ಕಲಬುರಗಿ: ಬೆಂಬಿಡದೆ ಜಿಲ್ಲೆಯಾದ್ಯಂತ ತಡರಾತ್ರಿ ಸುರಿದ ದಾರಾಕಾರ ಮಳೆಯಿಂದಾಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾಂಪುರಹಳ್ಳಿಯ ಅಲೆಮಾರಿ ಸಮುದಾಯದ ಹೆಳವ ಜನಾಂಗದ ಬಡಾವಣೆಗೆ ಮಳೆ ನೀರು ನುಗ್ಗಿದ್ದು ನೂರಾರು ಕುಟುಂಬಗಳ ಜೀವನ ಅಸ್ತವ್ಯಸ್ತವಾಗಿದೆ.
ಈ ಹಿಂದೆ 2015 ರಲ್ಲಿ ಸರ್ಕಾರ ಗುರುತಿಸಿದ 2 ಎಕರೆ 20 ಗುಂಟೆ ಜಾಗದಲ್ಲಿ 51 ಮನೆಗಳನ್ನು ಸರ್ಕಾರ ನಿರ್ಮಿಸಿಕೊಟ್ಟಿದೆ. 2015ರಲ್ಲಿ ಚಿತ್ತಾಪುರ ಶಾಸಕರಾದ ಪ್ರಿಯಾಂಕ ಖರ್ಗೆಯವರು ಬೇಟಿ ನೀಡಿ ಹೆಳವ ಸಮುದಾಯದ ಜನರಿಗೆ ಸಮಾಜದ ಕಾಲೋನಿ ನಿರ್ಮಿಸಲು ಹಕ್ಕುಪತ್ರಗಳನ್ನು ನೀಡಿದ್ದಾರೆ.
ಆದರೆ ಈ ಕಾಲೋನಿಯ ಪಕ್ಕದಲ್ಲಿಯೇ ಕೆರೆ ಇರುವುದರಿಂದ, ಕೆರೆಗೆ ತಡೆಗೋಡೆ ನಿರ್ಮಿಸದಿರುವ ಕಾರಣ, ಕೆರೆ ತುಂಬಿ ಅಲೆಮಾರಿ ಕಾಲೋನಿಗೆ ನೀರು ನುಗ್ಗಿದ್ದು ಸುಮಾರು 25 ಮನೆಗಳು ಸದ್ಯ ನೀರಿನಲ್ಲಿ ಮುಳುಗಿವೆ. ರಸ್ತೆಗಳೆಲ್ಲ ಜಲಾವೃತಗೊಂಡು, ಮನೆಯಲ್ಲಿರುವ ದವಸಧಾನ್ಯಗಳು ಮತ್ತು ಇನ್ನಿತರ ವಸ್ತುಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಯಾಗಿವೆ.
ಈ ಕಾಲೋನಿಯಲ್ಲಿ ಮಕ್ಕಳು, ವಯೋವೃದ್ಧರು ಸೇರಿದಂತೆ ಸರಿಸುಮಾರು 300 ಜನ ವಾಸಿಸುತ್ತಿದ್ದು ಮಳೆತಂದ ಅವಾಂತರದಿಂದಾಗಿ ಹೇಳವ ಸಮಾಜದವರ ಬದುಕು ಅತಂತ್ರ ಸ್ಥಿತಿಯಲ್ಲಿದೆ.
ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಜನಪ್ರತಿನಿಧಿಗಳು ಇಲ್ಲಿನ ಅಲೆಮಾರಿ ಹೆಳವ ಸಮಾಜದ ನಿವಾಸಿಗಳಿಗೆ ಅನುಕೂಲ ಮಾಡಿಕೊಡುವಂತೆ ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯ ನಿರ್ದೇಶಕರಾದ ಬಸವರಾಜ ಹೆಳವರ ಯಾಳಗಿ ಅವರು ಮನವಿ ಮಾಡಿದ್ದಾರೆ.