ಶಹಾಬಾದ: ನಗರದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಹಳ್ಳ-ಕೊಳ್ಳಗಳು, ಕೆರೆ-ಕಟ್ಟೆಗಳು, ಹೊಳೆ-ನದಿಗಳು ಉಕ್ಕಿ ಹರಿದ ಪರಿಣಾಮ ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಶಂಕರವಾಡಿಯ ಕಾಗಿಣಾ ಸೇತುವೆ ಕಟ್ಟಲಾದ ಬ್ರಿಡ್ಜ ಕಮ್ ಬ್ಯಾರೇಜ ಸಂಪೂರ್ಣ ಮುಳುಗಡೆಯಾಗಿದೆ.ಅಲ್ಲದೇ ಭಂಕೂರ ಮುತ್ತಗಾ ರಸ್ತೆಯ ಮಧ್ಯದ ಸೇತುವೆ ಹಾಗೂ ಮುತ್ತಗಾದಿಂದ ಕದ್ದರಗಿ ಹೋಗುವ ಮಧ್ಯದ ಬ್ರಿಡ್ಜ್ ಕಮ್ ಬ್ಯಾರೇಜ ಮುಳುಗಡೆಯಾಗಿದ್ದು, ಸಂಪೂರ್ಣ ಜನಸಂಚಾರ ಕಡಿತಗೊಂಡಿದೆ.ಮುತ್ತಗಾ ಗ್ರಾಮಕ್ಕೆ ಹಾಗೂ ಮುತ್ತಗಾ ಗ್ರಾಮಸ್ಥರು ಬೇರೆ ಊರಿಗೆ ಹೋಗಬೇಕಾದರೆ ಪೇಠಸಿರೂರ-ಕಾಟಮ್ಮದೇವರಹಳ್ಳಿ ದೂರದ ಮಾರ್ಗವಾಗಿ ಸಂಚರಿಸಬೇಕಾಗಿದೆ.ಈ ಮಾರ್ಗ ಬಿಟ್ಟರೇ ಎಲ್ಲಾ ಕಡೆ ನೀರು ಆವರಿಸಿದೆ.
ನದಿ ಪಾತ್ರದ ಸುತ್ತಮುತ್ತಲಿನ ಪ್ರದೇಶದ ಹೊಲಗಲ್ಲಿ ಅಪಾರ ಪ್ರಮಾಣದ ನೀರು ಆವರಿಸಿಕೊಂಡಿದ್ದರಿಂದ ನಗರದ ಸಾವಿರಾರು ಜನರು ಈ ದೃಶ್ಯವನ್ನು ನೋಡಲು ಕಿಕ್ಕಿರಿದು ನಿಂತಿದ್ದರು. ಈ ಸಂದರ್ಭದಲ್ಲಿ ಯಾವುದೇ ಹಾನಿಯಾಗದಂತೆ ಮುಜಾಗ್ರತೆ ಕ್ರಮವಾಗಿ ನಗರದ ಪೊಲೀಸರು ಶಹಾಬಾದ-ಚಿತ್ತಾಪೂರ ವೃತ್ತದಲ್ಲಿ ಬ್ಯಾರಿಕೇಡ್ ಹಾಕಿ ಯಾವುದೇ ವಾಹನಗಳನ್ನು ಹೋಗದಂತೆ ತಡೆದಿದ್ದಾರೆ. ಅತ್ತ ಮಳಖೇಡದ ಕಾಗಿಣಾ ಸೇತುವೆ ಮುಳಗಡೆಯಾಗಿ ಸಂಚಾರ ವ್ಯವಸ್ಥೆ ಕಡಿತಗೊಂಡ ಪರಿಣಾಮ ಬಹುತೇಖ ವಾಹನಗಳು ಶಹಾಬಾದ ಮಾರ್ಗವಾಗಿ ಹೊರಡಿದವು. ನಗರದ ವಾಡಿ ವೃತ್ತದಿಂದ ಕಲಬುರಗಿ ಹಾಗೂ ಜೇವರ್ಗಿ ರಸ್ತೆಯ ಮೇಲೆ ನೂರಾರು ವಾಹನಗಳು ಸಾಲುಗಟ್ಟಿ ಹೋಗುತ್ತಿರುವುದು ಕಂಡು ಬಂದಿತು.
ಬೆಳೆ ಹಾನಿ : ಬೆಣ್ಣೆತೊರೆ ಜಲಾಶಯದಿಂದ ಹರಿಬಿಟ್ಟಿರುವ ಅಪಾರ ಪ್ರಮಾಣದ ನೀರು ನದಿ ಪಾತ್ರದ ಸುಮಾರು ಸಾವಿರಾರು ಎಕೆರೆ ಹೊಲಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಈಗಾಗಲೇ ಸತತ ಸುರಿದ ಮಳೆಯಿಂದ ಅಲ್ಪಸ್ವಲ್ಪ ಹಾನಿಯಾಗಿತ್ತು.ಆದರೆ ಶನಿವಾರ ನುಗ್ಗಿದ ನೀರಿನಿಂದ ಜಮೀನಿನಲ್ಲಿ ನೀರು ನಿಂತು ತೊಗರಿ ಬೆಳೆ ನಾಶವಾಗಿದೆ.ಇದರಿಂದ ರೈತ ಕಂಗಾಲಾಗಿದ್ದಾನೆ. ಈಗಾಗಲೇ ಹೆಸರು ಬೆಳೆಯಲು ಮಾಡಿದ ಸಾಲವನ್ನೇ ತೀರಸಲಾಗದೇ ರೈತ ಮತ್ತೆ ಸಂಕಷ್ಟದಲ್ಲಿ ಸಿಲುಕಿದ್ದಾನೆ.
ಪರಿಹಾರ ನೀಡಲು ಒತ್ತಾಯ : ಸಾವಿರಾರು ಎಕರೆ ಜಮೀನಿನಲ್ಲಿ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಈಗಾಗಲೇ ಸಾಲ ಮಾಡಿ ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.ಕೂಡಲೇ ಜಿಲ್ಲಾಡಳಿತ ರೈತರಿಗೆ ಪರಿಹಾರ ಧನ ನೀಡಬೇಕೆಂದು ರೈತ ಮುಖಂಡ ಬಸವರಾಜ ಕೋರಿ, ಬಿಜೆಪಿ ಮುಖಂಡರಾದ ಬಸವರಾಜ ಮದ್ರಿಕಿ, ಗಿರಿರಾಜ ಪವಾರ, ಜೆಡಿಎಸ್ ಮುಖಂಡ ಲೋಹಿತ್ ಕಟ್ಟಿ ಒತ್ತಾಯಿಸಿದ್ದಾರೆ.