ಕಲಬುರಗಿ: ಬೆಂಗಳೂರಿನ ಉತ್ತರಾದಿ ಮಠದ ಶ್ರೀ ಸತ್ಯಪ್ರಮೋದ ಕಲ್ಯಾಣ ಮಂಟಪದಲ್ಲಿ ಗುರುವಾರ ಶ್ರೀ ಶ್ರೀನಿವಾಸ ಉತ್ಸವ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವದಲ್ಲಿ ಕಲಬುರಗಿಯ ಮೂವರಿಗೆ “ಹರಿದಾಸ ಅನುಗ್ರಹ ಪ್ರಶಸ್ತಿ” ಪ್ರದಾನ ಮಾಡಿ ಗೌರವಿಸಲಾಯಿತು.
ದಾಸಸಾಹಿತ್ಯ ವಿದ್ವಾಂಸ, ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ವ್ಯಾಸರಾಜ ಸಂತೆಕೆಲ್ಲೂರ, ‘ಸಂಯುಕ್ತ ಕರ್ನಾಟಕ’ದ ಕಲಬುರಗಿ ಆವೃತ್ತಿ ಪ್ರಧಾನ ವರದಿಗಾರ ಎಚ್. ಶೇಷಗಿರಿ ಹಾಗೂ ವಿಜಯವಾಣಿ ಪತ್ರಿಕೆಯ ವರದಿಗಾರ ಶ್ಯಾಮಸುಂದರ ಕುಲಕರ್ಣಿ ಪ್ರಶಸ್ತಿ ಸ್ವೀಕರಿಸಿದರು.
ಉತ್ತರಾದಿ ಮಠದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಂ. ವಿದ್ಯಾಧೀಶಾಚಾರ್ಯ ಗುತ್ತಲ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಹಿರಿಯ ಪತ್ರಕರ್ತ ಎಸ್.ಕೆ. ಶೇಷಚಂದ್ರಿಕ, ಶ್ರೀ ಶ್ರೀನಿವಾಸ ಉತ್ಸವ ಬಳಗದ ಅಧ್ಯಕ್ಷ ವಾದಿರಾಜ ತಾಯಲೂರು, ಬೆಂಗಳೂರು ಗಾಯನ ಸಮಾಜದ ಅಧ್ಯಕ್ಷ ಡಾ. ಎಂ.ಆರ್.ವಿ. ಪ್ರಸಾದ್, ಕೋಣನಕುಂಟೆ ಶ್ರೀನಿಧಿ ಶ್ರೀನಿವಾಸ ದೇವಸ್ಥಾನದ ಧರ್ಮದರ್ಶಿ ಡಾ. ಕೆ.ಎಸ್. ಸಮೀರಸಿಂಹ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಪುರಂದರದಾಸರ ಉತ್ಸವ ಮೂರ್ತಿಗೆ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಸಂಗೀತ ಕಲಾಭೂಷಣ ವಿದ್ವಾನ್ ಎಸ್. ಶಂಕರ್ ಮತ್ತು ಶಿಷ್ಯವೃಂದದವರು ಶ್ರೀ ಪುರಂದರದಾಸರ ನವರತ್ನಮಾಲಿಕೆ ಕೃತಿಗಳ ಗಾಯನಗೋಷ್ಠಿ ನಡೆಸಿಕೊಟ್ಟರು. ಶ್ರೀಮತಿ ಮುಕ್ತಾ ಪ್ರಸಾದ್ ಪ್ರಾರ್ಥನೆಗೈದರು.