Monday, July 15, 2024
ಮನೆಬಿಸಿ ಬಿಸಿ ಸುದ್ದಿಗ್ರಾ.ಪಂ. ಸದಸ್ಯರ ಹರಾಜು ಮೂಲಕ ಆಯ್ಕೆ ಪ್ರಕರಣ: 10 ಜನರ ಮೇಲೆ ದೂರು ದಾಖಲು

ಗ್ರಾ.ಪಂ. ಸದಸ್ಯರ ಹರಾಜು ಮೂಲಕ ಆಯ್ಕೆ ಪ್ರಕರಣ: 10 ಜನರ ಮೇಲೆ ದೂರು ದಾಖಲು

ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮ ಪಂಚಾಯಿತಿಯ ವಾರ್ಡ್ ಸಂಖ್ಯೆ-1ಕ್ಕೆ ಸದಸ್ಯರ ಸ್ಥಾನಗಳನ್ನು ನಿಯಮಬಾಹಿರವಾಗಿ ಹರಾಜು ಪ್ರಕ್ರಿಯೆ ಮೂಲಕ ಹಣ ಬಲದಿಂದ ಆಯ್ಕೆ ಮಾಡಿದ ಗ್ರಾಮದ 6 ಜನ ಮುಖಂಡರು ಮತ್ತು ಕಾನೂನು ಬಾಹಿರವಾಗಿ ಆಯ್ಕೆಯಾದ 4 ಜನರು ಸೇರಿಸಿ ಒಟ್ಟು 10 ಜನರ ವಿರುದ್ಧ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೆ ಸಾರ್ವತ್ರಿಕ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆಯಾಗಿದ್ದು, ಅದರಂತೆ ಯಡ್ರಾಮಿ ತಾಲೂಕಿನ ಬಿಳವಾರ ಒಳಗೊಂಡಂತೆ ವಿವಿಧ ಗ್ರಾಮ ಪಂಚಾಯತಿಗಳಿಗೆ ಇದೇ ಡಿ.27 ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಬಿಳವಾರ ಗ್ರಾಮದ ಮುಖಂಡರಾದ ಹೊನ್ನಪ್ಪಾ ಕೊಡಮನಹಳ್ಳಿ, ರಾಮನಗೌಡ ನಾಗರಳ್ಳಿ, ಮಡಿವಾಳಪ್ಪ ಪಡಶೆಟ್ಟಿ, ಮಲ್ಲಣಗೌಡ ಕೋಡಮನಹಳ್ಳಿ, ಗೌಡಪ್ಪ ಬೊಮ್ಮನಹಳ್ಳಿ, ಬಸಪ್ಪಗೌಡ ನವಣಿ ಇವರು ಗ್ರಾಮದಲ್ಲಿ ಚುನಾವಣೆ ನಡೆಯದಂತೆ ಮತ್ತು ಇತರೆ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದ ಹಾಗೆ ಪ್ರಜಾ ಪ್ರತಿನಿಧಿ ಕಾಯ್ದೆ ಉಲ್ಲಂಘನೆ ಮಾಡಿ ಗ್ರಾಮದ ಗೊಲ್ಲಾಳಪ್ಪ ತಂದೆ ಅಯ್ಯಪ್ಪ ಮ್ಯಾಗೇರಿ, ಹಣಮಂತ ತಂದೆ ಭೀಮಯ್ಯ ಭೋವಿ, ಹಣಮಂತರಾಯ ದೊರೆ ಸಾ: ಜಮಖಂಡಿ ಹಾಗೂ ಬಬ್ರುವಾಹನ ತಂದೆ ರಾಮಯ್ಯ ಭೋವಿ ಇವರನ್ನು ಹರಾಜು ಪ್ರಕ್ರಿಯೆಯಲ್ಲಿ 26.55 ಲಕ್ಷ ರೂ. ಗಳಿಗೆ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಆಯ್ಕೆ ಮಾಡಿದ್ದು, ಈ ಸಂಬಂಧ ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡಿರುತ್ತದೆ.

ಲಂಚದ ಆಮೀಷದಿಂದ ಬೇರೆಯವರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದೇ ಪ್ರಜಾ ಪ್ರತಿನಿಧಿ ಕಾಯ್ದೆ ಉಲ್ಲಂಘನೆ ಮಾಡಿರುವ ಈ 10 ಜನರ ಮೇಲೆ ಪ್ರಜಾ ಪ್ರತಿನಿಧಿ ಕಾಯ್ದೆ-1951 ನಿಯಮ 133ರನ್ವಯ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ.136/2020 ರಂತೆ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಅವರು ತಿಳಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular