ಪುಸ್ತಕ ಓದು ಸಂವಾದ: ಮೌಢ್ಯದ ದೇವರ ವಿಜ್ಞಾನದ ಓರೆಗೆ ಹಚ್ಚಿ: ಮಾಂಗ್

0
106

ವಾಡಿ: ಕಲ್ಲು, ಕಟ್ಟಿಗೆ, ಗಾಳಿ ಮತ್ತು ಬೆಂಕಿಯಲ್ಲಿ ಹುಡುಕುವ ಮೌಢ್ಯದ ದೇವರನ್ನು ವಿಜ್ಞಾನದ ಓರೆಗೆ ಹಚ್ಚಿ ನೋಡಬೇಕು. ಆಗ ಸತ್ಯ ಅರಿವಾಗುತ್ತದೆ ಎಂದು ಬರಹಗಾರ ಡಾ.ರಾಜಶೇಖರ ಮಾಂಗ್ ಹೇಳಿದರು.

ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಪಟ್ಟಣದ ಅಂಬೇಡ್ಕರ್ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಲಾಗಿದ್ದ ಎ.ಎನ್.ಮೂರ್ತಿರಾವ ಅವರ ವೈಚಾರಿಕ ಕೃತಿ ’ದೇವರು’ ಪುಸ್ತಕ ಕುರಿತ ಓದು-ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಪ್ರಾಕೃರ್ತಿಕ ಏರುಪೇರಿನಿಂದಾದ ವಾತಾವರಣಕ್ಕೆ ಭಯಭೀತವಾದ ಜನ ದೇವರ ಕಲ್ಪನೆಯನ್ನು ಹುಟ್ಟುಹಾಕಿದರು. ಕಲ್ಲು, ಮಣ್ಣು, ಕಟ್ಟಿಗೆ, ನೀರು, ಬೆಂಕಿ, ಗಾಳಿಯಲ್ಲಿ ದೇವರನ್ನು ಕಾಣುವ ಅವೈಜ್ಞಾನಿಕ ಪದ್ಧತಿಯೇ ಸಮಾಜವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

Contact Your\'s Advertisement; 9902492681

ಪುಸ್ತಕ ಓದಿ ಸಂವಾದ ನಡೆಸಿಕೊಟ್ಟ ಪತ್ರಕರ್ತ ಸಿದ್ದರಾಜ ಮಲಕಂಡಿ, ತಾಯಿ ಪಾರ್ವತಿಯ ದೇಹದ ಮಣ್ಣಿನಿಂದ ಜನಿಸಿದ ಗಣೇಶ, ತನ್ನ ತಂದೆ ಶಿವನ ಉಗ್ರ ಉರಿಗಣ್ಣಿಗೆ ಬಲಿಯಾಗಿ ಹತನಾಗುತ್ತಾನೆ. ನಂತರ ಗಣೇಶನ ರುಂಡವಿಲ್ಲದ ಮುಂಡಕ್ಕೆ ಕತ್ತರಿಸಿದ ಆನೆಯ ಶಿರ ಜೋಡಿಸಿ ಬದುಕಿಸುತ್ತಾರೆ ಎಂಬುದು ಜನಜನಿತವಾದ ಕಥೆ. ಇದನ್ನೇ ಪುಸ್ತಕದಲ್ಲಿ ಪ್ರಶ್ನಿಸುವ ಲೇಖಕ ಮೂರ್ತಿರಾವ ಅವರು ದೇವರೆಂದು ಕರೆಯಿಸಿಕೊಳ್ಳುವ ಶಿವನಲ್ಲಿ ಕೊಲೆಗಡುಕ ಮನೋಭಾವವಿರಲು ಹೇಗೆ ಸಾಧ್ಯ? ಶಿವ ಪರಮಾತ್ಮ ತಾಳ್ಮೆಯಿಲ್ಲದ ಕೋಪಿಷ್ಟನಾಗಿದ್ದರೆ ಆತನಲ್ಲಿರುವ ಆದರ್ಶಗುಣಗಳೇನು? ಎಂದು ಪ್ರಶ್ನಿಸುತ್ತಾರೆ ಎಂದರು. ದೇವರು ಇದ್ದಿದ್ದರೆ ಸಮಾಜದಲ್ಲಿ ಖೇಡು ಮತ್ತು ಸಂಕಟಗಳಿರುತ್ತಿರಲಿಲ್ಲ. ದೇವರು ಇರುವುದಾದರೆ ಬಡತನ, ನಿರುದ್ಯೋಗ, ದ್ವೇಷ, ಅಸೂಯೆ ಕಾಡುತ್ತಿರಲಿಲ್ಲ.

ದೇವರ ಕಲ್ಪನೆಯೇ ಅವೈಜ್ಞಾನಿಕ. ಜೀವವಿಲ್ಲದ ಕಲ್ಲುಗಳಿಗೆ ಪೂಜಿಸುವ ಜಡತ್ವದ ಮನಸ್ಥಿತಿಯಿಂದ ಹೊರ ಬರಬೇಕು. ವಿಜ್ಞಾನದ ತಳಹದಿಯ ಮೇಲೆ ಆಲೋಚನಾ ಕ್ರೀಯೆ ಚಲಿಸಬೇಕು ಎಂಬುದು ದೇವರು ಪುಸ್ತಕದ ಸಾರಾಂಶ ಎಂದರು.
ಪ್ರಗತಿಪರ ಚಿಂತಕ, ಸಂಚಲನ ಸಾಹಿತ್ಯ ವೇದಿಕೆಯ ಕಾಶೀನಾಥ ಹಿಂದಿನಕೇರಿ ಮಾತನಾಡಿ, ಜೈಲಿನಲ್ಲಿ ಸಾವಿನ ದವಡೆಯಲ್ಲಿದ್ದಾಗಲೂ ಶಹೀದ್ ಭಗತ್ ಸಿಂಗ್ ಅವರು ಸಮಾಜವಾದಿ ಪುಸ್ತಕ ಓದುತ್ತಿದ್ದರು. ಅಂಬೇಡ್ಕರರು ೫೦೦೦ ಪುಸ್ತಕ ಅಧ್ಯನ ಮಾಡಿದ್ದಾರೆ. ಪುಸ್ತಕ ಓದಿನಿಂದಲೇ ಗಾಂಧೀಜಿಯವರು ಜೀವನ ಸರಳತೆ ಕಲಿತಿದ್ದಾರೆ. ಪುಸ್ತಕ ಓದುವ ಹವ್ಯಾಸ ರೂಢಿಸಕೊಳ್ಳಬೇಕು ಎಂದರು.

ಎಸಿಸಿ ಪರಿಸರ ವಿಭಾಗದ ಮುಖ್ಯಸ್ಥ ಜಿ.ರಮೇಶ ಮಾತನಾಡಿದರು. ವೇದಿಕೆ ಅಧ್ಯಕ್ಷ ಮಡಿವಾಳಪ್ಪ ಹೇರೂರ ಅಧ್ಯಕ್ಷತೆ ವಹಿಸಿದ್ದರು. ವಿಕ್ರಮ ನಿಂಬರ್ಗಾ, ವೀರಣ್ಣ ಯಾರಿ, ಚಂದ್ರು ಕರಣಿಕ, ಶ್ರವಣಕುಮಾರ ಮೌಸಲಗಿ, ದೇವಿಂದ್ರ ಕರದಳ್ಳಿ, ಸಿದ್ದಯ್ಯಶಾಸ್ತ್ರೀ ನಂದೂರಮಠ, ದಿಲೀಪಕುಮಾರ ಸಾಕರೆ, ಗುಂಡಪ್ಪ ಭಂಕೂರ ಸೇರಿದಂತೆ ನೂರಾರು ಜನ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು. ವಿಜಯಕುಮಾರ ಯಲಸತ್ತಿ ಸ್ವಾಗತಿಸಿದರು. ರವಿ ಕೋಳಕೂರ ನಿರೂಪಿಸಿದರು. ರಾಯಪ್ಪ ಕೊಟಗಾರ ವಂದಿಸಿದರು. ಇದೇ ವೇಳೆ ದೇವರು, ಧರ್ಮ ಹಾಗೂ ದೆವ್ವಗಳ ಕುರಿತು ಆರೋಗ್ಯಕರ ಸಂವಾದ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here