ಕಲಬುರಗಿ: ಮಾನಸಿಕ ತೊಳಲಾಟದ ಬದುಕಿನಲ್ಲಿ ನಮ್ಮ ಮನ ಪರಿವರ್ತನೆಗೆ ಕಾವ್ಯದ ಶಕ್ತಿ ಹೊರ ಹೊಮ್ಮಲಿ ಎಂದು ಸಾಹಿತಿ ಧರ್ಮಣ್ಣ ಧನ್ನಿ ಅವರು ಅಭಿಪ್ರಾಯ ಪಟ್ಟರು.
ನಗರದ ಹಳೆಯ ಜೇವರ್ಗಿ ರಸ್ತೆಯ ಸಾಗರ ಸಂಗೀತ ಸಂಸ್ಥೆಯಲ್ಲಿ ಗೆಳೆಯರ ಬಳಗ ಆಯೋಜಿಸಿದ ವಿಶೇಷ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತ್ಯ ಮತ್ತು ಸಂಗೀತ ಸೇರಿಕೊಂಡರೆ ಜನಮಾನಸಕ್ಕೆ ತಲುಪಬಲ್ಲದು. ಕವಿಯ ಭಾವನೆಗಳು ಕಾವ್ಯ ರೂಪದಲ್ಲಿ ಅಭಿವ್ಯಕ್ತಗೊಂಡಾಗ ಸಂಗೀತ ಮೇಳೈಸಬೇಕು. ಅಂದಾಗಲೇ ಕಾವ್ಯದ ರಸದೌತಣ ಅಭಿವ್ಯಕ್ತತೆಯಲ್ಲಿ ಕಾಣಬಹುದು. ನಮ್ಮ ಸುತ್ತಲಿನ ಸಮಸ್ಯೆ, ಅನುಭವಿಸಿದ ನೋವು ಯಾತನೆಗಳಿಗೆ ಕವಿ ಮನಗಳು ಸ್ಪಂದಿಸಬೇಕಾಗಿದೆ ಎಂದರು.
ಲೇಖಕ ಎಸ್, ಎಂ ಪಟ್ಟಣಕರ ಮಾತನಾಡಿ, ಉಲ್ಲಾಸದ ಮನಸ್ಸು ನಮ್ಮದಾಗಲು ಕಾವ್ಯವನ್ನು ಆಸ್ವಾದಿಸಬೇಕು. ಜನರಿಗೆ ಬೇಕಾದ ಸಾಹಿತ್ಯವನ್ನು ಕಟ್ಟಿ ಕೊಡಬೇಕಾಗಿದೆ. ಇಂದು ಕಾವ್ಯದ ಸ್ವರೂಪ ಅರಿಯಲು ಹಿರಿಯರ ಕವನಗಳ ಅಧ್ಯಯನ ಮಾಡವಂತೆ ಯುವಕರಿಗೆ ಸಲಹೆ ನೀಡಿದರು.
ಜನಪದ ಕಲಾವಿದ ದೇವೇಂದ್ರಪ್ಪ ಚಿಂಚನಸೂರ ಅವರು ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಗೀ ಗೀ ಪದ ಹಾಡಿದರು. ಸಂಸ್ಥೆಯ ಮುಖ್ಯಸ್ಥ ವೆಂಕಟೇಶ ದಂಡಳೂಕರ, ಕಲಾವಿದ ಸಿದ್ದಾರ್ಥ ಚಿಮ್ಮಾ ಇದ್ಲಾಯಿ, ಸಂತೋಷ ಸಜ್ಜನ ಭಾಗವಹಿಸಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಎಂ ಎನ್ ಸುಗಂಧಿ, ರೇಣುಕಾ ಎನ್ ಶ್ರೀಕಾಂತ, ಕವಿತಾ ಕಾವಳೆ, ಸುನೀತಾ ಮಾಳಗೆ, ಸುಧೀರ ಅನೂರಕರ, ಅಂಬಾರಾಯ ಕೆರಮಗಿ, ಸಾವಿತ್ರಿ ಉದಯಕರ ಅವರು ಕವನ ವಾಚಿಸಿದರು. ಶಿವಶಂಕರ ಬಿಳಾಲಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಹೊಸಮನಿ ಪ್ರಾರ್ಥನೆ ಗೀತೆ ಹಾಡಿದರು. ಜೈ ಭೀಮ ನಿರೂಪಿಸಿ ವಂದಿಸಿದರು.