ಶಹಾಬಾದನ ಮುಖ್ಯರಸ್ತೆಯಲ್ಲಿ ಹೊಲಸು ನೀರು ಸಾರ್ವಜನಿಕರ ಆಕ್ರೋಶ

0
146

ಶಹಾಬಾದ: ಗಬ್ಬೆದ್ದು ನಾರುತ್ತಿರುವ ವಾತಾವರಣ, ಚರಂಡಿ ನೀರು, ಶೌಚಾಲಯದ ನೀರು ರಸ್ತೆಯ ಮೇಲೆ ಹರಿದು ಇಡೀ ನಗರದ ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ. ಇದು ನಗರದ ಮುಖ್ಯ ರಸ್ತೆಯ ಮ್ಯಾಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ನೂತನ ಕಟ್ಟಡದ ಮುಂಭಾಗದ ದೃಶ್ಯ.

ಉತ್ತಮ ಕಟ್ಟಡದ ಮುಂದೆ ಉತ್ತಮ ವಾತಾವರಣ ನಿರ್ಮಾಣ ಮಾಡಿಕೊಡುವುದು ಸರ್ಕಾರದ ಕೆಲಸ.ಆದರೆ ಕಟ್ಟಡದ ಮುಂಭಾಗದ ರಸ್ತೆಯಲ್ಲಿ ನರಕ ಸೃಷ್ಠಿಯಾಗಿದೆ.ಸುಮಾರು ಒಂದೂವರೆ ವರ್ಷದಿಂದ ಅರ್ಧ ರಸ್ತೆ ಹೊಲಸು ರಾಡಿಯಿಂದ ತುಂಬಿ ತುಳುಕುತ್ತಿದ್ದರೂ, ಇಬ್ಬರು ಪೌರಾಯುಕ್ತರು ಬಂದು ಕಂಡು ಕಾಣದಂತೆ ನನಗೂ ಅದಕ್ಕೂ ಯಾವುದೇ ಸಬಂಧವಿಲ್ಲ ಎನ್ನುವಂತೆ ವರ್ತಿಸಿ ವರ್ಗಾವಣೆಯಾಗಿ ಹೋಗಿದ್ದಾರೆ. ಅಲ್ಲದೇ ಸುಮಾರು ಬಾರಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಗಮನಕ್ಕೂ ತರಲಾಗಿದೆ.ಅಲ್ಲದೇ ಅವರು ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ ಹೊರತು ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ.

Contact Your\'s Advertisement; 9902492681

ನಗರದ ಮುಖ್ಯ ರಸ್ತೆಯಾಗಿದ್ದರಿಂದ ನಗರದೊಳಗೆ ಪ್ರವೇಶ ಮಾಡಬೇಕಾದರೂ, ನಗರದಿಂದ ಬೇರೆ ಊರಿಗೆ ಹೋಗಬೇಕಾದರೂ ಇದೇ ರಸ್ತೆಯ ಮೂಲಕವೇ ಹೋಗಬೇಕಾಗುತ್ತದೆ.ಮಳೆ ಬಂದಾಗಲೊಮ್ಮೆ ಈ ರಸ್ತೆ ನೋಡಿದರೇ ಎಲ್ಲಿಲ್ಲದ ಆಕ್ರೋಶ ಭಾವನೆ ಉಂಟಾಗದೇ ಇರುವುದಿಲ್ಲ. ಊರಿನ ಎಲ್ಲಾ ಹೊಲಸು ನೀರು, ಪ್ಲಾಸ್ಟಿಕ್ ತ್ಯಾಜ್ಯ ಎಲ್ಲಾ ಕೂಡ ರಸ್ತೆಯ ಆವರಿಸಿ ಗಬ್ಬೆದ್ದು ನಾರುತ್ತಿರುತ್ತದೆ. ಜನರು ಇದೇ ಕೊಳಕು ನೀರಿನಲ್ಲಿ ಐದಾರು ತಿಂಗಳಿನಿಂದ ದಾಟುವಂಥ ಪರಿಸ್ಥಿತಿ ಬಂದೊದಗಿದೆ. ಆ ಬಗ್ಗೆಯೂ ಅಧಿಕಾರಿಗಳು ಗಮನಹರಿಸುತ್ತಿಲ್ಲ.

ಪಕ್ಕದಲ್ಲಿಯೇ ಆಂಜನೇಯ ದೇವಸ್ಥಾನ ಇದೆ. ಸಾವಿರಾರು ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ.ಅವರಿಗಾದರೂ ಉತ್ತಮ ವಾತಾವರಣ ಕಲ್ಪಿಸಬೇಕೆಂಬ ಪರಿಜ್ಞಾನ ಅಧಿಕಾರಿ ವರ್ಗದವರಿಗಿಲ್ಲ. ರಸ್ತೆಯ ಮಧ್ಯೆ ಕಳಪೆ ಮಟ್ಟದ ಡಿವೈಡರ್, ಅದರ ಒಂದು ಕಡೆ ಚರಂಡಿ ನಿರ್ಮಿಸಲಾಗಿದೆ ಅದು ಕೂಡ ಕಳಪೆ ಮಟ್ಟದ್ದು.ಅಲ್ಲದೇ ರಸ್ತೆಗಿಂತ ಎರಡು ಅಡಿ ಎತ್ತರ ನಿರ್ಮಿಸಿದಕ್ಕೆ ನೀರು ಹೋಗುವುದಕ್ಕೆ ದಾರಿ ಇಲ್ಲದೇ ನೀರು ರಸ್ತೆಯ ಮೇಲೆ ನಿಲ್ಲುತ್ತಿದೆ. ಕೇವಲ ಸಭೆ ಸಮಾರಂಭಗಳಿಗೆ ಬಂದು ಹೋಗುವ ಶಾಸಕರು ಸ್ವಲ್ಪ ಈ ಕಡೆ ಗಮನಹರಿಸಿ. ಇಲ್ಲಿನ ಗಂಭೀರ ಸಮಸ್ಯೆಯನ್ನು ಬಗೆಹರಿಸಿ ಜನರ ಸಮಸ್ಯೆಗೆ ಸ್ಪಂದಿಸಿ ಎಂಬುದು ಸಾರ್ವಜನಿಕರ ಅಂಬೋಣವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here