ಅನ್ನದಾತರ ಅಳಲು ಅರಿಯದ ಕಿವುಡ ಬಿಜೆಪಿ ಸರಕಾರ

0
58

ವಾಡಿ: ಕಳೆದ ಎರಡು ತಿಂಗಳಿಂದ ರೈತರು ಥರಗುಟ್ಟುವ ದೇಹಲಿಯ ಚಳಿಯಲ್ಲಿ ಕುಳಿತು ಮೂರು ಕರಾಳ ಕೃಷಿ ಕಾಯ್ದೆಗಳ ವಾಪಾಸಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಹೋರಾಟದ ಸಂಘರ್ಷದಲ್ಲಿ ಕೆಲ ರೈತರು ಮರಣಹೊಂದುವ ಮೂಲಕ ಹುತಾತ್ಮರಾಗಿದ್ದಾರೆ. ಆದರೂ ಈ ಕಿವುಡ ಕೇಂದ್ರ ಬಿಜೆಪಿ ಸರಕಾರಕ್ಕೆ ದೇಶದ ಅನ್ನದಾತರ ಅಳಲು ಅರ್ಥವಾಗುತ್ತಿಲ್ಲ ಎಂದು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ಆಕ್ರೋಶ ವ್ಯಕ್ತಪಡಿಸಿದರು.

ಹಳಕರ್ಟಿ ಗ್ರಾಮದಲ್ಲಿ ರೈತ-ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್) ಏರ್ಪಡಿಸಿದ್ದ ರೈತ ಜಾಗೃತಿ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ದೇಹಲಿಯಲ್ಲಿ ಐತಿಹಾಸಿಕ ಚಳುವಳಿ ಹೂಡಿರುವ ರೈತರ ಕಷ್ಟ ಬಗೆಹರಿಸಲು ಮುಂದಾಗಬೇಕಾದ ಬಿಜೆಪಿ ಸರಕಾರ, ರೈತರ ಹೋರಾಟವನ್ನೆ ಅಪಹಾಸ್ಯ ಮಾಡುವ ಮೂಲಕ ಕಾರ್ಪೋರೇಟ್ ಕುಳಗಳ ಪರವಾದ ತನ್ನ ನಿಷ್ಠೆಯನ್ನು ಪ್ರದರ್ಶಿಸಿದೆ. ಚುನಾವಣೆ ಪೂರ್ವ ಅಂಬಾನಿ ಮತ್ತು ಅದಾನಿಗಳಂತಹ ಬಂಡವಾಳಶಾಹಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಬಿಜೆಪಿ ಈಗ ಉದ್ಯಮಿಪತಿಗಳ ಸೇವೆಗೆ ನಿಲ್ಲುವ ಮೂಲಕ ರೈತರ ಸಮಾದಿ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.

Contact Your\'s Advertisement; 9902492681

ಮೋಬಯಿಲ್ ರೀಚಾರ್ಜ್ ಮಾಡುವ ರೀತಿಯಲ್ಲಿ ರೈತರ ಪಂಪ್‌ಸೆಟ್‌ಗಳಿಗೂ ವಿದ್ಯುತ್ ರೀಚಾರ್ಜ್ ಪದ್ಧತಿ ಜಾರಿಯಾಗಲು ಈ ಹೊಸ ಮಸೂಧೆಗಳು ಪ್ರೇರೇಪಿಸುತ್ತವೆ. ಕೃಷಿ ಭೂಮಿಗಳ ಮೇಲೆ ಕಾರ್ಪೋರೇಟ್ ಖದೀಮರು ಸಂಪೂರ್ಣ ಹಿಡಿತ ಸಾಧಿಸುತ್ತಾರೆ. ಕೃಷಿ ನೆಲಗಳನ್ನು ಕಳೆದುಕೊಳ್ಳುವ ರೈತರು ತಮ್ಮದೇ ಭೂಮಿಯಲ್ಲಿ ಜೀತದಾಳುಗಳಾಗಿ ಶೋಷಣೆಗೊಳಗಾಗುತ್ತಾರೆ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ, ರೈತರ ಹೆಣಗಳ ಮೇಲೆ ಶಾಸನ ಬರೆಯಲು ಮುಂದಾಗಿದ್ದಾರೆ ಎಂದು ದೂರಿದ ವೀರಭದ್ರಪ್ಪ, ದೇಶದ ಸರಕಾರ ಜನಸಾಮಾನ್ಯರ ಪಾಲಿಗೆ ಸತ್ತುಹೋಗಿದೆ. ಪರಿಣಾಮ ಜ.೨೬ ರಂದು ಲಕ್ಷಾಂತರ ರೈತರು ಎತ್ತಿನಗಾಡಿ, ಟ್ರ್ಯಾಕ್ಟರ್, ಎತ್ತುಗಳ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ ಎಂದರು.

ಆರ್‌ಕೆಎಸ್ ತಾಲೂಕು ಉಪಾಧ್ಯಕ್ಷ ಗುಂಡಣ್ಣ ಎಂ.ಕೆ, ಎಐಡಿಎಸ್‌ಒ ಅಧ್ಯಕ್ಷ ಗೌತಮ ಪರತೂರಕರ, ಎಐಡಿವೈಒ ಅಧ್ಯಕ್ಷ ಶರಣು ವಿ.ಕೆ, ಎಐಯುಟಿಯುಸಿ ಜಿಲ್ಲಾ ಜಂಟಿ ಕಾರ್ಯದರ್ಶಿ ಶರಣು ಹೇರೂರ, ಮುಖಂಡರಾದ ಭಾಗಣ್ಣ ಬುಕ್ಕಾ, ಮಲ್ಲಿನಾಥ ಹುಂಡೇಕಲ್, ವೆಂಕಟೇಶ ದೇವದುರ್ಗ, ಶಿವುಕುಮಾರ ಆಂದೋಲಾ, ಮಲ್ಲಣ್ಣ ದಂಡಬಾ, ಶರಣು ದೋಶೆಟ್ಟಿ, ಗೋವಿಂದ ಯಳವಾರ, ರಾಜು ಒಡೆಯರ, ಅರುಣಕುಮಾರ ಹಿರೆಬಾನರ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here