಷ್ಟಗಳಿಗೆ ಸ್ಪಂದಿಸಬೇಕೆಂಬ ಅಪ್ಪಟ ಬಯಕೆ ನನ್ನನ್ನು ನಿರಂತರವಾಗಿ ಪ್ರಯತ್ನಿಸುವಂತೆ ಮಾಡಿದೆ. ಕಲಬುರಗಿ ಜಿಲ್ಲೆಯ ಎಲ್ಲರ ಸಹಕಾರ, ಹಾರೈಕೆಗಳನ್ನು ನಾನು ಮರೆಯುವಂತಿಲ್ಲವೆಂದು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.

ಸಾಧಕಿ ಸ್ಪರ್ಶಾ ಅವರಿಗೆ ಸತ್ಕರಿಸಿ ಆಶೀರ್ವಚನ ನೀಡಿದ ಮಕ್ತಂಪುರ ಗುರುಬಸವ ಮಠದ ಪೂಜ್ಯ ಶಿವಾನಂದ ಶ್ರೀಗಳು, ನಮ್ಮ ಭಾಗದಲ್ಲಿ ಪ್ರತಿಭೆಗಳ ಕೊರತೆಯಿಲ್ಲ. ಅವರನ್ನು ಗುರುತಿಸಿ, ಅವರಿಗೆ ಸೂಕ್ತವಾದ ಮಾರ್ಗದರ್ಶನ ನೀಡಿ, ಪ್ರೋತ್ಸಾಹಿದರೆ, ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲು ಸಾಧ್ಯವಿದೆಯೆಂಬುದಕ್ಕೆ ಸ್ಪರ್ಶಾ ಅವರೇ ಸಾಕ್ಷಿಯಾಗಿದ್ದಾರೆಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಸಂಸ್ಥಾಪಕ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ವಿದ್ಯಾರ್ಥಿಗಳಲ್ಲಿ ಸದಾ ಧನಾತ್ಮಕ ಚಿಂತನೆ ಇರಬೇಕು.  ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಬಾಲ್ಯದಲ್ಲಿಯೇ ಗುರಿಯನ್ನು ನಿರ್ಧರಿಸಿ, ಅದಕ್ಕೆ ನಿರಂತರ ಪ್ರಯತ್ನ ಪಟ್ಟಿದ್ದೆಯಾದರೆ, ಉನ್ನತವಾದ ವ್ಯಕ್ತಿಗಳಾಗಿ ಹೊರಹೊಮ್ಮಬಹುದು. ಸಾಧನೆಗೆ ಅಶಾಧ್ಯವಾದದ್ದು ಯಾವುದು ಇಲ್ಲ. ಸಾಧಿಸುಮ ಛಲಗಾರಿಕೆಯ ಮನಸ್ಸು ಮುಖ್ಯವೆಂದು ನುಡಿದರು.

ಕಾರ್ಯಕ್ರಮದಲ್ಲಿ ಚಂದ್ರಕಾಂತ ಬಿರಾದಾರ, ಅಣ್ಣಾರಾಯ ಮಂಗಾಣೆ, ಬಸಯ್ಯಸ್ವಾಮಿ ಹೊದಲೂರ,ಬಸವರಾಜ ಎಸ್.ಪುರಾಣೆ, ದೇವೇಂದ್ರಪ್ಪ ಗಣಮುಖಿ, ರೇಣುಕಾಚಾರ್ಯ ಸ್ಥಾವರಮಠ, ಸಂಜೀವಕುಮಾರ ಪಾಟೀಲ, ಮಲ್ಲಿಕಾರ್ಜುನ ಕಾಖಂಡಕಿ, ಶ್ರೀಗಣೇಶ ಸ್ಥಾವರಮಠ, ಕುಟುಂಬಸ್ಥರಾದ ಪಾರ್ವತಿ ನಿಲಂಗಿ, ಅನೀಲ ನಿಲಂಗಿ, ದೀಪಾ ಹೊಸೂರ, ಭವಾನಿ ಹೊಸೂರ ಸೇರಿದಂತೆ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here