ಕಲಬುರಗಿ: ಸಿದ್ದಲಿಂಗೇಶ್ವರ ಪ್ರಕಾಶನದ ಪರಿಶೀಲನಾ ಸಮಿತಿಯ ಸಭೆ ಇಂದು ಸಿದ್ದಲಿಂಗೇಶ್ವರ ಬುಕ್ ಮಾಲನಲ್ಲಿ ಜರುಗಿತು. ಈ ಸಭೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಕಟಗೊಳ್ಳುವ ಪುಸ್ತಕಗಳ ಆಯ್ಕೆ ಕುರಿತು ಚರ್ಚಿಸಲಾಯಿತು. ಪ್ರಕಟಣೆಗಾಗಿ 55ಕ್ಕೂ ಹೆಚ್ಚು ಹಸ್ತಪ್ರತಿಗಳು ಪ್ರಕಟಣೆಗಾಗಿ ಬಂದಿದ್ದು, ಅದರಲ್ಲಿ ಉತ್ತಮವಾದ ಕೃತಿಗಳನ್ನು ಪ್ರಕಟಿಸಲು ನಿರ್ಧರಿಸಲಾಯಿತು.
ಸಭೆಗೆ ಮುಂಚೆ ಕನ್ನಡನಾಡಿನ ಸಾಹಿತ್ಯಕ್ಷೇತ್ರದಲ್ಲಿ ಹೆಸರು ಮಾಡಿ ನಮ್ಮನ್ನಗಲಿದ ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ ಪ್ರೊ. ಎಚ್. ಎಮ್. ಮಹೇಶ್ವರಯ್ಯ, ಡಾ.ವಸಂತ ಕುಷ್ಟಗಿ, ಜರಗನಹಳ್ಳಿ ಶಿವಶಂಕರ್, ಶಿವಶಾಂತ ರೆಡ್ಡಿ ಮನೋಳ್ಳಿ, ಶೋಭಾ ರಂಜೋಳಕರ್ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಸಿದ್ದಲಿಂಗೇಶ್ವರ ಪ್ರಕಾಶನದ ಮಾಲೀಕರಾದ ಬಸವರಾಜ ಕೊನೇಕ್ ಅವರು ಮಾತನಾಡಿ ಕೊರೊನಾ ಸಂಕಷ್ಟ ಸಮಯದಲ್ಲಿ ಈಗಾಗಲೇ ಸಾಕಷ್ಟು ಜನ ನಾಡಿನ ವಿದ್ವಾಂಸರನ್ನು ಕಳೆದುಕೊಂಡು ಸಾಹಿತ್ಯ ಲೋಕ ಬಡವಾಗಿದೆ. ಅಲ್ಲದೆ ಇತ್ತೀಚಿಗೆ ನಮ್ಮ ಸಲಹಾ ಸಮಿತಿಯ ಸದಸ್ಯರಾದ ಪ್ರೊ. ವಸಂತ ಕುಷ್ಟಗಿ ಅವರ ನಿಧನ ನಮ್ಮ ಸಂಸ್ಥೆಗೆ ತುಂಬಲಾರದ ನಷ್ಟ ತಂದಿದ್ದು, ಅವರ ಸ್ಮರಣಾರ್ಥವಾಗಿ ಸದ್ಯದಲ್ಲೇ ಪ್ರಕಾಶನ ವತಿಯಿಂದ ಪುಸ್ತಕವನ್ನು ಪ್ರಕಟಿಸುವುದರ ಮೂಲಕ ಅವರಿಗೆ ನುಡಿ ನಮನ ಸಲ್ಲಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಸಲಹಾ ಸಮಿತಿಯ ಸದಸ್ಯರಾದ ಡಾ. ಸ್ವಾಮಿರಾವ ಕುಲಕರ್ಣಿ, ಡಾ. ಶಿವರಾಜ ಪಾಟೀಲ, ಡಾ. ಮೀನಾಕ್ಷಿ ಬಾಳಿ ಡಾ. ಚಿ. ಸಿ. ನಿಂಗಣ್ಣ ಹಾಗೂ ನೂತನವಾಗಿ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾದ ಡಾ. ಶರಣಬಸಪ್ಪ ವಡ್ಡನಕೇರಿ ಉಪಸ್ಥಿತರಿದ್ದರು.