ಮಾಜಿ ಸಿಎಂ ಧರ್ಮಸಿಂಗ್ ರಾಷ್ಟ್ರ ಕಂಡ ಅಪರೂಪದ ರಾಜಕಾರಣಿ: ವಿ.ಆರ್.ಸುದರ್ಶನ್

0
87

ಕಲಬುರಗಿ: ರಾಷ್ಟ್ರ ಕಂಡ ಅಪರೂಪದ ರಾಜಕಾರಣಿ ಮಾಜಿ ಸಿಎಂ ಲಿಂ.ಡಾ.ಎನ್.ಧರ್ಮಸಿಂಗ್ ಅವರು ಸಮಾಜವಾದದ ಹಿನ್ನೆಲೆಯುಳ್ಳ ನಾಯಕರಾಗಿದ್ದರು. ನಾಡಿನ ಆರ್ಥಿಕ ಸಾಮಾಜಿಕ ಕ್ರಾಂತಿ ಹಾಗೂ ಈ ಭಾಗಕ್ಕೆ ವಿಶೇಷ ಸ್ಥಾನಮಾನದ ಕೂಗಿಗೆ ಬೆನ್ನೆಲುಬಾಗಿ ನಿಂತವರು ಹಾಗೂ ಡಾ.ನಂಜುಂಡಪ್ಪ ವರದಿಯ ಸಂಪೂರ್ಣ ಅನುಷ್ಠಾನಕ್ಕೆ ಶ್ರಮಿಸಿದ್ದರು ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹೇಳಿದರು.

ಸರ್ವಧರ್ಮ ಸಮನ್ವಯಕಾರ-ಮಾಜಿ ಸಿಎಂ ಲಿಂ.ಡಾ.ಎನ್.ಧರ್ಮಸಿಂಗ್ ಅವರ ೮೪ನೇ ಜನ್ಮದಿನದ ಪ್ರಯುಕ್ತ ವಿಶ್ವಜ್ಯೋತಿ ಪ್ರತಿಷ್ಠಾನ ನಗರದ ಸುಲಫಲ ಮಠದಲ್ಲಿ ಶುಕ್ರವಾರ ಆಯೋಜಿಸಿದ ಸಮಾರಂಭದಲ್ಲಿ ಹಿರಿಯರಿಗೆ ‘ಧರ್ಮಪ್ರಜೆ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಅಧಿಕಾರ ಬಂದಾಗ ಅನೇಕ ಜನ ರಾಜಕಾರಣಿಗಳು ಬದಲಾಗುವುದನ್ನು ಕಾಣುತ್ತೇವೆ.ಆದರೆ ಎನ್.ಧರ್ಮಸಿಂಗ್ ಅವರು, ಶಾಸಕ, ಮಂತ್ರಿ ಕೊನೆಗೆ ಮುಖ್ಯಮಂತ್ರಿ ಆದರೂ ಅವರ ನಡೆ-ನುಡಿಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಜಾತಿ ರಹಿತ ರಾಜಕಾರಣ ಮಾಡಿದ ಅವರ ರಾಜಕೀಯ ಜೀವನ ಇಂದು ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ನಾಡಿಗೆ ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿರುವ ಕೊಡುಗೆ ಅಮೋಘವಾದುದು ಎಂದರು.

Contact Your\'s Advertisement; 9902492681

ಸಾನಿದ್ಯವಹಿಸಿದ್ದ ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಧರ್ಮಸಿಂಗ್ ಅವರು ರಾಜಕಾರಣದಲ್ಲಿ ಅಜಾತ ಶತ್ರುವಾಗಿದ್ದರು. ಸರಳ, ಸಜ್ಜನ ವ್ಯಕ್ತಿತ್ವದ ಅವರು ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಿದ್ದರು. ಈ ಭಾಗದಲ್ಲಿ ಧರ್ಮಸಿಂಗ್ ಮತ್ತು ಮಾಜಿ ಕೇಂದ್ರ ಸಚಿವ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಲವ ಕುಶರಂತೆ ಇದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಧರ್ಮಸಿಂಗ್ ಅವರು ನಿರ್ವಹಿಸದ ಖಾತೆ ಇರಲಿಲ್ಲ. ಅಪಾರ ಜನಪರ ಕಾಳಜಿ ಹೊಂದಿದ್ದ ಅವರು ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಹೊಂದಿದ್ದರು ಎಂದರು.

ಪ್ರತಿಷ್ಠಾನ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಮಾಜಿ ಸಿಎಂ ಎನ್.ಧರ್ಮಸಿಂಗ್ ಅವರಿಗೆ ಧರ್ಮಸಿಂಗ್ ಅವರೇ ಸಾಟಿ. ರಾಜಕೀಯ ಸೇರಿದಂತೆ ಯಾವುದೇ ರೀತಿಯಿಂದ ನೋಡಿದರೂ ಅವರ ಬದುಕು ಆದರ್ಶವಾಗಿ ನಿಲ್ಲುತ್ತದೆ. ಹಿರಿಯ ನಾಯಕರಾದ ಡಾ.ಮಲ್ಲಿಕಾರ್ಜುನ ಖರ್ಗೆ ಹಾಗೂ ಎನ್.ಧರ್ಮಸಿಂಗ್ ಅವರ ಸಾಮಾಜಿಕ ಕಳಕಳಿಯಿಂದ ಈ ಭಾಗಕ್ಕೆ ೩೭೧(ಜೆ) ಜಾರಿ, ಫುಡ್ ಪಾರ್ಕ್, ಕಲಬುರಗಿಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ, ಬೀದರ-ಶ್ರೀರಂಗಪಟ್ಟಣ ಹೆದ್ದಾರಿ ಆಬಿವೃದ್ಧಿ, ಇಎಸ್‌ಐ ಆಸ್ಪತ್ರೆ ಸೇರಿದಂತೆ ಅನೇಕ ಮಹತ್ವದ ಯೋಜನೆಗಳು ಜಾರಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದ ಅವರು, ಇಂಥ ಮುತ್ಸದ್ದಿ ನಾಯಕರ ಜನ್ಮದಿನಾಚರಣೆಗಳು ಕುಟುಂಬಕ್ಕೆ ಸೀಮಿತಗೊಳಿಸದೇ ಸಾಮಾಜಿಕವಾಗಿ ಆಚರಣೆ ಆಗಲಿ ಎಂಬ ಉದ್ದೇಶದಿಂದ ಪ್ರತಿ ವರ್ಷ ಈ ರೀತಿಯಾಗಿ ಆಚರಿಸಿ, ಧರ್ಮಸಿಂಗ್ ಅವರನ್ನು ಶಾಶ್ವತವಾಗಿ ಜೀವಂತವಾಗಿಡುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಜಿಪಂ ಮಾಜಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ, ಉದ್ಯಮಿ ಕೃಷ್ಣಾಜೀ ಕುಲಕರ್ಣಿ, ಜೀವರ್ಗಿ ತಾಲೂಕು ನಿವಾಸಿಗಳ ಸಂಘದ ಅಧ್ಯಕ್ಷ ವಿಜಯಕುಮಾರ ದುದ್ದಗಿ ಮಳ್ಳಿ ಮಾತನಾಡಿದರು. ಪ್ರತಿಷ್ಠಾನ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಂಗ್ ಠಾಕೂರ್, ಕೆಪಿಸಿಸಿ ಸದಸ್ಯ ಹಣಮಂತ ಭೂಸನೂರ, ಸಂಘಟಕರಾದ ಬಿ.ಎಂ.ಪಾಟೀಲ ಕಲ್ಲೂರ(ಕೆ), ಶಿವರಾಜ್ ಅಂಡಗಿ, ರವೀಂದ್ರಕುಮಾರ ಭಂಟನಳ್ಳಿ, ಶರಣಬಸವ ಜಂಗಿನಮಠ, ವಿಶ್ವನಾಥ ಸುಲೇಪೇಟ್ ಕೋಡ್ಲಿ, ಮಾಲಾ ಕಣ್ಣಿ, ಮಾಲಾ ದಣ್ಣೂರ, ಶಿವಾನಂದ ಮಠಪತಿ, ಶರಣಬಸಪ್ಪ ನರೋಣಿ ತಾಡತೆಗನೂರ, ಭುವನೇಶ್ವರಿ ಹಳ್ಳಿಖೇಡ, ಶರಣರಾಜ್ ಛಪ್ಪರಬಂದಿ, ಪ್ರಭುದೇವ ಯಳವಂತಗಿ, ರವಿಕುಮಾರ ಶಹಾಪುರಕರ್, ಪ್ರಭವ ಪಟ್ಟಣಕರ್, ಮಂಜುಳಾ ಪಾಟೀಲ, ಕಲ್ಯಾಣಕುಮಾರ ಶೀಲವಂತ, ಪೂಜಾ ಆಲಗೂಡ, ವಿನೋದ ಜೇನವೇರಿ ಇತರರು ಉಪಸ್ಥಿತರಿದ್ದರು.

ಹಿರಿಯರಿಗೆ ‘ಧರ್ಮಪ್ರಜೆ’ ಪ್ರಶಸ್ತಿ ಪ್ರದಾನ: ಮಾಜಿ ಸಿಎಂ. ಡಾ.ಎನ್.ಧರ್ಮಸಿಂಗ್ ಅವರ ಕಟ್ಟಾ ಅನುಯಾಯಿಗಳಾದ ಶಾಂತಗೌಡ ದುಮ್ಮದ್ರಿ, ನೆಲೋಗಿಯ ಸಂಗಣ್ಣ ದೇಸಾಯಿ ಅಲ್ಲಾಗೋಳ, ದೇವೀಂದ್ರಪ್ಪ ಪೂಜಾರಿ ಬಿರಾಳ, ಮಾಜಿ ಮೆಯರ್ ಚಂದ್ರಿಕಾ ಪರಮೇಶ್ವರ, ಅಮೀರ್ ಜಮಾದಾರ ಜೇವರ್ಗಿ, ತಿಪ್ಪಣ್ಣ ನಾಯ್ಕೋಡಿ ಕಟ್ಟಿಸಂಗಾವಿ ಅವರಿಗೆ ‘ಧರ್ಮಪ್ರಜೆ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪ್ರಸ್ತುತ ಸಮಾಜದಲ್ಲಿ ರಾಜಕಾರಣದ ಅರ್ಥ ಮಾಯವಾಗುತ್ತಿರುವ ಇಂದಿನ ಸಂದಿಗ್ಧದ ಸ್ಥಿತಿಯಲ್ಲಿ ಮೃದು ಸ್ವಭಾವದ ಮಾಜಿ ಸಿಎಂ ಡಾ. ಎನ್.ಧರ್ಮಸಿಂಗ್ ಅವರು ತಮ್ಮ ಬದ್ಧತೆಯ ವಿಚಾರಗಳಿಂದ ಇಂದು ಸರ್ವರಿಗೂ ಮಾದರಿಯಾಗಿ ನಿಲ್ಲುತ್ತಾರೆ. ಸಾಮಾನ್ಯರ ಮಾತಿಗೆ ಗೌರವ ಕೊಟ್ಟು ಅವರ ಕಷ್ಟ ಸು:ಖಗಳಿಗೆ ಧ್ವನಿಯಾಗಿ ನಿಲ್ಲುತ್ತಿದ್ದುದರ ಕಾರಣಕ್ಕಾಗಿಯೇಧರ್ಮಸಿಂಗ್ ಅವರು ಶ್ರೀಸಾಮನ್ಯರ ನಾಯಕರೆ ನಿಸಿಕೊಂಡರು. – ವಿ.ಆರ್. ಸುದರ್ಶನ್, ಮಾಜಿ ಸಭಾಪತಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here