ಶಹಾಬಾದ: ತಾಲೂಕಿನ ಹೊನಗುಂಟಾ ಗ್ರಾಪಂಯ ವ್ಯಾಪ್ತಿಯ ವಾರ್ಡ ನಂ.೨ ರಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಬೇಕೆಂದು ಮಾಜಿ ಗ್ರಾಪಂ ಸದಸ್ಯ ಶಿವಕುಮಾರ ಬುರ್ಲಿ ಆಗ್ರಹಿಸಿದ್ದಾರೆ.
ಗ್ರಾಮದ ವಾರ್ಡ ನಂ.೨ ಮತ್ತು ೩ರಲ್ಲಿ ವಾಸಿಸುವ ಜನರು ನಿತ್ಯ ಜನರಿಗೆ ಸರಿಯಾದ ರಸ್ತೆಯಿಲ್ಲದ ಕಾರಣ ತೊಂದರೆಯಾಗುತ್ತಿದೆ. ಅಲ್ಲದೇ ಇದೇ ಕಚ್ಚಾ ರಸ್ತೆಯ ಕೆಳಗಡೆ ಹಳೆಯದಾದ ಚರಂಡಿಯಲ್ಲಿ ಹೂಳು ತುಂಬಿಕೊಂಡು ಚರಂಡಿ ನೀರು ರಸ್ತೆಯ ಮೇಲೆ ಬರುತ್ತಿದೆ. ಚರಂಡಿ ನೀರಿನಲ್ಲೇ ದಾಟಿಕೊಂಡು ಹೋಗಬೇಕಾದ ಪರಿಸ್ಥಿತಿ ಇಲ್ಲಿದೆ. ನಿತ್ಯ ಹಿರಿಯರು.
ಮಕ್ಕಳು ಈ ರಸ್ತೆಯ ಮೂಲಕ ಹೋಗುವಾಗ ಕಾಲು ಜಾರಿ ಬಿದ್ದ ಉದಾಹರಣೆಗಳಿವೆ.ಸುತ್ತಮುತ್ತಲಿನ ಮನೆಗಳಲ್ಲಿ ಬಳಸಿದ ಕೊಳಚೆ ನೀರು ಇದೇ ರಸ್ತೆಯಲ್ಲಿ ಬಂದು ಸಂಗ್ರಹವಾಗಿ ಕಟ್ಟ ವಾಸನೆ ಬೀರುತ್ತಿದೆ.ಇದರಿಂದ ಗ್ರಾಮಸ್ಥರಿಗೆ ಎಲ್ಲಿಲ್ಲದ ತೊಂದರೆಯಾಗುತ್ತಿದೆ.ಈ ಬಗ್ಗೆ ಗ್ರಾಪಂ ಅಧ್ಯಕ್ಷರಿಗೆ ತಿಳಿಸಿದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಆದ್ದರಿಂದ ಕೂಡಲೇ ಗ್ರಾಪಂ ಪಿಡಿಓ ಅವರು ರಸ್ತೆ ಹಾಘೂ ಚರಂಡಿ ನಿರ್ಮಾಣ ಮಾಡಿಕೊಡುವುದರ ಮೂಲಕ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಬೇಕು.ಇಲ್ಲದಿದ್ದರೇ ವಾರದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.