ಸುರಪುರ: ಬಿಸಿಯೂಟ ನೌಕರರ ಅನೇಕ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕ ಜನ ಬಿಸಿಯೂಟ ನೌಕರರು ಮಾರ್ಚ್ ತಿಂಗಳಿನಿಂದ ಇದುವರೆಗಿನ ವೇತನ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.ಅಲ್ಲದೆ ಕೊರಾನಾ ದಿಂದ ಬಿಸಿಯೂಟ ನೌಕರರು ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ,ಎಲ್ಲಾ ವರ್ಗಗಳಿಗೆ ಪರಿಹಾರ ನೀಡಿದ ಸರಕಾರ ಬಿಸಿಯೂಟ ನೌಕರರಿಗೂ ಪರಿಹಾರ ನೀಡಬೇಕೆಂದರು.
2020-21ರಲ್ಲಿ ಬಿಸಿಯೂಟ ಯೋಜನೆಗೆ 12,900 ಕೋಟಿ ಹಣ ಖರ್ಚಾಗಿದ್ದು 2021-22 ರಲ್ಲಿ 1400 ಕೋಟಿ ಬಜೆಟ್ ಕಡಿತಗೊಳಿಸಲಾಗಿದೆ.ಐಎಲ್ಒ ಮತ್ತು ಸಂವಿಧಾನ ಕೂಡ ಪ್ರತಿ ನಾಗರಿಕನ ಘನತೆಯ ಬದುಕನ್ನು ಎತ್ತಿ ಹಿಡಿಯಬೇಕೆಂದು ಹೇಳಿದೆ.ಆದರೆ ಬಿಸಿಯೂಟದ ನೌಕರರು ಇಂತಹ ಸೌಲಭ್ಯದಿಂದ ವಂಚಿತರಾಗಿದ್ದಾರೆ,ಆದ್ದರಿಂದ ಬಿಸಿಯೂಟ ನೌಕರರಿಗೆ ಸರಕಾರ ಕೇವಲ 600 ರೂಪಾಯಿಗಳಿಗೆ 18 ವರ್ಷಗಳಿಂದ ದುಡಿಸುತ್ತಿದೆ.ಇಂತಹ ಪರಸ್ಥಿತಿಯಲ್ಲಿ ಬಿಸಿಯೂಟ ನೌಕರರು ಜೀವನ ನಡೆಸುವುದು ಹೇಗೆ ಸಾಧ್ಯ.ಆದ್ದರಿಂದ ಬಿಸಿಯೂಟ ನೌಕರರ ಸಂಬಳ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಶಾಸಕ ನರಸಿಂಹ ನಾಯಕ (ರಾಜುಗೌಡ) ಹಾಗು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.ಸಿಐಟಿಯು ರಾಜ್ಯ ಉಪಾಧ್ಯಕ್ಷೆ ಸುರೇಖಾ ಕುಲಕರ್ಣಿ,ಬಿಸಿಯೂಟ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಶಹಾಜಾದಿಬೇಗಂ,ಖಜಾಂಚಿ ಸೌಭಾಗ್ಯ ಮಾಲಗತ್ತಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.