ಶಹಾಬಾದ:ತಾಲೂಕಿನ ಭಂಕೂರ ಗ್ರಾಪಂ ವ್ಯಾಪ್ತಿಯ ಬಸವ ನಗರದ ಬಸವ ಸಮಿತಿಯ ಮುಂಭಾಗದ ಚರಂಡಿಯಲ್ಲಿ ಕಸ ತುಂಬಿ ರಸ್ತೆಯ ಮೇಲೆ ಚರಂಡಿ ನೀರು ಹರಿದು ಸಾರ್ವಜನಿಕರ ಸಂಚಾರಕ್ಕೆ ಅನಾನುಕೂಲ ಉಂಟಾಗುತ್ತಿದೆ. ಈ ಬಗ್ಗೆ ಪಿಡಿಓಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಡಾವಣೆಯ ಜನರು ಆರೋಪಿಸಿದ್ದಾರೆ.
ಕಳೆದ ಹತ್ತಾರು ತಿಂಗಳಿನಿಂದ ಚರಂಡಿಯಲ್ಲಿ ಕಸ ತುಂಬಿಕೊಂಡು ಗಬ್ಬೆದ್ದು ನಾರುತ್ತಿದೆ. ಅಲ್ಲದೇ ಚರಂಡಿ ನೀರು ಸರಾಗವಾಗಿ ಹರಿಯದೇ ರಸ್ತೆಯ ಮೇಲೆಲ್ಲಾ ಹರಿದು ಸುಗಮ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಅಲ್ಲದೇ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ನೆಮ್ಮದಿ ಜೀವನಕ್ಕೆ ಕತ್ತರಿ ಬಿದ್ದಿದೆ. ನಿತ್ಯ ಇದೇ ರಸ್ತೆಯಿಂದ ಅಧಿಕಾರಿಗಳು ಜನಪ್ರತಿನಿಧಿಗಳು ಹೋಗುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳದಿರುವುದು ಮಾತ್ರ ದುರಂತ.
ಗ್ರಾಪಂ ಅಧಿಕಾರಿಗಳು ಚರಂಡಿಯಲ್ಲಿನ ಕಸ ತೆಗೆಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ತಿಳಿಸಿದರೂ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಇಲ್ಲಿ ಬುತ್ತಿ ಬಸವಲಿಂಗೇಶ್ವರ ದೇವಸ್ಥಾನ, ಸಾಯಿಬಾಬಾ, ಹನುಮಾನ ಮಂದಿರಗಳ ಇವೆ. ಆ ಮಂದಿರಗಳ ಆವರಣದಲ್ಲಿ ಕೊಳಚೆ ನೀರು ಸಂಗ್ರಹವಾಗಿ ಗಬ್ಬೆದ್ದು ನಾರುತ್ತಿದೆ.ಈ ಕೊಳಚೆ ನೀರನ್ನು ದಾಟಿಕೊಂಡೆ ಭಕ್ತರು ದೇವಸ್ಥಾನಕ್ಕೆ ಹೋಗುವಂತ ಪರಿಸ್ಥಿತಿ ಬಂದೊದಗಿದೆ. ಗ್ರಾಪಂ ಪಿಡಿಓ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ಕೂಡಲೇ ಚರಂಡಿಯಲ್ಲಿನ ಕಸವನ್ನು ತೆಗೆದು, ನೀರು ಸರಾಗವಾಗಿ ಹರಿಯುವಂತೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ದೂರಿಗಿಲ್ಲ ಕಿಮ್ಮತ್ತು : ಇಲ್ಲಿನ ಬಡಾವಣೆಯ ಅವ್ಯವಸ್ಥೆ ಸರಿಪಡಿಸುವಂತೆ ಸ್ಥಳೀಯ ನಿವಾಸಿಗಳು ಸಾಕಷ್ಟು ಸಲ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.ಸೌಜನ್ಯಕ್ಕಾದರೂ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಬಡಾವಣೆಯ ನಿವಾಸಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಚರಂಡಿ ಸ್ವಚ್ಛತೆ ಮರಿಚೀಕೆಯಾಗಿರುವುದರಿಂದ ಬಚ್ಚಲು ನೀರು ರಸ್ತೆಗೆ ಹರಿದಾಡಿ ಗಬ್ಬು ನಾರುತ್ತಿರುವ ವಾಸನೆಯೊಂದಿಗೆ ಸ್ಥಳೀಯ ಜನತೆ ಜೀವನ ನಡೆಸುವ ಅನಿವಾರ್ಯತೆ ಎದುರಾಗಿದೆ. ಕೂಡಲೇ ಮೇಲಾಧಿಕಾರಿಗಳು ತಾಕೀತು ಮಾಡಿ ಚರಂಡಿಯಲ್ಲಿ ತುಂಬಿರುವ ಕಸವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಮುಕ್ತಿ ನೀಡಿಸಬೇಕಾಗಿ ಮಹಾತ್ಮಗಾಂಧಿ ಅಂಗವಿಕಲರ ಸಂಘದ ಈರಣ್ಣ ಹಳ್ಳಿ ಮನವಿ ಮಾಡಿದ್ದಾರೆ.