ರೈತರೆಡೆಗಿನ ರಾಜ್ಯ ಸರ್ಕಾರದ ಬೇಜವಾಬ್ದಾರಿತನ: ಶಾಸಕ ಖರ್ಗೆ ಅಸಮಧಾನ

0
38

ಬೆಂಗಳೂರು: ಇಂದಿನ ವಿಧಾನಸಭಾ ಅಧಿವೇಶನದಲ್ಲಿ ಖರೀದಿ ಕೇಂದ್ರಗಳ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ, ಭತ್ತ ಖರೀದಿ ಮಾತಿನ ವೇಳೆ ಹೆಸರು ಖರೀದಿ ಪ್ರಕ್ರಿಯೆ ಕುರಿತು ಸರ್ಕಾರವನ್ನ ಪ್ರಶ್ನಿಸಿದಾಗ‌ ಸರ್ಕಾರದಿಂದ ಬಂದ ಉತ್ತರ ತೀರಾ ಆಘಾತಕಾರಿಯಾಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ ಶಾಸಕ ಖರ್ಗೆ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ರೈತರು ಹಿಂಗಾರು ಬೆಳೆಯಾಗಿ ಹೆಸರನ್ನು ಬಿತ್ತುವುದು ವಾಡಿಕೆ. ಈ ಬೆಳೆಯು ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಕಟಾವಿಗೆ ಸಿದ್ಧವಾಗುತ್ತದೆ. ಸರ್ಕಾರವು ಆ ಸಮಯದಲ್ಲಿ ಹೆಸರು ಖರೀದಿ ಕೇಂದ್ರಗಳನ್ನು ಏಕೆ ಸ್ಥಾಪಿಸಲಿಲ್ಲ ಎಂಬ ಶಾಸಕ ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಗೆ ಸರ್ಕಾರದ ಪರವಾಗಿ ಉತ್ತರ ನೀಡಿದ ಕಾನೂನು ಸಚಿವ ಮಾಧುಸ್ವಾಮಿ, ನವೆಂಬರ್ ತಿಂಗಳಿನಲ್ಲಿ ನೊಂದಣಿ ಪ್ರಕ್ರಿಯೆಯನ್ನು ಸರ್ಕಾರವು ಆರಂಭಿಸಿದ್ದು, 7,301 ರೈತರು ಹೆಸರು ಮಾರಾಟ ಮಾಡಲು ನೊಂದಣಿ ಮಾಡಿಸಿದ್ದರು. ಆದರೆ, ಸರ್ಕಾರದ ಬೆಂಬಲ ಬೆಲೆಗಿಂತ ಖಾಸಗಿ ಮಾರುಕಟ್ಟೆಯಲ್ಲಿ ಹೆಸರಿನ ಬೆಲೆ ಅಧಿಕವಾಗಿದ್ದರಿಂದ ರೈತರು ಖರೀದಿ ಕೇಂದ್ರಗಳತ್ತ ಸುಳಿಯಲಿಲ್ಲ ಎಂಬ ಹಾರಿಕೆ ಉತ್ತರವನ್ನು ನೀಡುವ ಮೂಲಕ, ಇಡೀ ಸದನ ಹಾಗೂ ರಾಜ್ಯದ ರೈತರ ದಿಕ್ಕುತಪ್ಪಿಸುವ ಕೆಲಸವನ್ನು ಸಚಿವರು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಸಚಿವರ ಈ ಸ್ಪಷ್ಟನೆ ಸತ್ಯಕ್ಕೆ ದೂರವಾಗಿದ್ದು, ಕಲಬುರಗಿ ಜಿಲ್ಲಾಧಿಕಾರಿಗಳೊಂದಿಗೆ ನಾನು ಈ ವಿಚಾರವಾಗಿ ಚರ್ಚಿಸಿದಂತೆ, ಸರ್ಕಾರವು ಬೆಂಬಲ ಬೆಲೆಯಡಿ ಹೆಸರು ಖರೀದಿ ಕೇಂದ್ರಗಳನ್ನು ಘೋಷಣೆ ಮಾಡಿತ್ತೇ ಹೊರತು, ಖರೀದಿ ಪ್ರಕ್ರಿಯೆಯನ್ನು ಆರಂಭಿಸಿಲ್ಲ. ಇದನ್ನು ಬಯಲಿಗೆಳೆದಾಗ ನಂತರದಲ್ಲಿ ಮಾನ್ಯ ಸಚಿವರೇ ವಿಧಿಯಿಲ್ಲದೇ ಒಪ್ಪ ಬೇಕಾಯಿತು ಎಂದು ಶಾಸಕ ಖರ್ಗೆ ತಿಳಿಸಿದ್ದಾರೆ.

ಸರ್ಕಾರದ ಈ ನಿರ್ಲಕ್ಷ್ಯದಿಂದಾಗಿ ಅನೇಕ ರೈತರು ಅತೀ ಕಡಿಮೆ ಬೆಲೆಗೆ ಖಾಸಗಿಯವರಿಗೆ ತಾವು ಕಷ್ಟಪಟ್ಟು ಬೆಳೆದ ಬೆಳೆಯನ್ನು ಬೆಂಬಲ ಬೆಲೆಗಿಂತ ಅತೀ ಕಡಿಮೆ ಬೆಲೆಗೆ ಖಾಸಗಿ ಮಾರುಕಟ್ಟೆಯಲ್ಲಿ ಮಾರಬೇಕಾದ ಪರಿಸ್ಥಿತಿ ಉದ್ಭವವಾಯಿತು. ಇದರಿಂದಾಗಿ ಅನೇಕ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕದ ಜನರ ಕುರಿತಾಗಲಿ, ಈ ಪ್ರದೇಶದ ಅಭಿವೃದ್ಧಿ ಬಗ್ಗೆಯಾಗಲಿ, ನಮ್ಮ ಭಾಗದ ರೈತರ ಶ್ರೇಯೋಭಿವೃದ್ಧಿಗಾಗಲಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿಯಿಲ್ಲ ಎಂಬುದು ಇಂದು ಮತ್ತೊಮ್ಮೆ ಬಟಾಬಯಲಾಗಿದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here