ಸುರಪುರ: ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಿಗೆ ಬುಧವಾರ ಶಾಸಕ ನರಸಿಂಹ ನಾಯಕ (ರಾಜುಗೌಡ) ಟ್ಯಾಬ್ಲೆಟ್ ಪಿ.ಸಿಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ರಾಜುಗೌಡ ಮಾತನಾಡಿ,ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಾನು ಎಂತಹ ಅನುಕೂಲವನ್ನಾದರು ಕಲ್ಪಿಸಿಕೊಡುವೆ.ಆದರೆ ವಿದ್ಯಾರ್ಥಿಗಳು ನಮ್ಮ ಶ್ರಮಕ್ಕೆ ಮತ್ತು ಕಲಿಸಿದ ಉಪನ್ಯಾಸಕರು ಹಾಗು ಕಾಲೇಜಿಗೆ ಕೀರ್ತಿ ತರುವ ನಿಟ್ಟಿನಲ್ಲಿ ಅಭ್ಯಾಸ ಮಾಡಿ ಏಳಿಗೆ ಕಾಣಬೇಕು ಎಂದರು.ಭವ್ಯವಾದ ಕಾಲೇಜಿನ ಕಟ್ಟಡವಿದೆ,ಉತ್ತಮವಾದ ಉಪನ್ಯಾಸಕರಿದ್ದಾರೆ,ಎಲ್ಲ ರೀತಿಯ ಅನುಕೂಲವನ್ನು ಮಾಡಿಕೊಡಲಾಗಿದೆ.
ಇದೆಲ್ಲವನ್ನು ಸದುಪಯೋ ಮಾಡಿಕೊಳ್ಳುವಂತೆ ತಿಳಿಸಿದರು.ಅಲ್ಲದೆ ಈಗ ಕೊರೊನಾ ಎಲ್ಲೆಡೆ ಹರಡಿದೆ ಅದನ್ನು ತಡೆಗಟ್ಟಲು ಎಲ್ಲರು ಲಸಿಕೆ ಪಡೆಯುವುದು ಮುಖ್ಯವಾಗಿದೆ.ಆದ್ದರಿಂದ ತಾವೆಲ್ಲರು ಲಸಿಕೆ ಹಾಕಿಸಿಕೊಳ್ಳಿ ಎಲ್ಲರ ಅನುಕೂಲಕ್ಕಾಗಿ ಲಸಿಕೆ ಹಾಕಲು ಕಾಲೇಜಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ಕಳುಹಿಸಿಕೊಡುವುದಾಗಿ ತಿಳಿಸಿದರು.ಅಲ್ಲದೆ ಕಾಲೇಜಿನ ಎರಡು ವಸತಿ ನಿಲಯಗಳ ಕಟ್ಟಡ ಕಾಮಗಾರಿಗಳು ವಿಳಂಬವಾಗುತ್ತಿರುವ ಬಗ್ಗೆ ಗಮನಕ್ಕೆ ತಂದಿದ್ದು ಶೀಘ್ರದಲ್ಲಿಯೇ ಕಾಮಗಾರಿ ಮುಗಿಸಿಕೊಡಲು ಸಂಬಂಧಿಸಿದ ಇಲಾಖೆಗೆ ತಿಳಿಸಲಾಗಿದೆ ಎಂದರು.
ನಂತರ ಕಾಲೇಜಿನ ಪ್ರಾಂಶುಪಾಲ ಶ್ರೀಕಾಂತ ಜಿ.ಕೆ ಮಾತನಾಡಿ,ಶಾಸಕ ರಾಜುಗೌಡ ಅವರು ಇಡೀ ಯಾದಗಿರಿ ಜಿಲ್ಲೆಯಲ್ಲಿಯೇ ಸರಕಾರಿ ಪಾಲಿಟೆಕ್ನಿಕ್ ಕಾಲೇಜನ್ನು ತರುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ.ಅಲ್ಲದೆ ಕಾಲೇಜಿನ ಬೇಕಾದ ಎಲ್ಲಾ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.ಆದ್ದರಿಂದ ವಿದ್ಯಾರ್ಥಿಗಳು ಅವರ ಭರವಸೆಯಂತೆ ಓದಿ ಉನ್ನತಿ ಸಾಧಿಸುವಂತೆ ಕಿವಿಮಾತು ಹೇಳಿದರು.ಅಲ್ಲದೆ ಕೆಕೆಆರ್ಡಿಬಿ ವತಿಯಿಂದ ಬಂದಿರುವ ೫೦ ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಿಸಲಾದ ೬೭ ಕಂಪ್ಯೂಟರ್ಗಳುಳ್ಳ ಲ್ಯಾಬ್ ಉದ್ಘಾಟಿಸಿಕೊಟ್ಟಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ನಂತರ ಕಾಲೇಜಿನ ಅನೇಕ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಟ್ಯಾಬ್ಲೇಟ್ ಪಿಸಿಗಳನ್ನು ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ಶಾಸಕರಿಗೆ ಕಾಲೇಜಿನ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ರಾಜಾ ಹನುಮಪ್ಪ ನಾಯಕ (ತಾತಾ) ಪಿಐ ಎಸ್.ಎಮ್.ಪಾಟೀಲ್ ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್ ನಗರಸಭೆ ಸದಸ್ಯ ನರಸಿಂಹಕಾಂತ ಪಂಚಮಗಿರಿ ಮುಖಂಡರಾದ ವೇಣುಗೋಪಾಲ ಜೇವರ್ಗಿ ಲೋಕೊಪಯೋಗಿ ಇಲಾಖೆ ಎಇಇ ಎಸ್.ಜಿ.ಪಾಟೀಲ್ ರಾಮನಗೌಡ ಪಾಟೀಲ್ ಶಂಕರ ನಾಯಕ ಸೇರಿದಂತೆ ಅನೇಕರಿದ್ದರು.