ಕಲಬುರಗಿ: ನಗರ ಪ್ರದೇಶಗಳಿಗೆ ಕೆಲಸ ಅರಸಿ ಹೋಗಿದ್ದ ರಾಜ್ಯದ ಲಕ್ಷಾಂತರ ಕೂಲಿ ಕಾರ್ಮಿಕರು, ಕೊರೋನಾ ಲಾಕ್ಡೌನ್ನಿಂದಾಗಿ ತಮ್ಮ ಗ್ರಾಮಗಳಿಗೆ ಹಿಂದಿರುಗಿದ್ದಾರೆ. ಇಂತವರಿಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಜೀವನಾಧಾರವಾಗಿತ್ತು. ಅವರ ತುತ್ತಿನ ಚೀಲ ತುಂಬಿಸಲು ನರೇಗಾ ಯೋಜನೆ ಸಹಕಾರಿಯಾಗಿತ್ತು. ಆದರೆ, ರಾಜ್ಯ ಸರ್ಕಾರವು ಈ ಯೋಜನೆಗೆ ಕತ್ತರಿ ಹಾಕುವ ಮೂಲಕ, ಬಡ ಜನರ ಜೀವನಾಧಾರವನ್ನು ಕಿತ್ತುಕೊಂಡಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ನರೇಗಾ ಯೋಜನೆಯ ಮೂಲಕ ರಾಜ್ಯದಲ್ಲಿ ದಿನನಿತ್ಯ 9 ಲಕ್ಷ ಮಾನವ ದಿನಗಳ ಉದ್ಯೋಗ ಸೃಜನೆಯಾಗುತ್ತಿತ್ತು. ಅಂದರೆ, ಒಂದು ದಿನಕ್ಕೆ 9 ಲಕ್ಷ ಜನರು ತಮ್ಮ ಕೆಲಸಕ್ಕೆ ಕನಿಷ್ಠ ಕೂಲಿ ಪಡೆಯುತ್ತಿದ್ದರು. ಕೊರೋನಾ ನೆಪವೊಡ್ಡಿ ಈ ಯೋಜನೆಯನ್ನು 14 ದಿನಗಳ ಕಾಲ ತಡೆಹಿಡಿಯುವ ಮೂಲಕ ರಾಜ್ಯ ಸರ್ಕಾರವು 1.26 ಕೋಟಿ ಮಾನವ ದಿನಗಳನ್ನು ಕಿತ್ತುಕೊಂಡಿದೆ ಎಂದು ತಿಳಿಸಿದ್ದಾರೆ.
ಹಿರಿಯ ಪತ್ರಕರ್ತ ಜಯತೀರ್ಥ ಕಾಗಲಕರ್ ಕೊವಿಡ್ ಗೆ ಬಲಿ
ಮೆಟ್ರೋ, ರಿಯಲ್ ಎಸ್ಟೇಟ್, ದೆಹಲಿಯ ಪ್ರಧಾನಿ ನಿವಾಸ ನಿರ್ಮಾಣ ಕಾಮಗಾರಿಗೆ ಅಡ್ಡಿಯಾಗದ ಕೊರೋನಾ, ಗ್ರಾಮೀಣ ಜನರ ಜೀವನಾಧಾರವಾಗಿರುವ ನರೇಗಾ ಯೋಜನೆಗೆ ಹೇಗೆ ಅಡ್ಡಿಯಾಗಿದೆ ಎಂಬುದೇ ಯಕ್ಷಪ್ರಶ್ನೆ. ರಾಜ್ಯದ ಜನತೆ ತುತ್ತು ಅನ್ನಕ್ಕೂ ಪರದಾಡುತ್ತಿರುವ ಈ ಸಂದರ್ಭದಲ್ಲಿ, ಜನರಿಗೆ ಆರ್ಥಿಕ ನೆರವನ್ನೂ ನೀಡದೇ, ಅವರ ಕೈಯಲ್ಲಿದ್ದ ಕೆಲಸವನ್ನೂ ಕಿತ್ತುಕೊಳ್ಳುವ ಅಮಾನವೀಯ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿರುವುದು ನಾಚಿಕೆಗೇಡಿನ ವಿಚಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರಕ್ಕೆ ಕಿಂಚಿತ್ತಾದರೂ ಬಡವರು ಹಾಗೂ ಗ್ರಾಮೀಣ ಪ್ರದೇಶದ ಜನರ ಜೀವನದ ಕುರಿತು ಕಾಳಜಿ ಇದ್ದರೆ, ಈ ಆದೇಶವನ್ನು ಹಿಂಪಡೆದು, ಮೆಟ್ರೋ, ಪ್ರಧಾನಿ ಮೋದಿಯವರ ನೂತನ ಮನೆ ನಿರ್ಮಾಣದಲ್ಲಿ ಅನುಸರಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಅನುಸರಿಸಿ, ನರೇಗಾ ಯೋಜನೆಯನ್ನು ನಾಳೆಯಿಂದಲೇ ಪುನಃ ಪ್ರಾರಂಭಿಸಬೇಕೆಂದು ಆಗ್ರಹಿಸಿದ್ದಾರೆ.