ಸುರಪುರ: ತಾಲೂಕು ಪಿಂಜಾರ ಸಂಘದಿಂದ ಬೃಹತ್ ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರಕ್ಕೆ ಆಗ್ರಹಿಸಿದರು.
ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಿಂದ ದರಬಾರ ರಸ್ತೆ ಮೂಲಕ ಮಹಾತ್ಮ ಗಾಂಧಿ ವೃತ್ತದಿಂದ ತಹಸೀಲ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಹೋರಾಟಗಾರರು ಸರಕಾರದ ವಿರುಧ್ಧ ಘೋಷಣೆಗಳನ್ನು ಕೂಗುತ್ತಾ ತಮ್ಮ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ನಂತರ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸಂಘದ ರಾಜ್ಯಾಧ್ಯಕ್ಷ ಡಾ: ಅಬ್ದುಲ್ ರಜಾಕ್ ಮಾತನಾಡಿ,ಇಂದು ನಮ್ಮ ಪಿಂಜಾರ ಸಮುದಾಯವನ್ನು ಸರಕಾರಗಳು ಕಡೆಗಣಿಸಿ ಸರಕಾರದ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುತ್ತಿವೆ.ನಾವು ಅನೇಕ ವರ್ಷಗಳಿಂದ ಹೋರಾಟ ಮಾಡಿ ಪಿಂಜಾರ ನದಾಫ ಸಮುದಾಯದ ಅಭಿವೃಧ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿದರು ಕಡೆಗಣಿಸುತ್ತಿವೆ ಅಲ್ಲದೆ ನಮ್ಮ ಸಮುದಾಯದ ವಿದ್ಯಾರ್ಥಿಗಳ ಶಾಲಾ ದಾಖಲಾತಿಯಲ್ಲಿ ಜಾತಿ ಕಲಮಿನಲ್ಲಿ ಮುಸ್ಲೀಂ ಎಂದೇ ಬರೆಯುತ್ತಿದ್ದಾರೆ.
ಇದಕ್ಕೆ ನಮ್ಮ ವಿರೋಧವಿದ್ದು ನಾವು ಧರ್ಮದಿಂದ ಮುಸ್ಲೀಂ ಆದರೆ ಜಾತಿಯಿಂದ ಪಿಂಜಾರ ಅಥವಾ ನದಾಫರಾಗಿದ್ದು ಜಾತಿ ಕಾಲಮಿನಲ್ಲಿ ಪಿಂಜಾರ ಎಂದೇ ಬರೆಯಲು ಕ್ರಮ ಕೈಗೊಳ್ಳಬೇಕು.ಅಲ್ಲದೆ ನಮ್ಮ ಸಮುದಾಯದ ಏಳಿಗೆಯ ಕುರಿತು ಸಿ.ಎಸ್.ದ್ವಾರಕಾನಾಥ ಅವರ ವರದಿಯನ್ನು ಜಾರಿಗೊಳಿಸುವ ಜೊತೆಗೆ ಅಭಿವೃಧ್ಧಿ ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಟಿಪ್ಪು ಸುಲ್ತಾನ ಕ್ರಾಂತಿ ಸೈನ್ಯದ ಅಧ್ಯಕ್ಷ ಖಾಜಾಂಬರ್ ನದಾಫ್ ಬಾಗೇವಾಡಿ ಮಾತನಾಡಿದರು.ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಸಿರಸ್ತೆದಾರ್ ನಿಸಾರ್ ಅಹ್ಮದ್ ಅವರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಅಬ್ದುಲ್ಸಾಬ್ ನದಾಫ್ ಬಾವಸಾಬ್ ನದಾಫ್ ಪರಸನಹಳ್ಳಿ ಸೋಪಿಸಾಬ್ ನದಾಫ್ ಸೂಗುರು ಮಹ್ಮದ್ ರಫೀಕ್ ನದಾಫ್ ಹುಸೇನಸಾಬ್ ಮಾಳೂರ ಹುಸೇನಸಾಬ್ ಗೌಂಡಿ ದಸ್ತಗೀರಸಾಬ್ ಕಕ್ಕಲದೊಡ್ಡಿ ಮಹ್ಮದ ಲಾಲಸಾಬ್ ನದಾಫ್ ಇಬ್ರಾಹಿಂ ಯಡಿಯಾಪುರ ಅಬ್ದುಲ್ ನದಾಫ್ ಬಂದೇನವಾಜ ನದಾಫ್ ಸೇರಿದಂತೆ ಅನೇಕರಿದ್ದರು.