ರಾಜಕೀಯ ಅಧಿಕಾರ ಪಡೆಯಲು ಮಹಿಳೆ ಮುನ್ನಡೆ: ಮಹಿಳಾ ಮೀಸಲಾತಿ ಜಾಗೃತಿ

0
27

ವಾಡಿ: ಅಡುಗೆ ಮನೆಯಲ್ಲಿ ಕುಳಿತು ದಾಸ್ಯದ ಬದುಕು ಜೀವಿಸುವುದು ಸಾಕು. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಮತ್ತು ಗ್ರಾಮಾಭೀವೃದ್ಧಿಗೆ ಮುನ್ನುಡಿ ಬರೆಯಲು ಮಹಿಳೆ ರಾಜಕೀಯ ರಂಗ ಪ್ರವೇಶಿಸಲು ಮುಂದಾಗಬೇಕು ಎಂದು ಮಾರ್ಗದರ್ಶಿ ಸಂಸ್ಥೆಯ ಸಂಯೋಜಕಿ ಯಲ್ಲುಬಾಯಿ ಮುಗುಳೇಕರ್ ಹೇಳಿದರು.

ರಾವೂರ ಗ್ರಾಮದಲ್ಲಿ ದಿ ಹಂಗರ್ ಪ್ರಾಜಕ್ಟ್ ಕಲಬುರಗಿ ಹಾಗೂ ಮಾರ್ಗದರ್ಶಿ ಸಂಸ್ಥೆ ವತಿಯಿಂದ ಏರ್ಪಡಿಸಲಾಗಿದ್ದ ಸಂಭಾವ್ಯ ನಾಯಕಿ ಕಾರ್ಯಗಾರದಲ್ಲಿ ಮಹಿಳಾ ರಾಜಕಾರಣದ ಮಹತ್ವದ ಕುರಿತು ಅವರು ಮಾತನಾಡಿದರು. ಗ್ರಾಪಂ ಚುನಾವಣೆಗಳು ಹತ್ತಿರ ಬರುತ್ತಿವೆ. ಈಗಾಗಲೇ ವಾರ್ಡ್‌ವಾರು ಮೀಸಲಾತಿ ಪ್ರಕಟಗೊಂಡಿದೆ. ಮಹಿಳೆಯರಿಗಾಗಿ ಮೀಸಲಿರುವ ಕ್ಷೇತ್ರಗಳ ಜತೆಗೆ ಸಾಮಾನ್ಯ ಕ್ಷೇತ್ರಗಳಲ್ಲೂ ಮಹಿಳೆಯರು ಸ್ಪರ್ಧೆ ಮಾಡಲು ಮುಂದಾಗಬೇಕು. ಯಾರದ್ದೋ ಒತ್ತಡಕ್ಕೆ ಚುನಾವಣೆಗೆ ನಿಲ್ಲದೆ, ಮಹಿಳಾ ಮೀಸಲಾತಿಯ ಹಕ್ಕು ಪಡೆಯುವ ಮೂಲಕ ಧಕ್ಷ ಆಡಳಿತ ನೀಡಲು ದಿಟ್ಟ ಹೆಜ್ಜೆಯಿಡಬೇಕು ಎಂದರು.

Contact Your\'s Advertisement; 9902492681

ಮಹಿಳೆಯನ್ನು ಚುನಾವಣೆಗೆ ನಿಲ್ಲಿಸಿ ಅಧಿಕಾರ ಮಾತ್ರ ಕುಟುಂಬದ ಪುರುಷರು ಅನುಭವಿಸುವ ಸಂವಿಧಾನ ವಿರೋಧಿ ಕೃತ್ಯದಲ್ಲಿ ತೊಡಗುವುದಕ್ಕೆ ಕಡಿವಾಣ ಹಾಕಲು ಮಹಿಳೆಯರೇ ಸಿಡಿದೇಳಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ರಾಜಕಾರಣದ ಮಹತ್ವವನ್ನು ಪ್ರತಿಯೊಬ್ಬ ಮಹಿಳೆ ಅರಿತುಕೊಳ್ಳಬೇಕು. ರಾಜಕೀಯ ಕೆಟ್ಟದ್ದಲ್ಲ. ರಾಜಕಾರಣಕ್ಕೆ ಬರುವವರಲ್ಲಿ ಬಹುತೇಕ ಕೆಟ್ಟವರು ಇರುತ್ತಿರುವದರಿಂದ ರಾಜಕಾರಣಕ್ಕೆ ಕೆಟ್ಟ ಹೆಸರು ಬರುತ್ತಿದೆ.

ಮಹಿಳೆಯರು ಹೆಚ್ಚು ಹೆಚ್ಚು ರಾಜಕೀಯಕ್ಕೆ ಬರುವುದರಿಂದ ಉತ್ತಮ ಆಡಳಿತ ನೀಡುವ ಜತೆಗೆ ನಮ್ಮ ಗ್ರಾಮದ ಮಹಿಳೆಯರಿಗೆ ಬೇಕಾದ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಚುನಾವಣೆಗಳಲ್ಲಿ ಗೆದ್ದು ಜನಪ್ರತಿನಿಧಿಯಾದ ಮಹಿಳೆಯರು ಅಧಿಕಾರವನ್ನು ಪುರುಷರಿಗೆ ಬಿಟ್ಟುಕೊಡದೇ ಸ್ವತಹ ಆಡಳಿತ ನಡೆಸಲು ಹೋರಾಡಬೇಕು ಎಂದು ವಿವರಿಸಿದರು. ಮಾರ್ಗದರ್ಶಿ ಸಂಸ್ಥೆಯ ವಲಯ ಸಂಯೋಜಕ ಶ್ರೀನಿವಾಸ ಕುಲಕರ್ಣಿ, ಅಂಗನವಾಡಿ ಕಾರ್ಯಕರ್ತೆ ನಾಗಮ್ಮ ಸೇರಿದಂತೆ ಗ್ರಾಮದ ಮಹಿಳೆಯರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here