ಬೆಂಗಳೂರು : ಕೊರೋನಾ ಸಂಕಷ್ಟ ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಜಾರಿ ಮಾಡಲಾಗಿರುವ ಲಾಕ್ ಡೌನ್ ನಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರೈತರಿಗೆ ಕೃಷಿ ಚಟುವಟಿಕೆ ಹಣವಿಲ್ಲದಂತಾಗಿದೆ.
ಸರ್ಕಾರ ಈ ಬಾರಿ ರೈತರಿಗೆ ಬೀಜ ಮತ್ತು ರಸಗೊಬ್ಬರವನ್ನು ಉಚಿತವಾಗಿ ಪೂರೈಕೆ ಮಾಡಬೇಕು ಎಂದು ಯಾದಗಿರಿ ಜಿಲ್ಲಾ ಪಿಂಜಾರ ವಿವಿದೊದ್ಧೇಶ ಸೇವಾ ಸಂಘದ ಹುಣಸಗಿ ತಾಲೂಕ ಘಟಕದ ಪ್ರಧಾನ ಕಾರ್ಯದರ್ಶಿ ಸೋಪಿಸಾಬ್ ಡಿ ಸುರಪುರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸತತವಾಗಿ ಅತಿವೃಷ್ಟಿಯಿಂದ ಬೆಳೆಗಳು ಹಾಳಾಗಿವೆ. ಜಮೀನುಗಳಲ್ಲಿ ನೀರು ನಿಂತಿದ್ದರಿಂದ ವಾಣಿಜ್ಯ ಬೆಳೆಕೂಡ ಒಣಗಲು ಪ್ರಾರಂಭಿಸಿವೆ.
ಪ್ರಮುಖ ಬೆಳೆಗಳು ಕೈಕೊಟ್ಟಿರುವುದರಿಂದ ರೈತರಿಗೆ ಆರ್ಥಿಕವಾಗಿ ಸಂಕಷ್ಟ ಎದುರಾಗಿದೆ ಸಾಕಷ್ಟು ಸಾಲಸೂಲ ಮಾಡಿ ಬಿತ್ತನೆ ಮಾಡಿದ ರೈತನಿಗೆ ಬೆಳೆ ಕೈಕೊಟ್ಟ ಹಿನ್ನೆಲೆ ರೈತರು ಸಾಲ ತೀರಿಸಲಾಗದ ಸ್ಥಿತಿಯಲ್ಲಿದ್ದಾರೆ.
ಇನ್ನಾದರೂ ರಾಜ್ಯ ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸಿ ಅವರಿಗೆ ಆರ್ಥಿಕ ತೊಂದರೆಯಾಗದಂತೆ ಹಿಂಗಾರು ಬಿತ್ತನೆಗೆ ಉಚಿತವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ನೀಡಬೇಕು.
ಇನ್ನೂ ರೈತರ ಪಂಪ್ ಸೆಟ್ ಗಳಿಗೆ ಉಚಿತವಾಗಿ ವಿದ್ಯುತ್ ಪೂರೈಸಬೇಕು ಮಳೆಯಿಂದ ಹಾನಿಗೊಳಗಾದ ರೈತರಿಗೆ ಮನೆಗಳನ್ನು ನಿರ್ಮಿಸಿ ಕೊಡಬೇಕು ಎಂದು ಕಾರ್ಯದರ್ಶಿ ಸೋಪಿಸಾಬ ಡಿ ಸುರಪುರ ಆಗ್ರಹಿಸಿದ್ದಾರೆ.