ಕಲಬುರಗಿ: ನೀನೊಲಿದರೆ ಸಕಲ ಪಡಿಪದಾರ್ಥವು ಇದಿರಲ್ಲಿರ್ಪವು ಎನ್ನುವ ಅಣ್ಣ ಬಸವಣ್ಣನವರ ವಚನ ಹಾಗೂ ನೀನು ನನಗೊಲಿದೆ ನಾನು ನಿನಗೊಲಿದೆ ಎಂಬ ಅಕ್ಕನ ವಚನದ ಆಶಯದಂತೆ ಡಾ. ವಿಜಯಕುಮಾರ ಪರುತೆ ಅವರ ನೀನೊಲಿದರೆ ದ್ವಪದಿ ಸಂಕಲನವು ಒಲವು, ಒಲಿವ ಮಹತ್ವವನ್ನು ಕುರಿತು ಹೇಳುವಂತಿದೆ ಎಂದು ಪತ್ರಕರ್ತ- ಸಾಹಿತಿ ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಮ್ಮ (V.G) ಮಹಿಳಾ ಪದವಿ ಮಹಾವಿದ್ಯಾಲಯ ಮತ್ರು ಸ್ನಾತಕೋತ್ತರ ಕೇಂದ್ರದ ಸಾಹಿತ್ಯ ಸಂಘದ ಅಡಿಯಲ್ಲಿ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ
ಡಾ. ವಿಜಯಕುಮಾರ ಪರೂತೆ ರಚಿಸಿದ ನೀನೊಲಿದರೆ ದ್ವಿಪದಿ ಸಂಕಲನ ಕೃತಿ ಕೃತಿ ಕುರಿತು ಮಾತನಾಡಿದ ಅವರು, ಇಲ್ಲಿನ ದ್ವಿಪದಿ ಸಂಕಲನದಲ್ಲಿ ಪ್ರೀತಿ-ಪ್ರೇಮ, ಪ್ರಣಯ, ಒಲವು, ನಿಲುವು, ನ್ಯಾಯ-ನೀತಿ ಸಮಾಜ ಸೇವೆ, ದಾಂಪತ್ಯ ಜೀವನ, ಮಾನವೀಯತೆ ಈ ಕುರಿತಂತೆ ಒಟ್ಟು ೧೦೬೫ ದ್ವಿಪದಿಗಳಿವೆ ಎಂದು ಅವರು ತಿಳಿಸಿದರು.
ಕೊರೊನಾ ನಿಮಿತ್ತ ಹೇರಲಾದ ಲಾಕ್ ಡೌನ್ ವೇಳೆಯನ್ನು ಸದುಪಯೋಗಪಡಿಸಿಕೊಂಡ ಪರುತೆ ಅವರು ಕಿರಿದರಲ್ಲಿ ಹಿರಿದಾದ ತತ್ವವನ್ನು ಅಡಗಿಸಿದ್ದಾರೆ. ಜಿಟಿ ಜಿಟಿ ಮಳೆ ಬಂದು ಭೂಮಿ ತೇವಗೊಳ್ಳುವಂತೆ ಓದುಗರ ಹೃದಯವನ್ನು ಹೃದ್ಯಗೊಳಿಸುವ ಇಲ್ಲಿನ ದ್ವಿಪದಿಗಳು ಬಸುಕಿನ ಸಾರ್ಥಕತೆಯನ್ನು ಕುರಿತು ಹೇಳುತ್ತವೆ ಎಂದು ವಿವರಿಸಿದರು.
ಕೃತಿ ಲೋಕಾರ್ಪಣೆ ಮಾಡಿದ ಹಿರಿಯ ಸಾಹಿತಿ ಡಾ. ಕಾಶಿನಾಥ ಅಂಬಲಗೆ ಮಾತನಾಡಿ, ಬದುಕು ಮತ್ತು ಬರಹಕ್ಕೆ ಬದ್ಧತೆ ಅಗತ್ಯ, ದೇಶದ ಇಂದಿನ ಅನಾರ್ಕಿ ಸ್ಥಿತಿಯನ್ನು ಕಂಡೂ ಲೇಖಕರು, ಬರಹಗಾರರು ಸುಮ್ಮನಿರಬಾರದು. ವರ್ತಮಾನದ ಸಮಸ್ಯೆ, ತಲ್ಲಣಗಳಿಗೆ ಅವರು ಸ್ಪಂದಿಸಬೇಕು ಎಂದು ಕರೆ ನೀಡಿದರು.
ಸಿಪಿಐ (ಎ.ಸಿ.ಬಿ) ಮಹ್ಮದ್ ಇಸ್ಮಾಯಿಲ್ ಶರೀಫ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಕಾಲೇಜಿನ ಪ್ರಾಚಾರ್ಯ ಡಾ. ರಾಜೇಂದ್ರ ಕೊಂಡಾ ಅಧ್ಯಕ್ಷತೆ ವಹಿಸಿದ್ದರು. ಡಾ. ಶಾಂತಾ ಮಠ ನಿರೂಪಿಸಿದರು. ಡಾ. ಮೀನಾಕ್ಷಿ ಬಾಳಿ ಅತಿಥಿಗಳ ಪರಿಚಯ ಮಾಡಿದರು. ಡಾ. ನಾಗೇಂದ್ರ ಮಸೂತಿ ಪ್ರಾಸ್ತಾವಿಕ ಮಾತನಾಡಿದರು. ರೇಣುಕಾ ಹಾಗರಗುಂಡಗಿ, ಶಕುಂತಲಾ ಭದ್ರಶೆಟ್ಟಿ ವಂದಿಸಿದರು.
ಡಾ. ಮಹೇಶ ಗಂವ್ಹಾರ, ಮೋಹನರಾಜ ಪತ್ತಾರ, ಪ್ರೊ. ಗಡಿಪಾಟೀಲ, ಮಹಿಪಾಲರೆಡ್ಡಿ ಮುನ್ನೂರ್, ಸಿ.ಎಸ್. ಮಾಲಿಪಾಟೀಲ, ವಿಶ್ವನಾಥ ಭಕ್ರೆ, ಶಿವಾನಂದ ಮಠಪತಿ, ಪ್ರೊ. ಎಸ್. ಎಲ್. ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.