ಬದುಕಿನ ನಿಗೂಢತೆಗೆ ವಚನಕಾರರ ಉತ್ತರ

0
177

ಬಸವಾದಿ ಶರಣರಿಗಿಂತ ಮುಂಚೆ ಬದುಕು ನಿಗೂಢ. ಅದೊಂದು ಬಿಡಿಸಲಾಗದ ಕಗ್ಗಂಟು. ಅದೊಂದು ರಹಸ್ಯ ಎಂದು ಹೇಳಲಾಗುತ್ತಿತ್ತು. ಹೀಗಾಗಿಯೇ ಅಲ್ಲಿರುವುದು ನಮ್ಮನೆ, ಇಲ್ಲಿರುವುದು ಸುಮ್ಮನೆ ಎಂದು ಹೇಳಿ ಇಹದ ಬದುಕನ್ನು ನಿರಾಕರಿಸಿ ಕಾಣದ ಬದುಕಿಗೆ ಹಂಬಲಿಸುವಂತೆ ಮಾಡಿ ಅದರ ಲಾಭವನ್ನು ತಾವು  ಪಡೆದುಕೊಳ್ಳುವ ಹುನ್ನಾರ ಅಡಗಿತ್ತು. ಧನ, ಧಾನ್ಯ ದಾನ ಮಾಡಿದರೆ ಪುಣ್ಯ ಬರುತ್ತದೆ. ನಾವು ಮಾಡುವ ಕೆಲಸ ಮಾಡಲೇಬೇಕು. ಆದರೆ ಫಲ ಮಾತ್ರ ಅವನಿಗೆ ಬಿಟ್ಟು ಬಿಡಬೇಕು ಎಂದು ಜನಸಾಮಾನ್ಯರನ್ನು ದಿಶಾಬೂಲ್ ಮಾಡುವ ಕೆಲಸ ನಡೆಯುತ್ತಿತ್ತು.

ಸತ್ತು ಸ್ವರ್ಗ ಸೇರಬೇಕಾದರೆ ಪುಜಾರಿ, ಪುರೋಹಿತರಿಗೆ ದಾನ, ಧರ್ಮ ಮಾಡಬೇಕು ಎಂಬಿತ್ಯಾದಿಯಾಗಿ ಹೇಳಿಕೊಂಡು ಜನರನ್ನು ಅಜ್ಞಾನದಲ್ಲಿಟ್ಟಿದ್ದರು. ಬದುಕು ನಿಗೂಢವಾಗಿದೆ. ಅದರ ರಹಸ್ಯವನ್ನು ಅರಿಯಬೇಕಾದರೆ ಸುಮ್ಮನೆ ಆಗುವುದಿಲ್ಲ. ಅದಕ್ಕಾಗಿ ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಗಡ್ಡಬಿಟ್ಟು ಗುಡ್ಡ ಸೇರಿದರೆ ಮಾತ್ರ ಬದುಕಿನ ರಹಸ್ಯ ಅರಿಯಬಹುದು. ಸದ್ಗತಿ ದೊರೆಯಬಲ್ಲುದು ಎಂದು ಹೇಳಿ ಜನರನ್ನು ಮೋಸ ಮಾಡಿಕೊಂಡು ಬರಲಾಗುತ್ತಿತ್ತು.

Contact Your\'s Advertisement; 9902492681

ಧರ್ಮ, ದೇವರ ಹೆಸರಿನಲ್ಲಿ ಜನಸಾಮಾನ್ಯರನ್ನು ಮೋಸ, ಶೋಷಣೆ ಮಾಡುತ್ತಿರುವುದನ್ನು ಚೆನ್ನಾಗಿಯೇ ಗ್ರಹಿಸಿದ ಅನುಭವ ಮಂಟಪದ ಅಧ್ಯಕ್ಷ ಅಲ್ಲಮಪ್ರಭುಗಳು, “ಕೊಟ್ಟ ಕುದುರೆಯನೇರದವ ವೀರನೂ ಅಲ್ಲ, ಧೀರನೂ ಅಲ್ಲ” ಎಂದು ಹೇಳಿ ಬದುಕೆಂಬ ಕುದರೆಯ ಬೆನ್ನ ಹೇರಿ ಚನ್ನಾಗಿ ಸವಾರಿ ಮಾಡಬೇಕು ಎಂಬುದನ್ನು ತಿಳಿಸಿಕೊಟ್ಟರು.

ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ ಎಂದು ಹೇಳಿ ಮರ್ತ್ಯಲೋಕ, ದೇವಲೋಕ ಬೇರಿಲ್ಲ. ಎಲ್ಲವೂ ಇಲ್ಲಿಯೇ ಇವೆ. ಅಯ್ಯಾ ಎಂದಡೆ ಸ್ವರ್ಗ, ಎಲವೋ ಎಂದಡೆ ನರಕ, ಮೃದು ವಚನಗಳೇ ಸಕಲ ಜಪಂಗಳಯ್ಯ ಎಂದು ಹೇಳಿ, ಒಳ್ಳೆಯದು, ಕೆಟ್ಟದ್ದು ಎಲ್ಲವೂ ಇಲ್ಲಿಯೇ ಇದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ನಾವೇ ನಿರ್ಧರಿಸಬೇಕು ಎಂದು ಬಸವಣ್ಣನವರು ಹೇಳಿದರು.

ಸತ್ತ ಮೇಲೆ ನಾವು ಒಯ್ಯುವುದು ಏನೂ ಇಲ್ಲ. ಸತ್ತು ಸ್ವರ್ಗ ಸೇರುವುದು ಆಗುವುದಿಲ್ಲ. ಯಾರೂ ಕಾಣದ, ನೋಡದ ಭ್ರಮೆಯ ಬೆನ್ನು ಹತ್ತಿ ಬದುಕು ಹಾಳು ಮಾಡಿಕೊಳ್ಳುವುದು ಬೇಡ. ವಸ್ತುಮೋಹದ ಬೆನ್ನು ಹತ್ತಿ ದುಗುಡ, ದುಮ್ಮಾನ, ದುಃಖದ ಬದುಕು ಮಾಡಿಕೊಳ್ಳುವುದು ಬೇಡ. ಕಾಣದ ದೇವರ ಬೆನ್ನು ಹತ್ತಿ ಬದುಕು ಹಾಳು ಮಾಡಿಕೊಳ್ಳದೆ ಸಮಾಜದಲ್ಲೇ ದೇವರನ್ನು ಕಾಣಬೇಕು ಎಂಬುದುನ್ನು ವಚನಕಾರರು ತಿಳಿಸಿಕೊಟ್ಟಿದ್ದಾರೆ.

ಜೀವಕಾರುಣ್ಯದಿಂದ ಬದುಕನ್ನು ಪ್ರೀತಿಸಿದರೆ ಬದುಕು ಬಂಗಾರವಾಗುತ್ತದೆ. ಬದುಕಿಗೆ ಭವಿಷ್ಯ ಮುಖ್ಯ. ನಮ್ಮ ಹಣೆ ಬರಹವನ್ನು ನಾವೇ ಬರೆದುಕೊಳ್ಳಬೇಕು ವಿನಃ ಇನ್ನೊಬ್ಬರು ಬರೆಯಲು ಬಾರದು ಎಂಬದುನ್ನು ವಚನಕಾರರು ಹೇಳಿಕೊಟ್ಟಿದ್ದಾರೆ. ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ ಸಿಲುಕಿದ ಬುದ್ಧ ಕೂಡ ಬದುಕನ್ನು ಅಲ್ಲಗಳೆಯಲಿಲ್ಲ. ಆಸೆಯೇ ದುಃಖಕ್ಕೆ ಮೂಲ. ಶಾಂತಿ, ಸೌಹಾರ್ದ ಗುಣಗಳೇ ನಮ್ಮ ಬದುಕನ್ನು ಕಾಪಾಡುತ್ತದೆ ಎಂದು ಹೇಳಿದ್ದಾರೆ.

ಹುಟ್ಟು-ಸಾವುಗಳನ್ನು ಮೀರಿದ ಪ್ರಜ್ಞೆ ಹೊಂದಿದ್ದ ಶರಣರು, ಸರಳ, ಸಹಜ, ಸಂತೃಪ್ತ ಜೀವನ ನಡೆಸಬೇಕು. ಒಳ-ಹೊರಗು ಒಂದಾಗಿ ಇರಬೇಕು. ಅಂದಾಗ ಈ ಬದುಕು ನಶ್ವರ ಅನಿಸದೆ, ಬದುಕು ನಿಶ್ಚಿತ, ನಿಶ್ಚಿಂತ ಅನಿಸುತ್ತದೆ. ಕಾಯಕ, ದಾಸೋಹದ ಮೂಲಕ ಬದುಕಿಗೆ ಬೆಲೆ ತಂದುಕೊಳ್ಳಬೇಕು ಎಂಬ ವಾಸ್ತವ ಪ್ರಜ್ಞೆಯನ್ನು ಅವರು ತುಂಬಿದರು.

ತಂದೆ ನೀನು, ತಾಯಿ ನೀನು, ಬಂಧು ನೀನು ಬಳಗ ನೀನು ಎಂದು ಸಮಾಜವನ್ನು ಬಗೆದು ಮಾನವೀಯ ನಡತೆಯ ಮೂಲಕ ಬದುಕಿನ ಹಣತೆ ಹಚ್ಚಬೇಕು. ದೀಪದಿಂದ ದೀಪ ಹೊತ್ತಿಸಿ ಬದುಕನ್ನು ಬೆಳಕಾಗಿಸಿಕೊಳ್ಳಬೇಕೆಂಬುದು ಶರಣರ ಆಶಯವಾಗಿತ್ತು.

(ಕೃಪೆ: ಶರಣ ಮಾರ್ಗ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here