ಕೋಲಾರ: ಜಿಲ್ಲೆ ಮತ್ತು ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿ ಸರ್ಕಾರ ಘೋಷಿಸಿರುವ ವೀಕೆಂಡ್ ಕರ್ಪ್ಯೂ ಸಮಯದಲ್ಲಿ ಸುಖಾಸುಮ್ಮನೆ ತಿರುಗುತ್ತಿದ್ದವರಿಗೆ ಪೊಲೀಸರಿಂದ ದಂಡ ವಿಧಿಸಲಾಯಿತು.
ಇಂದು ಕರ್ನಾಟಕ ರಾಜ್ಯದಲ್ಲಿ ಕೋವಿಡ್19 ಸೋಂಕು ತಡೆಗಟ್ಟಲು ವೀಕೆಂಡ್ ಕರ್ಪ್ಯೂ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಜನರಿಗೆ ಸಹಾಯವಾಗಲೆಂದು ನರಸಾಪುರ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾಡಳಿತ ಸರ್ಕಾರದ ಮಾರ್ಗಸೂಚಿಯಂತೆ ಬೆಳಿಗ್ಗೆ 6 ಗಂಟೆಯಿಂದ 10ಗಂಟೆ ವರೆಗೆ ಅಗತ್ಯ ವಸ್ತುಗಳಾದ ದಿನಸಿ, ತರಕಾರಿ, ಹಾಲು ಇನ್ನಿತರ ವಸ್ತುಗಳನ್ನು ಕೊಂಡುಕೊಳ್ಳಲು ಅನುಮತಿ ನೀಡಲಾಗಿತ್ತು.
ಜೊತೆಗೆ ವೇಮಗಲ್ ಪೊಲೀಸ್ ಠಾಣೆಯ ಅಧಿಕಾರಿಗಳು ನರಸಾಪುರ ಗ್ರಾಮದಲ್ಲಿ ಜನರಿಗೆ 10 ಗಂಟೆಯ ಕರ್ಪ್ಯೂ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರು. ಈಗಿದ್ದರು ಸಹ ಹಲವು ಜನರು ಯಾವುದೇ ಮಾಸ್ಕ್ ಹಾಕಿಕೊಳ್ಳದೆ ಓಡಾಡುತ್ತಿದ್ದರು, ಹಲವು ಬೈಕ್ ಸವಾರರು ಸಹ ಸುಮ್ಮನೆ ತಿರುಗುತ್ತಿದ್ದರು ಇದನ್ನು ಗಮನಿಸಿದ ವೇಮಗಲ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಂಜಿನಪ್ಪ ಇವರು ಕೂಡಲೇ ಕಾರ್ಯಪ್ರವೃತ್ತರಾಗಿ ಮಾಸ್ಕ್ ಧರಿಸದ ಹಾಗೂ ಸುಮ್ಮನೆ ಮನೆಯಿಂದ ಹೊರಬರುವ ಜನರಿಗೆ, ಬೈಕ್ ಸವಾರರಿಗೆ ತಲಾ 100 ರೂಪಾಯಿಗಳ ದಂಡವನ್ನು ವಿಧಿಸಿದರು. ಇದರಿಂದ ನರಸಾಪುರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಜೊತೆಗೆ ಸಬ್ ಇನ್ಸ್ಪೆಕ್ಟರ್ ಆಂಜಿನಪ್ಪ ಇವರ ಕಾಳಜಿಯಿಂದ, ಜನರ ಸಹಕಾರದೊಂದಿಗೆ ಇಂದಿನ ವೀಕೆಂಡ್ ಕರ್ಪ್ಯೂ ಯಶಸ್ವಿಯಾಯಿತು.