ಸುರಪುರ:ನಗರದ ಅಂಬೇಡ್ಕರ್ ನಗರಕ್ಕೆ ಹೊಂದಿಕೊಂಡಿರುವ ಸರ್ಕಾರಿ ಸರ್ವೇ ನಂಬರ್ ೨೩/೭ರ ಜಾಗವನ್ನು ೪ ಎಕರೆಯಷ್ಟು ಬೇರೆಯವರಿಗೆ ವರ್ಗಾವಣೆ ಮಾಡಿಕೊಟ್ಟ ನಗರಸಭೆ ಪೌರಾಯುಕ್ತರನ್ನು ವಜಾಗೊಳಿಸಬೇಕು ಎಂದು ದಲಿತಪರ ಹೊರಾಟಗಾರ ಮಲ್ಲಿಕಾರ್ಜುನ ಕ್ರಾಂತಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ನಾವು ಸರ್ವೇ ನಂಬರ್ ೨೩/೭ರ ೨೦ ಎಕರೆಯಷ್ಟು ಜಾಗವನ್ನು ೧೯೯೫ ರಿಂದಲೂ ಕಾಯ್ದುಕೊಂಡು ಬರುತ್ತಿದ್ದು,ಇದೇ ಸ್ಥಳದಲ್ಲಿ ಅಂದು ಸಂಗಾನಂದ ಬಂತೇಜಿಯವರ ಅಧ್ಯಕ್ಷತೆಯಲ್ಲಿ ಮಹಾತ್ಮ ಗೌತಮ್ ಬುದ್ಧರ ಮೂರ್ತಿಯನ್ನೂ ಪ್ರತಿಷ್ಠಾಪಿಸಲಾಗಿತ್ತು.ಅಲ್ಲದೆ ಆ ಸ್ಥಳವನ್ನು ನಾವೆಲ್ಲರು ಕಾಪಾಡಿಕೊಂಡು ಬಂದಿರುತ್ತೇವೆ,ಆದರೆ ಈಗ ಇದೇ ಸ್ಥಳದಲ್ಲಿನ ಸುಮಾರು ೪ ಎಕರೆಯಷ್ಟು ಜಾಗವನ್ನು ನಗರಸಭೆ ಪೌರಾಯುಕ್ತರು ಖಾಸಗಿ ಟ್ರಸ್ಟ್ಗೆ ವರ್ಗಾವಣೆ ಮಾಡಿಕೊಟ್ಟಿರುತ್ತಾರೆ.
ಆದ್ದರಿಂದ ಅಕ್ರಮವಾಗಿ ವರ್ಗಾವಣೆ ಮಾಡಿಕೊಟ್ಟಿರುವ ನಗರಸಭೆ ಪೌರಾಯುಕ್ತರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ೧೨ನೇ ತಾರೀಖು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ,ನಂತರ ಇದೇ ತಿಂಗಳು ೨೮ನೇ ತಾರೀಖಿನಿಂದ ನ್ಯಾಯ ಸಿಗುವವರೆಗೂ ನಗರಸಭೆ ಕಾರ್ಯಾಲಯಕ್ಕೆ ಶಾಸ್ವತ ಮುಳ್ಳು ಬೇಲಿ ಹಚ್ಚಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮತ್ತೋರ್ವ ಮುಖಂಡ ನಿವೃತ್ತ ಪ್ರೋ: ಮಾನು ಗುರಿಕಾರ ಮಾತನಾಡಿ,ಬುದ್ಧ ವಿಹಾರದ ಜಾಗಕ್ಕಾಗಿ ಮೊದಲಿನಿಂದಲೂ ಹೋರಾಟ ಮಾಡುತ್ತಾ ಬಂದಿರುವವರು ಮಲ್ಲಿಕಾರ್ಜುನ ಕ್ರಾಂತಿಯವರು,ಶರಣಪ್ಪ ದಖನಿ,ನಾನು,ಚಂದ್ರಶೇಖರ ಹಸನಾಪುರ ಸೇರಿದಂತೆ ಅನೇಕರಿದ್ದೇವೆ,ಆದರೆ ಇಂದು ಟ್ರಸ್ಟ್ ಮಾಡಿಕೊಂಡು ಅದೇ ಜಾಗದಲ್ಲಿ ಚಟುವಟಿಕೆ ನಡೆಸುತ್ತಿರುವುದರ ಬಗ್ಗೆ ನಮ್ಮ ವಿರೋಧವಿದೆ.ಅಲ್ಲದೆ ಯಾವುದೇ ಟ್ರಸ್ಟ್ಗೂ ನಮ್ಮ ವಿರೋಧವಿದೆ.ಬೇಕಾದರೆ ಭಾರತೀಯ ಬೌಧ್ಧ ಮಹಾಸಭಾದ ಹೆಸರಲ್ಲಿ ಅಲ್ಲಿ ಅಭಿವೃಧ್ಧಿ ಕಾರ್ಯಗಳನ್ನು ಮಾಡಲು ಯಾವುದೇ ಅಭ್ಯಂತರವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಮಾನಪ್ಪ ಕಟ್ಟಿಮನಿ,ಚಂದ್ರಶೇಖರ ಹಸನಾಪುರ ಮಾತನಾಡಿದರು,ಮುಖಂಡರಾದ ಮಾನಪ್ಪ ಬಿಜಾಸಪುರ,ಮಾನಪ್ಪ ಕರಡಕಲ್,ಮೂರ್ತಿ ಬೊಮ್ಮನಹಳ್ಳಿ,ಹಣಮಂತ ಬೊಂಬಾಯಿ,ಆದಪ್ಪ ಸುರಪುರಕರ್,ನಿಂಗಣ್ಣ ಗೋನಾಲ,ಶಂಕರಪ್ಪ ಶಾಖನವರ್,ವಿಶ್ವನಾಥ ಹೊಸ್ಮನಿ,ಬುದ್ಧಿವಂತ ನಾಗರಾಳ ಉಪಸ್ಥಿತರಿದ್ದರು.