ಕಲಬುರಗಿ: ಕೊರೊನಾ ಮಹಾಮಾರಿಯ ಕಾರಣದಿಂದ ಸಂಕಷ್ಟಕ್ಕೊಳಗಾಗಿರುವ ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಈ ಬಾರಿಯ ಬಸವ ಜಯಂತಿಯನ್ನು ಅರ್ಥಪೂರ್ಣ ಮತ್ತು ಸರಳವಾಗಿ ಆಚರಿಸೋಣ ಎಂದು ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆದ ಶರಣ ಸಾಹಿತಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಸಧ್ಯ ಇಡೀ ವಿಶ್ವವೇ ಕಷ್ಟದಲ್ಲಿದೆ. ಹೀಗಾಗಿ, ಇಂದು ಬಸವ ಜಯಂತಿಯ ವಿಜೃಂಭಣೆಯ ಆಚರಣೆ ಸಾಧ್ಯವಿಲ್ಲ. ಹಾಗಾಗಿ, ಎಲ್ಲ ಬಸವಾನುಯಾಯಿಗಳು ಮೇ ೧೪ ರಂದು ತಮ್ಮ ಮನೆಗಳಲ್ಲಿಯೇ ಜಯಂತಿಯನ್ನು ಆಚರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಬಸವ ಜಯಂತಿ ಆಚರಣೆಯನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು, ಎಲ್ಲರನ್ನೂ ಸಮಾನವಾಗಿ ಕಾಣುತ್ತಾ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ, ಹಸಿದವರಿಗೆ ಊಟ ನೀಡುತ್ತಾ ಎಲ್ಲರೂ ಬಸವ ಜಯಂತಿಯನ್ನು ಆಚರಿಸೋಣ. ವಿಶ್ವಗುರು ಬಸವಾದಿ ಶರಣರ ತತ್ವವಾಗಿರುವ ದಾಸೋಃವನ್ನು ಪಾಲಿಸಬೇಕು.
ಇಂದು ಕಷ್ಟದಲ್ಲಿದ್ದವರಿಗೆ ಆಹಾರದ ಕಿಟ್ಗಳು ಸೇರಿದಂತೆ ಹಣ್ಣು-ಹಂಪಲುಗಳನ್ನು ನೀಡುವ ಮೂಲಕ ಬಸವ ಜಯಂತಿಯನ್ನು ದಯವೇ ಧರ್ಮದ ಮೂಲವಯ್ಯಾ, ದಯವಿರಬೆಕು ಸಕಲ ಪ್ರಾಣಿಗಳಲ್ಲಿ ಎನ್ನುವ ಹಾಗೇ ವಚನದ ಅರ್ಥ ಸಾರುವ ನಿಟ್ಟಿನಲ್ಲಿ ಆಚರಿಸೋಣ ಎಂದು ತೇಗಲತಿಪ್ಪಿ ಮನವಿ ಮಾಡಿಕೊಂಡಿದ್ದಾರೆ.