ತೆರಿಗೆ ವಸೂಲಾತಿ ಬಾಕಿಯಿದ್ದಲ್ಲಿ ಅಧಿಕಾರಿಗಳನ್ನೆ ಹೊಣೆಗಾರನ್ನಾಗಿ ಮಾಡಲಾಗುವುದು:ಸಚಿವ ಯು.ಟಿ.ಖಾದರ

0
72

ಕಲಬುರಗಿ: ರಾಜ್ಯಾದ್ಯಂತ ನಗರ-ಸ್ಥಳೀಯ ಸಂಸ್ಥೆಗಳಲ್ಲಿ ಶೇ.೧೫ ರಿಂದ ೨೦ರಷ್ಟು ತೆರಿಗೆ ಬಾಕಿ ಇದ್ದು, ನಿಗಧಿತ ಅವಧಿಯಲ್ಲಿ ತೆರಿಗೆ ವಸೂಲಾತಿಗೆ ಕ್ರಮ ವಹಿಸದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರನ್ನಾಗಿ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ ತಿಳಿಸಿದರು.

ಮಂಗಳವಾರ ಸಚಿವರು ಕಲಬುರಗಿ ನಗರ ಪ್ರದಕ್ಷಿಣೆ ಮುನ್ನ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಈ ಸಂಬಂಧ ಕೆಳ ಹಂತದ ಸಿಬ್ಬಂದಿಗಳಿಗೆ ಹೆಚ್ಚಿನ ಕಾಳಜಿ ವಹಿಸಿ ತೆರಿಗೆ ವಸೂಲಾತಿಗೆ ಅಧಿಕಾರಿಗಳು ಸೂಕ್ತ ನಿರ್ದೇಶನ ನೀಡಬೇಕು ಎಂದರು.

Contact Your\'s Advertisement; 9902492681

ಇತ್ತೀಚೆಗೆ ವಾಡಿಕೆಯಂತೆ ಮಳೆಯಾಗದ ಕಾರಣ ನಗರ-ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ತೊಂದರೆ ಅನುಭವಿಸಲಾಗುತ್ತಿದೆ. ಇದನ್ನು ತಪ್ಪಿಸಲು ಪಟ್ಟಣ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಿಸಲು ಇಲಾಖೆಯಿಂದ ಯೋಜನೆ ಹಾಕಿಕೊಳ್ಳಲಾಗುವುದು. ಕುಡಿಯುವ ನೀರು ಪೂರೈಕೆ ಕುರಿತಂತೆ ಸ್ಥಳೀಯ ಸಂಸ್ಥೆಗಳ ಜೊತೆ ಜಲಮಂಡಳಿಯು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಲಾಗುವುದು ಎಂದರು.

ಮೈತ್ರಿ ಸರ್ಕಾರ ಸುಭದ್ರ:- ಶಾಸಕರ ರಾಜಿನಾಮೆ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಯು.ಟಿ.ಖಾದರ ಅವರು ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಸುಭದ್ರವಾಗಿದ್ದು, ಐದು ವರ್ಷ ಆಡಳಿತ ನಡೆಸಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟನೆ ನೀಡಿದರು.

ಐ.ಎಂ.ಎ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ತನಿಖೆಗೆ ಎಸ್.ಐ.ಟಿ. ತಂಡ ರಚಿಸಿದ್ದು, ತನಿಖೆ ಪ್ರಗತಿಯಲ್ಲಿದೆ. ರಾಜ್ಯದ ಪೊಲೀಸ್ ಅಧಿಕಾರಿಗಳ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಪಾರದರ್ಶಕವಾಗಿ ತನಿಖೆ ಕೈಗೊಂಡು ಸತ್ಯಾಸತ್ಯತೆ ಬಯಲಿಗೆ ಬರಲಿದೆ. ಹೀಗಾಗಿ ಪ್ರಕರಣ ಸಿ.ಬಿ.ಐ.ಗೆ ವಹಿಸಬೇಕೆಂಬ ವಿರೋಧ ಪಕ್ಷದವರ ಬೇಡಿಕೆ ಅಪ್ರಸ್ತುತ ಎಂದರು.

೧೦.೫೦ ಕೋಟಿ ರೂ. ತೆರಿಗೆ ಸಂಗ್ರಹ:- ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ೬ ತಿಂಗಳಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ ಪರಿಣಾಮ ೧೦.೫೦ ಕೋಟಿ ರೂ. ತೆರಿಗೆಯನ್ನು ಸಂಗ್ರಹಿಸಲಾಗಿದೆ. ಇದು ಪಾಲಿಕೆ ಇತಿಹಾಸದಲ್ಲಿಯೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಕರ ವಸೂಲಾತಿ ಇದಾಗಿದೆ ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ ಕರ ವಸೂಲಾತಿ ಸಂಗ್ರಹಣಕ್ಕೆ ಇಡಿಸಿ ಸ್ವೈಪ್ ಮಶೀನ್ ಸಾಫ್ಟವೇರ್ ಅಭಿವೃದ್ಧಿಪಡಿಸಲಾಗಿದ್ದು. ಕೆಲವು ವಾರ್ಡುಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದೆ. ಮುಂದಿನ ೨ ವಾರಗಳಲ್ಲಿ ಎಲ್ಲಾ ವಾರ್ಡುಗಳಲ್ಲಿ ಪಾಲಿಕೆಯ ಸಿಬ್ಬಂದಿಗಳು ಇಡಿಸಿ ಮಶೀನ್ ಮೂಲಕ ಮನೆ-ಮನೆಗೆ ತೆರಳಿ ಸ್ಥಳದಲ್ಲಿಯೆ ಕರ ವಸೂಲಾತಿ ಮಾಡಲಿದ್ದಾರೆ ಎಂದರು.

ಕಲಬುರಗಿ ನಗರದಲಿ ಹಿಂದೆಲ್ಲ ಮಳೆ ಬಂದರೆ ಸಂಚಾರ ಅಸ್ಥವ್ಯಸ್ಥವಾಗುವುದ್ದನ್ನು ಕಂಡಿದ್ದೇವೆ. ಇನ್ನು ಮುಂದೆ ಹೀಗಾಗದಂತೆ ಪಾಲಿಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿಲಾಗಿದೆ. ಪರಿಣಾಮ ಇತ್ತೀಚೆಗೆ ಮಳೆ ಬಿದ್ದ ತಕ್ಷಣ ಪಾಲಿಕೆಯ ಸ್ವಚ್ಛತಾ ತಂಡ ಕೂಡಲೆ ಒಳಚರಂಡಿ ಸ್ವಚ್ಛತೆಗೆ ಅಣಿಯಾಗಿತ್ತು. ಇದರಿಂದ ಚರಂಡಿಯಲ್ಲಿ ನೀರು ಸರಾಗವಾಗಿ ಸಾಗಿ ಸಾರ್ವಜನಿಕರ ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕಲಬುರಗಿ ನಗರದಲ್ಲಿನ ಕುಡಿಯುವ ನೀರಿಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ೩೦ ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.

ಈ ಸಂದರ್ಭದಲ್ಲಿ ಕಲಬುರಗಿ ದಕ್ಷಿಣ ಶಾಸಕಿ ಖನೀಜ್ ಫಾತಿಮಾ, ವಿಧಾನ ಪರಿಷತ್ತಿನ ಶಾಸಕ ತಿಪ್ಪಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಜಗದೇವ ಗುತ್ತೇದಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here