ಕಲಬುರಗಿ: ಸಧೃಢ ಸಮಾಜ ನಿರ್ಮಾಣಕ್ಕೆ ಸಂಘಟನೆಗಳ ಪಾತ್ರ ಬಹುಮುಖ್ಯವಾಗಿದ್ದು ಆಯಾ ಸಮುದಾಯಗಳು ಮತ್ತು ಸಮಾಜ ಗಟ್ಟಿಗೊಳ್ಳಲು ಹಾಗೂ ಸರ್ಕಾರದ ಸೌಲಭ್ಯ ಪಡೆಯಲು ಸಂಘಟನೆಗಳು ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಶಿವುಸ್ವಾಮಿ ಅಭಿಪ್ರಾಯ ಪಟ್ಟರು.
ಕಲಬುರಗಿ ಜಿಲ್ಲಾ ವೀರಶೈವ ಲಿಂಗಾಯತ ಜಂಗಮ ಸಮಿತಿ ವತಿಯಿಂದ ಜ್ಞಾನಜ್ಯೋತಿ ಕರಿಯರ್ ಅಕಾಡೆಮಿ ಸಭಾಂಗಣದಲ್ಲಿ ನೂತನವಾಗಿ ಅಖಿಲ ಭಾರತ ವೀರಶೈವ ಮಹಾಸಭೆಯ ಕಾಳಗಿ ತಾಲೂಕಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ ಅಣವೀರಯ್ಯ ಪ್ಯಾಟಿಮನಿ ಇವರ ಸತ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಎಲ್ಲಾ ಸಮುದಾಯಗಳಲ್ಲಿ ಬಡವರಿದ್ದಾರೆ, ಅನುಕೂಲಸ್ಥರು ಹಾಗೂ ಆರ್ಥಿಕ ಸ್ಥಿತಿವಂತರು ತಮ್ಮ ತಮ್ಮ ಸಮುದಾಯದ ಕಡೆ ಗಮನಹರಿಸಿ ಸಹಾಯ ಮಾಡುವುದು ಇಂದು ಅಗತ್ಯವಾಗಿದ್ದು ವಿಶೇಷವಾಗಿ ಉದ್ಯೋಗ ಸೃಷ್ಟಿ ಮಾಡುವುದು, ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲ ಮಾಡಿಕೊಡುವಂತೆ ಅವರು ಕರೆ ನೀಡಿದರು.
ಅಖಿಲ ಭಾರತ ವೀರಶೈವ ಮಹಾಸಭೆಗೆ ಶತಮಾನಗಳ ಇತಿಹಾಸವಿದ್ದು ಮಹಾಸಭೆಯಿಂದ ವೀರಶೈವ ಲಿಂಗಾಯತ ಸಮುದಾಯದಿಂದ ಒಳಪಂಗಡಗಳನ್ನು ಮರೆತು ಅಖಂಡತೆ ಮತ್ತು ಸಮಾಜೋಪಯೋಗಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಯುವಕರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗಿದುದ, ಯುವಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನತ್ತ ಕಾರ್ಯಯೋಜನೆ ರೂಪಿಸಿ ವೃತ್ತಿ ಕೌಶಲ್ಯ ಹಾಗೂ ಸ್ವಯಂ ಉದ್ಯೋಗದಡೆ ಯುವ ಸಮೂಹ ಗಮನಹರಿಸಬೇಕೆಂದು ಸಾಹಿತಿ ಬಿ.ಹೆಚ್.ನಿರಗುಡಿ ಪ್ರತಿಪಾದಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ದೇಶದಲ್ಲಿ ಯುವ ಶಕ್ತಿಯನ್ನು ಬಳಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದ್ದು, ಹಳ್ಳಿಗಳ ಸರ್ವತೋಮುಖ ಬೆಳವಣಿಗೆಗೆ ಸರ್ಕಾರದೊಟ್ಟಿಗೆ ಯುವಜನತೆ ಕೈಗೂಡಿಸಿದರೆ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡು ಅರ್ಹ ಫಲಾನುಭವಿಗಳಿಗೆ ತಲುಪುತ್ತವೆ ಎಂದು ನುಡಿದರು.
ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಕಾರ್ಯಕಾರಿ ಸಮಿತಿಯ ಸದಸ್ಯರ ನಾಗಲಿಂಗಯ್ಯ ಮಠಪತಿ, ಕಾಳಗಿ ತಾಲೂಕಾ ವೀರಶೈವ ಸಮಾಜದ ಧುರೀಣರಾದ ಬಸವರಾಜ ಕೋಲಕುಂದಿ ಕೋಡ್ಲಿ, ವೀರಶೈವ ಲಿಂಗಾಯತ ಜಂಗಮ ಸಮಿತಿಯ ಗೌರವ ಅಧ್ಯಕ್ಷರಾದ ಸಿದ್ರಾಮಯ್ಯ ಪುರಾಣಿಕ ಅವರು ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ಎಸ್. ಹಿರೇಮಠ, ಉಪಾಧ್ಯಕ್ಷರಾದ ರುದ್ರಯ್ಯ ಹಿರೇಮಠ ಕೊಡಲಹಂಗರಗಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.