‘ಕಳಚಿತು ರಂಗಕೊಂಡಿ’: ಹಿರಿಯ ರಂಗಕರ್ಮಿ ಎಲ್.ಬಿ.ಕೆ ಆಲ್ದಾಳ ಅಸ್ತಂಗತ

0
97
  • ಮಹಿಪಾಲರೆಡ್ಡಿ ಮುನ್ನೂರ್

ಕಲಬುರಗಿ : ಕನ್ನಡದ ಹಿರಿಯ ನಾಟಕಕಾರ, ಗುಬ್ಬಿ ವೀರಣ್ಣ ರಂಗ ಪ್ರಶಸ್ತಿ ಪಡೆದ ಹೈದ್ರಾಬಾದ್ ಕರ್ನಾಟಕದ ಏಕೈಕ ರಂಗಕರ್ಮಿ ಎಲ್.ಬಿ.ಕೆ.ಆಲ್ದಾಳ ಅವರು ಸೋಮವಾರ ರಾತ್ರಿ ಎಂಟು ಗಂಟೆ ಹೊತ್ತಿಗೆ ನಿಧನರಾಗಿದ್ದಾರೆ.

ಲಾಲ ಅಹ್ಮದ ಬಂದೇನವಾಜ್ ಖಲೀಫ್ ಆಲ್ದಾಳ (೮೫) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಶಹಾಪುರ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಸೇರ್ಪಡೆಯಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ.ಅವರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಎರಡು ವರ್ಷದ ಹಿಂದೆ ಅವರ ಪತ್ನಿ ನಿಧನರಾಗಿದ್ದಾರೆ.

Contact Your\'s Advertisement; 9902492681

ಆಲ್ದಾಳ ಅವರ ಅಂತ್ಯಕ್ರಿಯೆಯು ಮಂಗಳವಾರ (ಏಪ್ರಿಲ್ ೧೩) ರಂದು ಜೇವರ್ಗಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ಬೆಳಿಗ್ಗೆ ೧೦ ಕ್ಕೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ೨೦೧೩ ರಲ್ಲಿ ಹಿರಿಯ ಕವಿ ಆಲ್ದಾಳ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.

ಆಲ್ದಾಳ ಕುರಿತು : ಹೈದ್ರಾಬಾದ್ ಕರ್ನಾಟಕ ಪ್ರದೇಶದಿಂದ ರಂಗಭೂಮಿ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಸರಕಾರ ನೀಡುವ ಗುಬ್ಬಿ ವೀರಣ್ಣ ರಂಗಪ್ರಶಸ್ತಿಯನ್ನು ಪಡೆದ ಏಕೈಕ ನಾಟಕಕಾರ ಎಂದರೆ ಶ್ರೀ ಎಲ್.ಬಿ.ಕೆ. ಆಲ್ದಾಳ ಅವರು. ಈ ಭಾಗದ ರಂಗಭೂಮಿ ಕ್ಷೇತ್ರಕ್ಕೆ ನೀಡಿದ ಆದ್ಯತೆ ನಿಜಕ್ಕೂ ಶ್ಲಾಘನೀಯ. ಇಂತಹ ಪ್ರತಿಭಾನ್ವಿತ ಕವಿ, ನಾಟಕಕಾರ ಶ್ರೀ ಎಲ್.ಬಿ.ಕೆ. ಆಲ್ದಾಳ ಅವರ ಪೂರ್ಣ ಹೆಸರು, ಲಾಲ್ ಮಹ್ಮದ ಬಂದೇನವಾಜ್ ಖಲೀಫ್ ಆಲ್ದಾಳ.

ನೂರಾರು ನಾಟಕಗಳ ನಿರ್ದೇಶನ ಮಾಡಿದ್ದರು. ನಾಟಕಗಳಲ್ಲಿ ಪಾತ್ರ ಮಾಡಿದ್ದರು. ಸಂತಮಹಾಂತರ ಬಗ್ಗೆ, ಶರಣರ ಬಗ್ಗೆ ನಾಟಕಗಳನ್ನು ಬರೆದಿದ್ದರು. ವಚನಗಳನ್ನು ಬರೆದಿದ್ದರು. ಕೇವಲ ಏಳನೇ ತರಗತಿ ಓದಿದ್ದ ಅವರು, ೮೫ ಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಶ್ರೇಯಸ್ಸು ಎಲ್.ಬಿ.ಕೆ.ಆಲ್ದಾಳ ಅವರಿಗೆ ಸಲ್ಲುತ್ತದೆ.

ಅವರು ಇಸ್ಲಾಂ ಧರ್ಮದಲ್ಲಿ ಜನಿಸಿದ್ದಾರೆ. ಆದರೆ, ಬೆಳಗಿನ ಸ್ನಾನಾದಿ ಕರ್ಮಗಳೆಲ್ಲ ಮುಗಿದ ನಂತರ ಅವರ ಬಾಯಿಯಲ್ಲಿ ಹೊರಡುವುದು ಗಾಯತ್ರಿ ಮಂತ್ರ. ಕುಳಿತುಕೊಳ್ಳುವಾಗ, ಏಳುವಾಗ.. ಮಲಗುವಾಗ..ಊಟ ಮಾಡುವ ಮೊದಲು ಮೊದಲ ತುತ್ತು ಬಾಯಿಗೆ ಇಟ್ಟುಕೊಳ್ಳುವಾಗ ಬಸವ ಬಸವ ಎನ್ನುತ್ತದೆ ಅವರ ಮನಸ್ಸು. ವಿನಯವಂತ, ನಡೆ-ನುಡಿ ಒಂದೇ, ಸದಾ ನಗುಮುಖ, ಸಹನೆ ಅಪಾರ, ಎಲ್ಲರೂ ನನ್ನವರು ಎನ್ನುವ ಅವರ ಮನಸ್ಸು, ಯಾವಾಗಲೂ ಆಧ್ಯಾತ್ಮದ ಕಡೆಗೆ ಒಲವು, ಶರಣರ ಬದುಕನ್ನು ಅಕ್ಷರಶಃ ಅಳವಡಿಸಿಕೊಂಡ ಶರಣಜೀವಿ. ಲಾಲ ಮಹ್ಮದ ಬಂದೇನವಾಜ ಖಲೀಫ್ ಅಲಿಯಾಸ್ ಎಲ್.ಬಿ.ಕೆ.ಆಲ್ದಾಳ ಗಂಭೀರ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದರು.

ಎಲ್.ಬಿ.ಕೆ. ಆಲ್ದಾಳರ ಜನ್ಮಭೂಮಿ ಮುಂಬಯಿ ಕರ್ನಾಟಕ ಪ್ರದೇಶದ ಆಗಿನ ವಿಜಾಪುರ (ಈಗ ವಿಜಯಪುರ) ಜಿಲ್ಲೆಯಾದರೂ ಕರ್ಮಭೂಮಿ ಹೈದ್ರಾಬಾದ ಕರ್ನಾಟಕ. ಅದರಲ್ಲೂ ಕಲಬುರ್ಗಿ ಜಿಲ್ಲೆ. ಸಂತರ-ಶರಣರ ಬೀಡಾದ ಸಗರನಾಡಿನ ಜೇವರ್ಗಿ ತಾಲೂಕಿನ ಮಳ್ಳಿ ಅವರ ಕಾರ್ಯಕೇತ್ರ. ಹೈಸ್ಕೂಲು ಶಾಲೆಯ ಕಟ್ಟೆ ಏರದಿದ್ದರೂ ಸಾಧನೆ ಮಾತ್ರ ಅಪ್ರತಿಮ. ಪತಿಭಕ್ತಿ ಎನ್ನುವ ಮೊದಲ ನಾಟಕ ಬರೆದು ಹವ್ಯಾಸಿ ರಂಗಭೂಮಿ ಶ್ರೀಮಂತಗೊಳಿಸಲು ಪ್ರಾರಂಭ ಮಾಡಿದರು. ಮುಂದೆ ಶ್ರೀ ವಿಶ್ವಾರಾಧ್ಯ ಮಹಾತ್ಮೆ ಸೇರಿದಂತೆ ಅನೇಕ ಪೌರಾಣಿಕ, ಸಾಮಾಜಿಕ, ಐತಿಹಾಸಿಕ ನಾಟಕಗಳ ಜೊತೆಗೆ ವಚನ, ಕಾವ್ಯ, ಚರಿತ್ರೆ, ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ನೀಡಿ ಸಾಹಿತ್ಯ ಕ್ಷೇತ್ರವನ್ನೂ ಶ್ರೀಮಂತಗೊಳಿಸುವಲ್ಲಿ ತಮ್ಮ ಕಾಣಿಕೆಯನ್ನಿತ್ತಿದ್ದಾರೆ.

ಕಾವ್ಯನಾಮ : ಎಲ್.ಬಿ.ಕೆ. ಆಲ್ದಾಳ. ತಂದೆಯ ಹೆಸರು : ಬಂದೇನವಾಜ, ತಾಯಿ ಹೆಸರು : ಶ್ರೀಮತಿ ಹುಸೇನಬಿ, ಜನ್ಮ ದಿನಾಂಕ : ೦೫-೧೧-೧೯೩೮ ಜನ್ಮ ಸ್ಥಳ : ಬನ್ನಿಹಟ್ಟಿ (ಪಿ.ಟಿ.) ತಾ. ಸಿಂಧಗಿ, ಜಿ. ಬಿಜಾಪೂರ ವಿದ್ಯಾಭ್ಯಾಸ : ೭ನೇ ತರಗತಿ ಉದ್ಯೋಗ : ರಂಗ ನಾಟಕ ರಚನೆ ಹಾಗೂ ರಂಗ ನಿರ್ದೇಶನ ಬರೆಯಲು ಪ್ರಾರಂಭ : ೧೯೬೨ ಹುದ್ದೆ ಕರ್ನಾಟಕ ನಾಟಕ ಆಕಾಡೆಮಿ ಸದಸ್ಯರು ಬೆಂಗಳೂರು. ಕಲಬುರಗಿ ಆಕಾಶವಾಣಿ ಧ್ವನಿ ಪರೀಕ್ಷೆ ಸದಸ್ಯರು ಕಲಬುರಗಿ. ಗೌರವಾಧ್ಯಕ್ಷರು : ಸಂಗೀತ ಕಲಾವಿದರ ಸಂಘ ಜೇವರಗಿ. ಸರಕಾರದ ಪ್ರಶಸ್ತಿಗಳು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ : ೨೦೦೧ ಕರ್ನಾಟಕ ನಾಟಕ ಆಕಾಡೆಮಿ ಪುರಸ್ಕಾರ : ೨೦೧೨ ಗುಬ್ಬಿ ವೀರಣ್ಣ ಪ್ರಶಸ್ತಿ : ೨೦೧೩

ಸಾಧನೆಯ ಹೆಜ್ಜೆ ಗುರುತುಗಳು : ೨೦೦೨ ರಲ್ಲಿ ತತ್ವ ಪದಕಾರರ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು. ಜೇವರಗಿ ತಾಲೂಕಿನ ಎರಡನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷ, ಕಲಬುರ್ಗಿ ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು.

ಬರೆದ ಪುಸ್ತಕಗಳು: ಪತಿಭಕ್ತಿ , ಕಲಿಯುಗದ ಕನ್ಯೆ , ನಮಸ್ಕಾರ , ಬಾಳಿಗೊಂದು ಬೆಲೆ ಬೇಕು , ನನ್ನ ದೇವರು , , ಕಣ್ಣಿಟ್ಟ ಕೈ ಕೊಟ್ಟ , ಜಮಖಂಡಿಯ ಅಯ್ಯಣ್ಣ ಮುತ್ಯಾ , ಭರತನೂರಿನ ಗುರುನಂಜೇಶ್ವರ ಮಹಾತ್ಮೆ , ಋಣ ಮುಟ್ಟಿತು ಛಲ ತೀರಿತು , ಕಡಕೋಳ ಮಡಿವಾಳೇಶ್ವರರು , ಶ್ರೀ ವಿಶ್ವಾರಾಧ್ಯ ಮಹಾತ್ಮೆ , ಗರತಿ ವಿಶ್ವದ ಜ್ಯೋತಿ , ಮೂರು ಮುತ್ತುಗಳು ,ಶಹಾಪೂರ ಮಹಾತ್ಮಾ ಚರಬಸವೇಶ್ವರರು, ಜೇವರಗಿ ಜ್ಯೋತಿ ಷಣ್ಮುಖ ಶಿವಯೋಗಿಗಳು, ಅಳ್ಳಳ್ಳಿ ಅಯ್ಯಪ್ಪಯ್ಯ ಮಹಾತ್ಮೆ , ಹಾರಕೂಡದ ಚನ್ನಬಸವ ಶಿವಯೋಗಿಗಳು ,ವಚನ ವಾಹಿನಿ , ಕಲ್ಕಂಬದ ಕಿರಣ , ಶರಣ ಸಿಂಚನ ಸೇರಿದಂತೆ ೮೫ ಕ್ಕೂ ಹೆಚ್ಚು ನಾಟಕ ಬರೆದಿದ್ದರು. ೧೦ ಕ್ಕೂ ಹೆಚ್ಚು ನಾಮಾವಳಿಗಳನ್ನು ಬರೆದಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here