ಅಪಘಾತ: ಚಿಕಿತ್ಸೆ ಫಲಕಾರಿಯಾಗದೇ ನಂದಿ ಗೋಶಾಲೆಯಲ್ಲಿ ದಯಾಮರಣ

0
17

ಕಲಬರಗಿ: ಕಳೆದ ನಾಲ್ಕು ವಾರಗಳ ಹಿಂದೆ ಅಪಘಾತವೊಂದರಲ್ಲಿ ಮಾರಣಾಂತಿಕ ಗಾಯಗಳನ್ನು ಅನುಭವಿಸಿದ್ದ ನೆರೆಯ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲ್ಲೂಕಿನ ನಾಗಣಸೂರಿನ ನಾಲ್ಕು ವರ್ಷದ ಹೋರಿಯು ಜೀವನ್ಮರಣದಲ್ಲಿ ನರಳುತ್ತಿದ್ದು, ಆ ಹೋರಿಯ ನೋವು ನೋಡಲಾಗದೇ ಕುಟುಂಬಸ್ಥರು ದಯಾಮರಣಕ್ಕೆ ಕೋರಿದ್ದನ್ನು ಮನ್ನಿಸಿ ಮಂಗಳವಾರ ನಗರದ ಹೊರವಲಯದಲ್ಲಿನ ನಂದಿ ಎನಿಮಲ್ ವೆಲ್‌ಫೇರ್ ಸೊಸೈಟಿ ಆಫ್ ಗುಲಬರ್ಗಾ ಸಂಸ್ಥೆಯ ಗೋಶಾಲೆಯಲ್ಲಿಯೇ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆಯನ್ನು ನೆರವೇರಿಸಿದರು.

ನಾಗಣಸೂರಿನ ಬೊಮ್ಮಲಿಂಗೇಶ್ವರ್ ಮಠದ ಸಿದ್ದಲಿಂಗ ವಿಜಯಕುಮಾರ್ ಹಿರೇಮಠ್ ಅವರು ಪೂಜಾ ವಿಧಿಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಹೋರಿಯ ವಾರಸುದಾರರಾದ ಗಜಾನಂದ್ ತಂದೆ ಪೀರಪ್ಪ ಪ್ರಚಂಡೆ ಹಾಗೂ ಅವರ ಅವಿಭಕ್ತ ಕುಟುಂಬದ ಸದಸ್ಯರು, ಮತ್ತು ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ. ದೇವಿಂದ್ರಪ್ಪ ಬಿರೆದಾರ್ (ವಿಸ್ತರಣಾ ಹಾಗೂ ಸಂಚಾರಿ) ಉಪಸ್ಥಿತರಿದ್ದರು.

Contact Your\'s Advertisement; 9902492681

ಕಳೆದ ನಾಲ್ಕು ವಾರಗಳ ಹಿಂದೆ ನಾಗಣಸೂರಿನ ನಾಲ್ಕು ವರ್ಷದ ಕರಿಹೋರಿ ಅಪಾಘತಕ್ಕೀಡಾಗಿ ಎರಡೂ ಮುಂಗಾಲುಗಳು ಸಂಪೂರ್ಣ ಮುರಿದು ಹೋಗಿದ್ದವು. ಮೊಳಕಾಲುಗಳು ಸಂಪೂರ್ಣ ಪುಡಿಪುಡಿಯಾಗಿದ್ದು, ಸದರಿ  ಆಸ್ಪತ್ರೆಯ ಹಾಗೂ  ಪಶು ಸಂಗೋಪನಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ. ದೇವಿಂದ್ರಪ್ಪ ಬಿರೆದಾರ್ (ವಿಸ್ತರಣಾ ಹಾಗೂ ಸಂಚಾರಿ), ಎಪಿಎಂಸಿ ಪಶು ಆಸ್ಪತ್ರೆ ಹಿರಿಯ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಪ್ರಲ್ಹಾದ್ ಬುದೂರು ಅವರ ಜಂಟಿ ಚಿಕಿತ್ಸೆಯೊಂದಿಗೆ ೨೬ ದಿನದ ಚಿಕಿತ್ಸೆ ಫಲಕಾರಿಯಾಗದೇ ದಿನೇ ದಿನೇ ಆರೋಗ್ಯ ಕ್ಷೀಣತೆಗೆ ಒಳಗಾಗುತ್ತಿರುವುದರಿಂದ ಮತ್ತು ಎಷ್ಟೇ ಚಿಕಿತ್ಸೆ ನೀಡಿದರೂ ಸಹ, ನಿತ್ಯ ಆರೋಗ್ಯ ತೊಂದರೆ ಅನುಭವಿಸುತ್ತಿದ್ದು, ಈ ಎಲ್ಲದರ ಹಿನ್ನೆಲೆಯಲ್ಲಿ ಸದರಿ ಹೋರಿಗೆ ದಯಾಮರಣ ಸೂಕ್ತ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ನಿರ್ಧರಿಸಿದರು.

ಕುಟುಂಬಸ್ಥರ ಕೋರಿಕೆಯ ಮೇರೆಗೆ ಮುಖ್ಯ ಪಶು ವೈದ್ಯಾಧಿಕಾರಿ ಡಾ. ದೇವಿಂದ್ರಪ್ಪ ಬಿರೆದಾರ್ ಅವರು ದಯಾಮರಣಕ್ಕೆ ಬೇಕಾಗುವ ಎಲ್ಲ ರಸಾಯಣವನ್ನು ಸಿದ್ಧಪಡಿಸಿದರು. ಗೋಶಾಲೆಯ ಕಾರ್ಯದರ್ಶಿಗಳೂ ಆದ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯ ಹುಣಚಿರಾಯ್ (ಕೇಶವ್) ಮೋಟಗಿ ಹಾಗೂ ಗೋಶಾಲೆಯ ಸಿಬ್ಬಂದಿಗಳು ದಯಾಮರಣ ಯಶಸ್ವಿಯಾಗಿ ಪೂರೈಸುವಲ್ಲಿ ಸಹಕರಿಸಿದರು.

ದಯಾಮರಣ ಪ್ರಕ್ರಿಯೆ ಆರಂಭವಾಗುವ ಮೊದಲೇ ಅಪಘಾತಕ್ಕೀಡಾದ ಕರಿಹೋರಿ ಕಳೆದ ಒಂದು ದಿನದಿಂದ ಮೇವು ತಿನ್ನದೇ ನೀರು ಕುಡಿಯದೇ ನಿರಾಹಾರಿಯಾಗಿತ್ತು ಹಾಗೂ ನಿತ್ರಾಣವಾಗಿತ್ತು. ಅಲ್ಲದೇ ಗೋಮೂತ್ರಿಯಲ್ಲಿಯೇ ರಕ್ತಸ್ರಾವವಾಗುತ್ತಿತ್ತು. ಹೀಗಾಗಿ ಅದರ ಕಷ್ಟ ಆ ಸಂದರ್ಭದಲ್ಲಿಯೂ ಆಗುತ್ತಿರುವುದನ್ನು ನೋಡಿದ ಕುಟುಂಬಸ್ಥರು ಕಣ್ಣೀರಿಟ್ಟರು. ಅಪಘಾತಕ್ಕೀಡಾದ ಹೋರಿ ಇನ್ನು ಉಳಿಯದು. ಅದನ್ನು ಕಸಾಯಿಖಾನೆಗೆ ಕೊಟ್ಟು ಬಿಡಿ ಎಂದು ಕೆಲವರು ಹೇಳಿದರು. ಆದಾಗ್ಯೂ, ಕುಟುಂಬಸ್ಥರು ಅದಕ್ಕೆ ಸುತಾರಾಂ ಒಪ್ಪಲಿಲ್ಲ. ಅದನ್ನು ಉಳಿಸಲು ಸಾಕಷ್ಟು ಯತ್ನಿಸಿದರು. ಈ ಸಂದರ್ಭದಲ್ಲಿ ನಾಗಣಸೂರಿನ ಶ್ರೀಗಳು ಬೆಂಗಳೂರಿನಿಂದಲೇ ಆ ಹೋರಿಗೆ ಸೂಕ್ತ ಚಿಕಿತ್ಸೆ ನೀಡಲು ಅಪ್ಪಣೆ ಕೊಡಿಸಿದರು. ಅದರಂತೆ ಆ ಹೋರಿಯನ್ನು ನಂದಿ ಗೋಶಾಲೆಗೆ ಕರೆತರಲಾಗಿತ್ತು.

ನಿರಂತರವಾಗಿ ಚಿಕಿತ್ಸೆ ನೀಡಿದರೂ ಸಹ ಹೋರಿಯ ಸ್ಥಿತಿ ಕೊನೆಯ ಹಂತಕ್ಕೆ ಬಂದು ನಿಂತಿತ್ತು. ಆದಾಗ್ಯೂ, ಅದನ್ನು ಉಳಿಸಲು ಕೊನೆಯ ಯತ್ನವನ್ನು ಮಾಡಿದರೂ ಸಹ ಅದು ಸಾಧ್ಯವಾಗಲಿಲ್ಲ. ಹೋರಿಯ ಒದ್ದಾಟ ಹಾಗೂ ನಿರಾಹಾರಿಯಾಗಿದ್ದರಿಂದ ಕುಟುಂಬಸ್ಥರು ದಯಾಮರಣಕ್ಕೆ ಪಶು ವೈದ್ಯರಿಗೆ ಕೋರಿಕೆ ಸಲ್ಲಿಸಿ, ಆ ಕಾರ್ಯವನ್ನು ನೆರವೇರಿಸಿದರು.

ಅವಿಭಕ್ತ ಕುಟುಂಬ: ದಯಾಮರಣಕ್ಕೆ ಒಳಗಾದ ಕರಿಹೋರಿಯ ವಾರಸುದಾರ ಗಜಾನಂದ್ ತಂದೆ ಪೀರಪ್ಪ ಪ್ರಚಂಡೆ ಅವರ ಕುಟುಂಬವು ಅವಿಭಕ್ತ ಕುಟುಂಬವಾಗಿದ್ದು, ನಾಲ್ವರು ಸಹೋದರರ ಅವಿಭಕ್ತ ಕುಟುಂಬವಾಗಿ ೩೦ ಸದಸ್ಯರನ್ನು ಒಳಗೊಂಡು ಕೃಷಿ ಚಟುವಟಿಕೆಯನ್ನು ಹೊಂದಿದೆ.

ಪ್ರಚಂಡೆ ಕುಟುಂಬದ ನಿಂಗಪ್ಪ, ಚಂದಪ್ಪ, ಪೀರಪ್ಪ ಹಾಗೂ ಬಸವಂತಪ್ಪ ಅವರೂ ಸೇರಿ ನಾಲ್ವರು ಸಹೋದರರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ೬೦ ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದು, ಅಪಘಾತಕ್ಕೀಡಾದ ಕರಿ ಹೋರಿ ನಾಗಣಸೂರಿನ ಬಸವ ಎಂದೇ ಪೂಜಿಸುತ್ತಿದ್ದರು. ಅಪಘಾತದಲ್ಲಿ ಗಾಯಗೊಂಡಿದ್ದ ಹೋರಿ ಚಿಕಿತ್ಸೆಯಿಂದ ಗುಣಮುಖ ಹೊಂದಿ ಮರಳಿದರೆ ಗ್ರಾಮದಲ್ಲಿ ಭವ್ಯ ಮೆರವಣಿಗೆ ಮಾಡಬೇಕು ಎಂದು ನಿರ್ಧರಿಸಿದ್ದರ ಕುರಿತು ಮುಖ್ಯ ವೈದ್ಯರ ಮುಂದೆ ಕುಟುಂಬಸ್ಥರು ಹೇಳಿದ್ದರು. ಆದಾಗ್ಯೂ, ಅವರ ನಿರೀಕ್ಷೆ ಸಾಕಾರಗೊಳ್ಳಲಿಲ್ಲ. ಕೊನೆಗೂ ದಯಾಮರಣಕ್ಕೆ ಒಳಗಾದ ಬಸವನನ್ನು ನಂದಿಯಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಿದ್ದರಿಂದ ಪ್ರಚಂಡೆ ಕುಟುಂಬದಲ್ಲಿ ದು:ಖದ ಕಾರ್ಮೋಡ ಕವಿದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here